ರಾಜ್ಯದಲ್ಲಿ 132 ಸ್ಥಾನಗಳನ್ನು ಪಡೆದುಕೊಂಡು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸಹಿಸಿಕೊಳ್ಳಲಾಗುತ್ತಿಲ್ಲ. ಪ್ರತಿದಿನ ಏನಾದರೂ ಒಂದು ವಿಚಾರದಲ್ಲಿ ಟೀಕೆ ಮಾಡುವುದೇ ಅವರ ಕೆಲಸ: ಶಾಸಕ ಶರತ್ ಬಚ್ಚೇಗೌಡ 

ಹೊಸಕೋಟೆ(ಜ.04): ರಾಜ್ಯದಲ್ಲಿ ಕಾಲಕಾಲಕ್ಕೆ ಬಸ್‌ ಟಿಕೆಟ್ ದರ ಪರಿಷ್ಕರಣೆ ಮಾಡುವುದು ವಾಡಿಕೆ. ಆದರೆ ವಿನಾಕಾರಣ ಬಿಜೆಪಿಯವರು ಟೀಕೆ ಮಾಡುತ್ತಿದ್ದು, ಕೇಂದ್ರದಿಂದ ಅವರು ಇಂಧನದ ಬೆಲೆ ಕಡಿಮೆ ಮಾಡಿಸಿದರೆ ನಾವು ಟಿಕೆಟ್ ದರ ಇಳಿಸುತ್ತೇವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 132 ಸ್ಥಾನಗಳನ್ನು ಪಡೆದುಕೊಂಡು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸಹಿಸಿಕೊಳ್ಳಲಾಗುತ್ತಿಲ್ಲ. ಪ್ರತಿದಿನ ಏನಾದರೂ ಒಂದು ವಿಚಾರದಲ್ಲಿ ಟೀಕೆ ಮಾಡುವುದೇ ಅವರ ಕೆಲಸ. ಪ್ರಮುಖವಾಗಿ ರಾಜ್ಯದ ಮೂರು ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಶಕ್ತಿ ಯೋಜನೆ ಕಲ್ಪಿಸಿದ್ದು ಇದರ ನಡುವೆ ಬಸ್‌ ಪ್ರಯಾಣ ದರ ಏರಿಕೆ ಮಾಡುತ್ತಿರುವುದನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹೇಳಿ ಬಿಜೆಪಿಯವರು ಇಂಧನ ಬೆಲೆ ಕಡಿಮೆ ಮಾಡಿಸಿದರೆ ನಾವು ರಾಜ್ಯದಲ್ಲಿ ಬಸ್‌ ಪ್ರಯಾಣ ದರ ಇಳಿಕೆ ಮಾಡಲು ಸಾಧ್ಯ. ಮೊದಲು ಬಿಜೆಪಿಯವರು ಅದನ್ನ ಮಾಡಲಿ ಎಂದು ಸವಾಲು ಹಾಕಿದರು.

ಬಡವನ ಬೆನ್ನ ಮೇಲೆ ಸರ್ಕಾರದ ಅಂಬಾರಿ, ರಾಜ್ಯದಲ್ಲಿ ಖಾಸಗಿ ಬಸ್‌ಗಿಂತ ಕೆಎಸ್‌ಆರ್‌ಟಿಸಿಯೇ ದುಬಾರಿ!

ಸಿಎಂ ಬದಲಾವಣೆ ಚರ್ಚೆ ಇಲ್ಲ:

ಹೊಸ ವರ್ಷದ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಔತಣಕೂಟ ಮಾಡಿದ್ದಾರೆ. ಅದಕ್ಕಾಗಿಯೇ ವಿನಾಕಾರಣ ಸಿಎಂ ಬದಲಾವಣೆ ಚರ್ಚೆ ಎಂದು ಬಿಂಬಿಸಲು ಹೊರಟಿರುವುದು ಸರಿಯಲ್ಲ. ರಾಜ್ಯದಲ್ಲಿ ಪ್ರಸ್ತುತ ಸಿಎಂ ಬದಲಾವಣೆಯ ಚರ್ಚೆ ಎಲ್ಲೂ ನಡೆದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಸಚಿವ ಸತೀಶ್ ಜಾರಕಿಹೊಳಿ ಮನೆಗೆ ಸಿಎಂ ಭೇಟಿಯ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಬಿಜೆಪಿ ಗಾಂಧಿಗಿರಿ

ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷ ಬಿಜೆಪಿ 'ಗಾಂಧಿಗಿರಿ' ನಡೆಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಶುಕ್ರವಾರ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮುಖವಾಡ ಧರಿಸಿ, ಗುಲಾಬಿ ಹೂವು ನೀಡಿ ಜನರಲ್ಲಿ ಕ್ಷಮೆ ಕೇಳುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ಮೂಲಕ ಬಸ್ ಟಿಕೆಟ್ ದರ ಏರಿಕೆ ಖಂಡಿಸಿದರು. 

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ರವಿಕುಮಾರ್ ಸೇರಿ ಹಲವು ನಾಯಕರು, ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಜ.5ರಿಂದ ಹೊಸ ದರ ಅನ್ವಯ; ಮೈಸೂರು, ಬಳ್ಳಾರಿ, ಶಿವಮೊಗ್ಗಕ್ಕೆ ಪರಿಷ್ಕೃತ ದರ ಇಲ್ಲಿದೆ ನೋಡಿ!

ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿ ಇತರರು ಬಸ್‌ನಲ್ಲಿ ಕುಳಿತಿದ್ದ ಪ್ರಯಾಣಿಕರ ಬಳಿ ಹೋಗಿ 'ಕಾಂಗ್ರೆಸ್ ಸರ್ಕಾರ ಬೆಲೆ ಹೆಚ್ಚಳ ಮಾಡುವುದಿಲ್ಲ ಎಂದು ಮತ ನೀಡಿದ್ದೀರಿ. ಆದರೆ, ಮಾತಿಗೆ ತಪ್ಪಿದ ಸರ್ಕಾರ ಹೊಸ ವರ್ಷಕ್ಕೆ ಟಿಕೆಟ್ ದರ ಹೆಚ್ಚಳ ಮಾಡಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕ್ಷಮೆ ಕೇಳುತ್ತಿದ್ದೇವೆ' ಎಂದು ಹೇಳಿ ಗುಲಾಬಿ ಹೂವು ನೀಡಿದರು. 

ಮಾತನಾಡಿದ ಆ‌ರ್.ಅಶೋಕ್, ರಾಜ್ಯದ ಏಳು ಕೋಟಿ ಜನ ಹೊಸ ವರ್ಷದ ಉಡುಗೊರೆಗಾಗಿ ಕಾಯುತ್ತಿದ್ದರು. ಪ್ರಧಾನಿ ಮೋದಿ ಅವರು ಹೊಸ ವರ್ಷಕ್ಕೆ ರೈತರಿಗೆ ಯೋಜನೆಗಳನ್ನು ನೀಡುವ ಮೂಲಕ ನಿಜವಾದ ಕೊಡುಗೆ ಕೊಟ್ಟಿದ್ದಾರೆ. ಆದರೆ, ದಿ ಗ್ರೇಟ್ 14 ಬಜೆಟ್ ಚಾಂಪಿಯನ್ ಸಿದ್ದರಾಮಯ್ಯ ಬಸ್ ದರ ಏರಿಕೆಯ ಉಡುಗೊರೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.