ಸ್ಥಳೀಯ ಭಿನ್ನಾಭಿಪ್ರಾಯಗಳ ಮೇರೆಗೆ ಕಾಂಗ್ರೆಸ್‌ ಸದಸ್ಯತ್ವ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದಾಗಿ ತಾಲೂಕು ಕಾಂಗ್ರೆಸ್‌ ಮುಖಂಡ ಎಂ.ಮೈಲಾರರೆಡ್ಡಿ ಹೇಳಿದರು

ಪಾವಗಡ: ಸ್ಥಳೀಯ ಭಿನ್ನಾಭಿಪ್ರಾಯಗಳ ಮೇರೆಗೆ ಕಾಂಗ್ರೆಸ್‌ ಸದಸ್ಯತ್ವ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದಾಗಿ ತಾಲೂಕು ಕಾಂಗ್ರೆಸ್‌ ಮುಖಂಡ ಎಂ.ಮೈಲಾರರೆಡ್ಡಿ ಹೇಳಿದರು.

ಬುಧವಾರ ನಗರದ ತಮ್ಮ ನಿವಾಸದಲ್ಲಿ ಹಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಿದ್ದೇನೆ. ನನ್ನ ಸೇವೆ ಪರಿಗಣಿಸಿ ಕೆಪಿಸಿಸಿಯಲ್ಲಿ ಅತ್ಯುತ್ತಮ ಹುದ್ದೆ ನೀಡಲಾಗಿತ್ತು. ಈ ಹಿಂದೆ ತಾಲೂಕಿನ ಪೊನ್ನಸಮುದ್ರ ವ್ಯಾಪ್ತಿಯ ತಾಪಂ ಸದಸ್ಯರಾಗಿ ಆಯ್ಕೆಯಾಗಿದ್ದೆ. ತಾಪಂನಲ್ಲಿ ಸಾಮಾನ್ಯಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗೊಗೆರೆದರೂ ನನಗೆ ಶಾಸಕರು ಅವಕಾಶ ಕೊಡಲಿಲ್ಲ. ಕನಿಷ್ಠ ಸಮಾಧಾನ ಮಾಡುವ ಕೆಲಸವಾದರೂ ಮಾಡಲಿಲ್ಲ. ಇದೇ ರೀತಿ ರಾಜಕೀಯವಾಗಿ ಬೆಳೆಯಲು ಅವಕಾಶ ನೀಡಲಿಲ್ಲ. ಸ್ಥಳೀಯ ಗೊಂದಲಗಳ ಹಿನ್ನಲೆಯಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಹೀಗಾಗಿ ರಾಜೀನಾಮೆ ಸಲ್ಲಿಸಿದ್ದೇನೆ. ಸದ್ಯ ಪಕ್ಷದಿಂದ ತಟಸ್ಥರಾಗಿದ್ದು ಮುಂದಿನ ನಡೆ ಅತಿ ಶೀಘ್ರ ಪ್ರಕಟಿಸುವುದಾಗಿ ಹೇಳಿದರು. ಮುಖಂಡರಾದ ದಳವಾಯಿಹಳ್ಳಿ ಅಕ್ಕಲಪ್ಪ, ಬಾಲಾಜಿ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಬಿಎಸ್‌ಪಿಗೆ ಸಾಮೂಹಿಕ ರಾಜೀನಾಮೆ

ಕೊರಟಗೆರೆ: ನನ್ನ ವೈಯಕ್ತಿಕ ಕಾರಣಗಳಿಂದ ನಾನು ಮತ್ತು ತಾಲೂಕಿನ ಎಲ್ಲಾ ಸದಸ್ಯರು ಚರ್ಚೆ ನಡೆಸಿ ಸಾಮೂಹಿಕವಾಗಿ ಬಿಎಸ್‌ಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಜಟ್ಟಿಅಗ್ರಹಾರ ನಾಗರಾಜು ತಿಳಿಸಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಹತ್ತಿರವಿರುವ ಪತ್ರಿಕಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿ ಮಾತನಾಡಿ, ಕ್ಷೇತ್ರದ 324 ಬೂತ್‌ನ ಸದಸ್ಯರು ಚರ್ಚೆ ನಡೆಸಿ ತೀರ್ಮಾನ ತಗೆದುಕೊಂಡು ಎಲ್ಲರೂ ಬಹುಜನ ಸಮಾಜ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಬೂತ್‌ ಮಟ್ಟದ ಕಮಿಟಿ ಸದಸ್ಯರೊಂದಿಗೆ ಚರ್ಚಿಸಿ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದನ್ನು ತಿಳಿಸುತ್ತೇನೆ ಎಂದು ಹೇಳಿದರು.

ಕ್ಷೇತ್ರದಲ್ಲಿ ತಾಲೂಕು ಹಾಗೂ ಹೋಬಳಿ ಮಟ್ಟದ ಬೂತ್‌ ಕಮಿಟಿಗಳನ್ನು ರಚಿಸಿ ಪ್ರತಿ ಗ್ರಾಮಗಳಲ್ಲಿಯೂ ಶಿಬಿರಗಳನ್ನು ಮಾಡಿದ್ದೇನೆ. ಸಂವಿಧಾನದ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಿ ಅನೇಕ ಜನಪರ ಕೆಲಸ ಮಾಡಿದ್ದೇವೆ. ನಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿ ಯಾರು ಕ್ಷೇತ್ರದ ಪರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ ಎಂಬುದನ್ನು ಅರಿತು ಆ ಪಕ್ಷವನ್ನು ಬೆಂಬಲಿಸುತ್ತೇವೆ ಎಂದರು.

ಸುಮಾರು 2 ವರ್ಷಗಳಿಂದ ಕೊರಟಗೆರೆ ತಾಲೂಕಿನಲ್ಲಿ ತಳಮಟ್ಟದಿಂದಲ್ಲೂ ಸಂಘಟನೆ ಮಾಡಿ ಪಕ್ಷವನ್ನು ಕಟ್ಟಿದ್ದೇನೆ. ನಮ್ಮ ರಾಜ್ಯ ಪ್ರಧಾನ ಕಾರ್ಯದರ್ಶಿಯವರ ನಡವಳಿಕೆ ಬಗ್ಗೆ ಬೇಸತ್ತು ಈ ರಾಜೀನಾಮೆ ತೀರ್ಮಾನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಪಕ್ಷ ಸೇರುವ ನಿರ್ಧಾರ ಮಾಡಲಿದ್ದೇವೆ ಎಂದರು.

ಸಮನಾಗಿ ಬಾಳಲು ಬಿಎಸ್‌ಪಿ ಅಧಿಕಾರಕ್ಕೆ ತನ್ನಿ

 ಶಿರಾ (ನ.19): ದೇಶದಲ್ಲಿ ಎಲ್ಲಾ ಜಾತಿ ಧರ್ಮವರು ಸಮಾನವಾಗಿ ಬಾಳಲು ಜನತೆ ಬಿಎಸ್‌ಪಿ ಪಕ್ಷ ಅಧಿಕಾರಕ್ಕೆ ತನ್ನಿ. ಬಿಎಸ್‌ಪಿ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು. ಸಂವಿಧಾನವೇ ನಮ್ಮ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿರುವ ಏಕೈಕ ಪಕ್ಷ. ಯಾವುದಾದರೂ ಪಕ್ಷ ಸಂವಿಧಾನ ರಕ್ಷಣೆ ಬಗ್ಗೆ ಯಾತ್ರೆ ಮಾಡಿದ್ದರೆ ಅದು ಬಿಎಸ್‌ಪಿ ಪಕ್ಷ ಮಾತ್ರ ಎಂದು ರಾಜ್ಯಾಧ್ಯಕ್ಷ ಮಂಡ್ಯ ಕೃಷ್ಣಮೂರ್ತಿ ಹೇಳಿದರು.

ಸಂವಿಧಾನದ ಸಂರಕ್ಷಣೆಗಾಗಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಕರ್ನಾಟಕ ರಾಜ್ಯವ್ಯಾಪಿ ಹಮ್ಮಿಕೊಂಡಿದ್ದ ಜೈ ಭೀಮ್‌ ಜನಜಾಗೃತಿ ಜಾಥಾ ಶಿರಾ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.