ಇಷ್ಟು ದಿನಗಳ‌ ಕಾಲ ಪರೇಶ್ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದ ಬಿಜೆಪಿ ನಾಯಕರು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್ ಮುಖಂಡರು

ವರದಿ: ಭರತ್‌ ರಾಜ್ ಕಲ್ಲಡ್ಕ‌, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

Add Asianetnews Kannada as a Preferred SourcegooglePreferred

ಕಾರವಾರ(ಅ.05): ಪರೇಶ್ ಮೇಸ್ತಾ ಪ್ರಕರಣಕ್ಕೆ ಸಿಬಿಐ "ಬಿ" ರಿಪೋರ್ಟ್ ಹಾಕುತ್ತಿದ್ದಂತೇ ಉತ್ತರಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ರಂಗೇರತೊಡಗಿದೆ. ಪರೇಶ್ ಮೇಸ್ತಾ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆಂದು ಹೇಳಲಾಗಿದ್ರೂ, ಅನ್ಯ ಕೋಮಿನವರೇ ಕೊಲೆ ಮಾಡಿದ್ದಾರೆಂದು ಬಿಜೆಪಿ ನಾಯಕರು ಆರೋಪ ಮಾಡಿದ್ದರು. ಇದು ಜಿಲ್ಲೆಯಲ್ಲಿ ಗಲಭೆಗೂ ಕಾರಣವಾಗಿತ್ತು. ಇಷ್ಟು ದಿನಗಳ‌ ಕಾಲ ಪರೇಶ್ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದ ಬಿಜೆಪಿ ನಾಯಕರು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. 

ಹೌದು, ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಿಬಿಐ "ಬಿ" ರಿಪೋರ್ಟ್ ಹಾಕಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ 2017ರ ಡಿಸೆಂಬರ್ 6ರಂದು ನಡೆದ ಕೋಮಗಲಭೆಯಲ್ಲಿ ನಾಪತ್ತೆಯಾಗಿದ್ದ ಪರೇಶ್ ಮೇಸ್ತಾ ಎಂಬ ಮೀನುಗಾರ ಯುವಕ ಎರಡು ದಿನಗಳ ನಂತರ ಪಟ್ಟಣದ ಶೆಟ್ಟಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಅನ್ಯ ಕೋಮಿನವರೇ ಪರೇಶ್ ಮೇಸ್ತಾನನ್ನು ಕೊಲೆ ಮಾಡಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಬಿಜೆಪಿ ನಾಯಕರುಗಳು ಆರೋಪಿಸಿದ್ದರು. ಇದೀಗ ಪ್ರಕರಣದ ತನಿಖೆ ನಡೆಸಿದ ಸಿಬಿಐ ಬಿ ರಿಪೋರ್ಟ್ ಹಾಕಿದೆ. ಆದಾಗಿಯೂ ಬಿಜೆಪಿಯ ಕೆಲವು ನಾಯಕರು ಮರು ತನಿಖೆ ನಡೆಸಲು ಆಗ್ರಹಿಸುತ್ತಿದ್ದು ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಸಿಬಿಐ ಮೇಲೆ ವಿಶ್ವಾಸವಿಲ್ಲ ಎಂದು ಸರ್ಕಾರವೇ ಮರು ತನಿಖೆಗೆ ಆದೇಶ ಮಾಡಲಿ. ಇಲ್ಲದಿದ್ದೇ ಜನ ಪ್ರತಿನಿಧಿಗಳೇ ನೀಡಲಿ. ಬಿಜೆಪಿಯವರು ಮಾಡದಿದ್ರೆ, ಕಾಂಗ್ರೆಸ್ ಪರೇಶ್ ಮೇಸ್ತಾ ಕುಟುಂಬದ ಸಹಾಯಕ್ಕೆ ನಿಲ್ಲುತ್ತದೆ. ಜನರಲ್ಲಿ ಗೊಂದಲ ಮೂಡಿಸಿದ್ದ ಬಿಜೆಪಿ ಮುಖಂಡರು ಇನ್ನಾದರೂ ಸುಮ್ಮನಾಗಿ, ಜಿಲ್ಲೆಯ ಹಾಗೂ ರಾಜ್ಯದ ಜನರ ಕ್ಷಮೆ ಕೇಳಲಿ ಎಂದು ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಂತ ಮಾಜಿ ಶಾಸಕ ಸತೀಶ್ ಸೈಲ್ ತಿಳಿಸಿದ್ದಾರೆ. 

ಪರೇಶ್ ಮೇಸ್ತಾ ಸಾವು ಪ್ರಕರಣ: ಸಿಬಿಐ "ಬಿ" ರಿಪೋರ್ಟ್ ಸಲ್ಲಿಕೆ, ಬಿಜೆಪಿ ಪಾಲಿನ ಅಸ್ತ್ರ ಇದೀಗ ಕಾಂಗ್ರೆಸ್ ಕೈಗೆ..!

ಇನ್ನು ಪರೇಶ್ ಮೇಸ್ತಾ ಸಾವಿನ ನಂತರ ಜಿಲ್ಲೆಯ ಕುಮಟಾ, ಹೊನ್ನಾವರ, ಕಾರವಾರ, ಶಿರಸಿಯಲ್ಲಿ ಗಲಭೆಗಳಾಗಿದ್ದವು. ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ಗಲಭೆಯಲ್ಲಿ ಹಾನಿಯಾಗಿತ್ತು. ಅಂದಿನ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಳ್ಕರ್ ಅವರ ಕಾರನ್ನು ಕೂಡಾ ಸುಡಲಾಗಿತ್ತು. ಪರೇಶ್ ಮೇಸ್ತಾನನ್ನು ಅನ್ಯ ಕೋಮಿನವರೇ ಕೊಲೆ ಮಾಡಿದ್ದಾರೆಂದು ಜನರ ತಲೆಗೆ ತುಂಬಿ ಬಿಜೆಪಿಗರು, ಈ ಗಲಭೆಗೆ ಬಿಜೆಪಿಗರು ಕಾರಣರಾಗಿದ್ದರು ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಶಾಂತಿಯುತ ಜಿಲ್ಲೆಯಲ್ಲಿ ಗಲಭೆ ಎಬ್ಬಿಸಿದ್ದಕ್ಕೆ ಬಿಜೆಪಿಗರು ಕ್ಷಮೆ ಕೇಳಬೇಕು. ಅಲ್ಲದೇ, ಗಲಭೆಯಿಂದ ಹಲವರ ಆಸ್ತಿ ಪಾಸ್ತಿ ಹಾನಿಯಾಗಿದ್ದು, ಅವರಿಗೆ ಈಗಲಾದರೂ ಪರಿಹಾರ ಕೊಡಲಿ ಎಂದು ಕೈ ನಾಯಕರು ಒತ್ತಾಯಿಸಿದ್ದಾರೆ ಅಂತ ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಹೇಳಿದ್ದಾರೆ. 

ಕಳೆದ ಬಾರಿ ಚುನಾವಣೆಯಲ್ಲಿ ಪರೇಶ್ ಮೇಸ್ತಾ ಪ್ರಕರಣ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನೆಡೆಯಾಗಿತ್ತು. ಕರಾವಳಿಯ ಒಂದು ಕ್ಷೇತ್ರ ಹೊರತು ಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಈ ಕಾರಣದಿಂದ ಇದೀಗ ಕಾಂಗ್ರೆಸ್ ಪರೇಶ್ ಮೇಸ್ತಾ ಪ್ರಕರಣದ ಬಿ ರಿಪೋರ್ಟನ್ನ ಅಸ್ತ್ರವಾಗಿಟ್ಟುಕೊಂಡು ಈ ಬಾರಿಯ ಚುನಾವಣೆ ಎದುರಿಸಲು ಸಜ್ಜಾಗಿದ್ದು, ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾದು ನೋಡಬೇಕಷ್ಟೇ.