16ರಲ್ಲಿ 11 ಸ್ಥಾನ ಕಾಂಗ್ರೆಸ್  ಪಾಲು :  ಭರ್ಜರಿ ಗೆಲುವು  ಒಟ್ಟು 16 ಮಂದಿ ಸದಸ್ಯರಲ್ಲಿ 11 ಮಂದಿ ಕಾಂಗ್ರೆಸ್‌  ಬೆಂಬಲಿತರ ಗೆಲುವು

ಮಾಗಡಿ (ಜ.02) : ತಗ್ಗಿಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ವಿಜೇತರಾದ 11 ಮಂದಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರನ್ನು ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ ಅಭಿನಂದಿಸಿದರು.

ತಾಲೂಕಿನ ತಗ್ಗಿಕುಪ್ಪೆ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಬೆಂಬಲಿತ 10 ಮಂದಿ ಸದಸ್ಯರು ಮತ್ತು ಬೈಚಾಪುರ ಗ್ರಾಮದ ತೋಟದ ಮನೆ ಬೈರಪ್ಪ ಸೇರಿದಂತೆ 11 ಮಂದಿ ಸದಸ್ಯರು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ತಗ್ಗಿಕುಪ್ಪೆ ಗ್ರಾಮ ಪಂಚಾಯ್ತಿಯ ಒಟ್ಟು 16 ಮಂದಿ ಸದಸ್ಯರಲ್ಲಿ 11 ಮಂದಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ​ಯಾ​ಗಿ​ದ್ದಾರೆ. ಅಧ್ಯಕ್ಷ ಸ್ಥಾನ ಬಿಸಿಎಂ -ಎ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸ​ಲಾ​ಗಿದೆ. ಸಂಸದ ಡಿ.ಕೆ.ಸುರೇಶ್‌ (DK Suresh) , ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ, ಮಾಜಿ ಸಚಿವ ಎಚ್‌.ಎಂ.ರೇವಣ್ಣ ಅವರ ಮಾರ್ಗದರ್ಶನದಲ್ಲಿ ಒಮ್ಮತದ ಅಭ್ಯರ್ಥಿಯನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಯ ಪರ್ವ ಪ್ರಾರಂಭಿಸಲಾಗುವುದು ಎಂದು ಹೇಳಿ​ದ​ರು.

ಬ್ಲಾಕ್‌ ಕಾಂಗ್ರೆಸ್‌ (Congress) ಅಧ್ಯಕ್ಷ ವಿಜಯ ಕುಮಾರ್‌ ಮಾತನಾಡಿ, ತಗ್ಗಿಕುಪ್ಪೆ ಗ್ರಾಪಂ ವ್ಯಾಪ್ತಿಯ ಜೋಗಿಪಾಳ್ಯ ಗ್ರಾಮದಿಂದ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಗೌರಮ್ಮ ಅವ​ರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು ಎಂದರು.

ಗ್ರಾಪಂನ ಕಾಂಗ್ರೆಸ್‌ ಬೆಂಬ​ಲಿತ ಸದಸ್ಯರಾದ ಜ್ಯೋಗಿಪಾಳ್ಯ ಬ್ಯಾಟಮ್ಮ, ಹೊಸಹಳ್ಳಿ ರಮೇಶ್‌, ಬ್ಯಾಲಕೆರೆ ರಾಮುಸಿಂಗ್‌, ಬೈಚಾಪುರ ಮುರುಳಿಧರ್‌, ಹೊಸಹಳ್ಳಿ ಸಿ.ಮೋಹನ್‌ ಕುಮಾರ್‌, ಜೋಗಿಪಾಳ್ಯ ಗೌರಮ್ಮ, ನಾಗಶೆಟ್ಟಹಳ್ಳಿ ಶಂಕರ್‌, ಮದಲಾರಯ್ಯನಪಾಳ್ಯ ರಾಜಣ್ಣ, ಬ್ಯಾಲಕೆರೆ ತೇಜಶ್ವಿನಿ, ಬ್ಯಾಲಕೆರೆ ಹರೀಶ್‌ ಕುಮಾರ್‌, ಎಪಿಎಂಸಿ ಜಿಲ್ಲಾಧ್ಯಕ್ಷ ಸಿಎಂ.ಮಾರೇಗೌಡ, ತಾಪಂ ಮಾಜಿ ಸದಸ್ಯೆ ರತ್ನಮ್ಮ ಶ್ರೀನಿವಾಸ್‌, ಶಿವಲಿಂಗೇಗೌಡ, ವೀರಶೈವ ಬ್ಯಾಂಕ್‌ ನಿರ್ದೆಶಕ ಶಿವರಾಜು, ವಿಎಸ್‌ಎಸ್‌ಎನ್‌ ಮಾಜಿ ನಿರ್ದೇಶಕ ಹೂಜಗಲ್ಲು ಅರುಣ, ಜಯರಾಮು, ರಾಜಣ್ಣ, ಕೃಷ್ಣ ಇದ್ದರು.

ಕೈ ಮುಂದೆ ಕಮಲ ಹಿಂದೆ : ರಾಜ್ಯದ 20 ಜಿಲ್ಲೆಗಳಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ(Local Body Elections) ಅಧಿಕಾರಾರೂಢ ಬಿಜೆಪಿಗೆ(BJP) ಹಿನ್ನಡೆ ಉಂಟಾಗಿದ್ದು, ಪ್ರತಿಪಕ್ಷ ಕಾಂಗ್ರೆಸ್‌(Congress) ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಮೂಡಿದೆ. ಇನ್ನು, ಜೆಡಿಎಸ್‌(JDS) ಹೀನಾಯವಾಗಿ ಸೋಲು ಕಂಡಿದ್ದು, ಪಕ್ಷೇತರರು ಪ್ರಾಬಲ್ಯ ಮೆರೆದಿದ್ದಾರೆ.

34 ಪಟ್ಟಣ ಪಂಚಾಯಿತಿ, 19 ಪುರಸಭೆ ಮತ್ತು 5 ನಗರಸಭೆಯ 1185 ವಾರ್ಡ್‌ಗಳಿಗೆ ನಡೆದ ಚುನಾವಣೆ ಪೈಕಿ 1184 ವಾರ್ಡ್‌ಗಳ ಫಲಿತಾಂಶ ಗುರುವಾರ ಹೊರಬಿದ್ದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಒಂದು ವಾರ್ಡ್‌ನಲ್ಲಿ ಅಭ್ಯರ್ಥಿಯೊಬ್ಬರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಚುನಾವಣೆ ಕೈಬಿಡಲಾಗಿದೆ. ಈ ಪೈಕಿ ಕಾಂಗ್ರೆಸ್‌ 501 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 433 ವಾರ್ಡ್‌ಗಳಲ್ಲಿ ಜಯ ಗಳಿಸಿದೆ. ಮೂರನೇ ಶಕ್ತಿಯಾಗಿ ಪಕ್ಷೇತರರು ಹೊರಹೊಮ್ಮಿದ್ದು, 195 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್‌ ನಾಲ್ಕನೆ ಸ್ಥಾನಕ್ಕೆ ಕುಸಿದಿದ್ದು, 45 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.

ಸಿಎಂ ತವರಲ್ಲಿ ಬಿಜೆಪಿಗೆ ಹಿನ್ನಡೆ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommain) ಅವರ ತವರು ಜಿಲ್ಲೆಯಾದ ಹಾವೇರಿಯಲ್ಲಿ(Haveri) ಒಂದು ಪುರಸಭೆ ಮತ್ತು ಒಂದು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಮೇಲುಗೈಯಾಗಿದೆ. ಬಂಕಾಪುರ ಪುರಸಭೆಯಲ್ಲಿ ಕಾಂಗ್ರೆಸ್‌ 14 ವಾರ್ಡ್‌ಗಳಲ್ಲಿ ಜಯ ಗಳಿಸಿದರೆ, ಬಿಜೆಪಿ ಕೇವಲ 7 ಸ್ಥಾನ ಪಡೆದುಕೊಂಡಿದೆ. ಅಂತೆಯೇ ಗುತ್ತಲ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ 11 ಮತ್ತು ಬಿಜೆಪಿ 6 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಇದು ಮುಖ್ಯಮಂತ್ರಿಗೆ ಆದ ಹಿನ್ನಡೆ ಎಂಬ ಮಾತುಗಳು ಕೇಳಿಬಂದಿವೆ.

ಕಾಂಗ್ರೆಸ್‌ಗೆ 28, ಬಿಜೆಪಿಗೆ 14 ಕಡೆ ಅಧಿಕಾರ:

58 ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆದ್ದು ಬೀಗುತ್ತಿರುವ ಕಾಂಗ್ರೆಸ್‌ 28 ಕಡೆ, ಬಿಜೆಪಿ 14 ಮತ್ತು ಜೆಡಿಎಸ್‌ ಒಂದು ಕಡೆ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ. 9 ಕಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, 6 ಕಡೆ ಪಕ್ಷೇತರರು ಅತ್ಯಧಿಕ ಮತಗಳನ್ನು ಪಡೆದು ಮುಂಚೂಣಿಯಲ್ಲಿದ್ದಾರೆ. ಪಕ್ಷೇತರರು ಗೆಲುವು ಸಾಧಿಸಿರುವ ವಾರ್ಡ್‌ಗಳಲ್ಲಿ ಬಿಜೆಪಿಯು ಪಕ್ಷೇತರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಗದ್ದುಗೆ ಹಿಡಿಯುವ ಪ್ರಯತ್ನ ನಡೆಸಿದೆ. ಹೀಗಾಗಿ ಮೂರನೇ ಶಕ್ತಿಯಾಗಿ ಹೊರಹೊಮ್ಮಿರುವ ಪಕ್ಷೇತರರಿಗೆ ಗಾಳ ಹಾಕಲು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ.

195 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿರುವ ಪಕ್ಷೇತರರ ಪೈಕಿ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿಯಲ್ಲಿನ 14 ವಾರ್ಡ್‌ಗಳಲ್ಲಿ ಎಲ್ಲವೂ ಪಕ್ಷೇತರರ ಪಾಲಾಗಿವೆ. ಇನ್ನು, ಮೂಡಲಗಿ ತಾಲೂಕಿನ ನಾಗನೂರ ಪಟ್ಟಣ ಪಂಚಾಯಿತಿಯ 17 ವಾರ್ಡ್‌ಗಳಲ್ಲಿ ಜಯಗಳಿಸಿದವರೆಲ್ಲರೂ ಪಕ್ಷೇತರರಾಗಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಒಂದೂ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗದಿರುವುದು ಆಶ್ಚರ್ಯವನ್ನುಂಟು ಮಾಡಿದೆ.