Asianet Suvarna News Asianet Suvarna News

ಧಾರವಾಡ ಹೊರಗಿದ್ದು ವಿನಯ ಕುಲಕರ್ಣಿಗೆ ಕ್ಷೇತ್ರದ ಅಭಿವೃದ್ಧಿ ಸವಾಲು..!

ಧಾರವಾಡ ನಗರದ ಎಂಟು ವಾರ್ಡ್‌ಗಳು ಸೇರಿದಂತೆ ಧಾರವಾಡ ತಾಲೂಕು ವ್ಯಾಪ್ತಿ ಹೊಂದಿರುವ ಧಾರವಾಡ ಕ್ಷೇತ್ರ ತಕ್ಕಮಟ್ಟಿಗೆ ಅಭಿವೃದ್ಧಿ ಸಾಧಿಸಿದರೂ ಇನ್ನೂ ಅನೇಕ ಸವಾಲುಗಳು 3ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿನಯ ಕುಲಕರ್ಣಿಗೆ ಇವೆ. 

Congress MLA Vinay Kulkarni Faces Challenges in Development of Dharwad grg
Author
First Published May 25, 2023, 3:30 AM IST

ಬಸವರಾಜ ಹಿರೇಮಠ

ಧಾರವಾಡ(ಮೇ.25): ಕ್ಷೇತ್ರದ ಶಾಸಕರು ಸ್ಥಳೀಯವಾಗಿದ್ದು, ನಿರಂತರವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದರೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ಬೆನ್ನು ತಟ್ಟಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಕಷ್ಟಸಾಧ್ಯ. ಇಂತಹ ಸ್ಥಿತಿಯಲ್ಲಿ ವಿನಯ ಕುಲಕರ್ಣಿ ಅವರು ಕ್ಷೇತ್ರದ ಹೊರಗಿದ್ದು ಎಷ್ಟರ ಮಟ್ಟಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆ?

ಧಾರವಾಡ ನಗರದ ಎಂಟು ವಾರ್ಡ್‌ಗಳು ಸೇರಿದಂತೆ ಧಾರವಾಡ ತಾಲೂಕು ವ್ಯಾಪ್ತಿ ಹೊಂದಿರುವ ಧಾರವಾಡ ಕ್ಷೇತ್ರ ತಕ್ಕಮಟ್ಟಿಗೆ ಅಭಿವೃದ್ಧಿ ಸಾಧಿಸಿದರೂ ಇನ್ನೂ ಅನೇಕ ಸವಾಲುಗಳು 3ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿನಯ ಕುಲಕರ್ಣಿಗೆ ಇವೆ. ನ್ಯಾಯಾಲಯದ ಆದೇಶದಂತೆ ಕ್ಷೇತ್ರದ ಶಾಸಕರು ಕಳೆದ ಮೂರು ವರ್ಷಗಳಿಂದ ಕ್ಷೇತ್ರ ಪ್ರವೇಶಿಸಿಲ್ಲ. ಬಿಜೆಪಿ ಆಡಳಿತದ ವಿರೋಧ ಅಲೆ ಹಾಗೂ ವಿನಯ ಮೇಲಿನ ಅನುಕಂಪದ ಆಧಾರದ ಮೇಲೆ 18 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬಂದಿದ್ದಾರೆ. ಇದೀಗ ಕ್ಷೇತ್ರ ಪ್ರವೇಶಿಸದೇ ಅವರ ಪರವಾಗಿ ಇನ್ನೊಬ್ಬರ ಆಡಳಿತದ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

UPSC RESULTS: ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದ ಸೌರಭ್‌ ಬಿಚ್ಚಿಟ್ಟ ಯಶಸ್ಸಿನ ಸೂತ್ರ!

ಹಳ್ಳಗಳ ಸುಧಾರಣೆ:

ಧಾರವಾಡ ತಾಲೂಕು ಪೂರ್ತಿ ಮಳೆ ಆಶ್ರಿತ ಪ್ರದೇಶ. ಇಲ್ಲಿ ಹರಿಯುತ್ತಿರುವ ತುಪ್ಪರಿ ಹಳ್ಳದ ನೀರು ಬಳಸಿಕೊಂಡು ನೀರಾವರಿ ಮಾಡುವುದು ಈ ಮೊದಲಿನ ಯೋಜನೆಯಾಗಿತ್ತು. ಅಲ್ಲದೇ, ಬಿಜೆಪಿ ಸರ್ಕಾರ ಅನುದಾನ ಸಹ ಬಿಡುಗಡೆ ಮಾಡಿದೆ. ಇನ್ನೇನು ಕಾಮಗಾರಿ ಆರಂಭವಾಗಬೇಕಿತ್ತು. ಅಷ್ಟರಲ್ಲಿ ಸರ್ಕಾರ ಬದಲಾಗಿದೆ. ಈ ಯೋಜನೆಗೆ ಮರು ಜೀವ ನೀಡಿ ಕಾಮಗಾರಿ ಆರಂಭಿಸುವ ಮೂಲಕ ಹಳ್ಳದ ವ್ಯಾಪ್ತಿ ಹಳ್ಳಿಗಳಿಗೆ ಅತಿವೃಷ್ಟಿಸಂಕಟ ತಪ್ಪಿಸಿ ಬೇಸಿಗೆಯಲ್ಲಿ ನೀರಾವರಿಗೆ ಅನುಕೂಲ ಮಾಡಿಕೊಡುವ ಮಹತ್ವದ ಜವಾಬ್ದಾರಿ ವಿನಯ ಮೇಲಿದೆ. ಇದಲ್ಲದೇ, ಧಾರವಾಡ ತಾಲೂಕಿನಲ್ಲಿ ಹತ್ತಾರು ಹಳ್ಳಗಳಿವೆ. ಬಹುತೇಕ ಎಲ್ಲ ಹಳ್ಳಗಳು ಹೂಳು ತುಂಬಿವೆ. ತುಸು ಮಳೆಯಾದರೂ ತುಂಬಿ ಹರಿದು ಮಳೆ ನೀರು ಹೊಲಗಳಿಗೆ ನುಗ್ಗಿ ಬೆಳೆ ನಾಶವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳ್ಳಗಳ ಹೂಳು ತೆಗೆಯುವ ಕಾರ್ಯ ಮಾಡಬೇಕಿದೆ ಎಂದು ನರೇಂದ್ರ-ಯಾದವಾಡ ರೈತರು ಆಗ್ರಹಿಸುತ್ತಾರೆ.

ಗ್ರಾಮೀಣ ಭಾಗದಲ್ಲಿ ಕೆರೆ ಕಟ್ಟೆಗಳಿವೆ. ಹಳ್ಳ-ಕೊಳ್ಳಗಳಿವೆ. ಅವುಗಳನ್ನು ದಾಟಿ ಮುಂದೆ ರೈತರು ತಮ್ಮ ಹೊಲಗಳಿಗೆ ಹೋಗಿ-ಬರುತ್ತಾರೆ. ಬಹುತೇಕ ಕಡೆಗಳಲ್ಲಿ ಸೇತುವೆಗಳಿಲ್ಲದೇ ಪರದಾಡುವ ಸ್ಥಿತಿ ಇದೆ. ಬೆಳೆದ ಬೆಳೆಗಳನ್ನು ಹೊಲಗಳಿಂದ ಮನೆಗೆ ತರಲು ತುಂಬ ಕಷ್ಟಪಡಬೇಕಾಗಿದೆ. ಸೇತುವೆ ಸೇರಿದಂತೆ ಹೊಲಗಳ ರಸ್ತೆಗಳ ಬೇಡಿಕೆಯೂ ಇದೆ. ಬಹುತೇಕ ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲಾಗಿದೆ. ಆದರೆ, ಸರಿಯಾದ ನಿರ್ವಹಣೆ ಕೊರತೆಯಿಂದ ಕೆಲವು ಸ್ಥಗಿತಗೊಂಡಿವೆ. ಕೂಡಲೇ ಅವುಗಳನ್ನು ಮರು ಪರಿಶೀಲಿಸುವ ಅಗತ್ಯತೆ ಇದೆ. ಇನ್ನು, ಜಲಜೀವನ ಯೋಜನೆ ಅಡಿ ಪ್ರತಿ ಮನೆಗೂ ನಳ ಸಂಪರ್ಕ ನೀಡಲಾಗಿದೆ. ಆದರೆ, ನೀರು ಮಾತ್ರ ಬಂದಿಲ್ಲ. ಮಲಪ್ರಭಾ ನೀರಿನ ಸಂಪರ್ಕ ಎಲ್ಲ ಹಳ್ಳಿಗಳಿಗೆ ಮಾಡುವ ಮೂಲಕ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಬವಣೆ ತೀರಿಸುವ ಸವಾಲೂ ವಿನಯಗೆ ಇದೆ.

ಅವ್ಯವಸ್ಥೆ ಆಗರ

ರೈತರು ಬೆಳೆದ ಬೆಳೆಗಳನ್ನು ತಂದು ಮಾರಾಟ ಮಾಡುವ ಕೃಷಿ ಉತ್ಪನ್ನ ಮಾರುಕಟ್ಟೆಸ್ಥಿತಿ ಅಧೋಗತಿಗೆ ಹೋಗಿದೆ. ಇಲ್ಲಿ ಆಡಳಿತ ವ್ಯವಸ್ಥೆ ಇದ್ದರೂ ಪ್ರಯೋಜನವಿಲ್ಲ. ಸರಿಯಾದ ಖರೀದಿ ಕೇಂದ್ರಗಳಿಲ್ಲ, ರೈತರಿಗೆ ವಸತಿ ವ್ಯವಸ್ಥೆ ಇಲ್ಲ. ಕುಡಿಯುವ ನೀರು, ಶೌಚಾಲಯಗಳಿಲ್ಲ. ಸಾಕಷ್ಟುಬಾರಿ ರೈತರಿಗೆ ತೂಕದಲ್ಲಿ ಮೋಸವಾಗುತ್ತಿದೆ. ಯಾರೂ ಪ್ರಶ್ನಿಸುತ್ತಿಲ್ಲ. ಹಾಗೆಯೇ, ಕ್ಷೇತ್ರದ ಎಂಟು ವಾರ್ಡ್‌ಗಳಲ್ಲಿ ಕುಡಿಯುವ ನೀರು, ಒಳಚರಂಡಿ ಅಂತಹ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆಯೂ ನಿಗಾ ಇಡಬೇಕಿದೆ. ಇದರೊಂದಿಗೆ ಕೆಲವು ಗ್ರಾಮೀಣ ರಸ್ತೆಗಳಾಗಬೇಕಿದೆ. ಜೊತೆಗೆ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳಿಗೆ ವೇಗ ಸಿಗಬೇಕಿದ್ದು, ಕ್ಷೇತ್ರ ಸಂಚರಿಸಿ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕೊಡುವ ಕಾರ‍್ಯ ನೂತನ ಶಾಸಕರಿಂದ ಆಗಬೇಕು ಎಂಬುದು ಕ್ಷೇತ್ರದ ಜನರ ಆಶಯ.

Hubballi Water Scarcity: ಹುಬ್ಬಳ್ಳಿ ಧಾರವಾಡದಲ್ಲಿ ಕುಡಿಯುವ ನೀರಿಗಾಗಿ ಪರದಾಟ!

ಪ್ರಸ್ತುತ ನಮ್ಮದೇ ಸರ್ಕಾರ ಆಡಳಿತದಲ್ಲಿದೆ. ಹೀಗಾಗಿ ನಾನು ಕ್ಷೇತ್ರ ಪ್ರವೇಶಿಸದೇ ಇದ್ದರೂ ಪತ್ನಿ ಶಿವಲೀಲಾ ಹಾಗೂ ಪಕ್ಷದ ಮುಖಂಡರ ಸಹಕಾರದಿಂದ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ. ಈಗ ಎಲ್ಲವೂ ಡಿಜಿಟಲ್‌ ಕಾಲ. ಅದನ್ನು ಬಳಸಿ ಕ್ಷೇತ್ರದ ಸಮಸ್ಯೆ ಆಲಿಸಿ ಅವುಗಳಿಗೆ ಶೀಘ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ವಿನಯ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕಸ ವಿಲೇವಾರಿ ಆಗಲಿ

ಧಾರವಾಡ ಕ್ಷೇತ್ರದ ಪ್ರತಿ ಗ್ರಾಮಗಳ ಹೊರ ವಲಯದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿನ ಘನತಾಜ್ಯ ನಿರ್ವಹಣೆ ಆಗದ ಹಿನ್ನೆಲೆಯಲ್ಲಿ ಊರಿನ ಹೊರ ವಲಯದ ರಸ್ತೆ ಬದಿ, ಹಳ್ಳದ ದಂಡೆಯಲ್ಲಿ ಕಸ ಚೆಲ್ಲುವುದು ಸಾಮಾನ್ಯವಾಗಿದೆ. ಜೊತೆಗೆ ಕಸಕ್ಕೆ ಬೆಂಕಿ ಹಚ್ಚುವುದು ನಡೆಯುತ್ತಿದ್ದು ಇದರಿಂದ ಪರಿಸರಕ್ಕೂ ಮಾರಕವಾಗಿದೆ. ಅಮ್ಮಿನಬಾವಿ, ಮರೇವಾಡ, ಕವಲಗೇರಿ, ಸೋಮಾಪೂರ, ಕ್ಯಾರಕೊಪ್ಪ ಅಂತಹ ಊರುಗಳಲ್ಲಿ ಕಸ ನಿರ್ವಹಣೆಯಾಗಬೇಕಿದೆ ಎಂಬುದ ಜನರ ಆಗ್ರಹ. 

Follow Us:
Download App:
  • android
  • ios