ವಿಶ್ವನಾಥ್ ಪುತ್ರನಿಂದ ಪ್ರಾಣ ಭಯ: ಕಾಂಗ್ರೆಸ್ ಶಾಸಕ
ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಪುತ್ರನಿಂದ ತಮಗೆಪ್ರಾಣ ಬೆದರಿಕೆ ಇದೆ ಎಂದು ಕಾಂಗ್ರೆಸ್ ಶಾಸಕ ಆರೋಪ ಮಾಡಿದ್ದಾರೆ.
ಮೈಸೂರು (ಆ.15) : ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಅವರ ಪುತ್ರ ಅಮಿತ್ ಅವರಿಂದ ತನಗೆ ಪ್ರಾಣ ಭಯ ಇದೆ ಎಂದು ಕಾಂಗ್ರೆಸ್ ಶಾಸಕ ಎಚ್.ಪಿ.ಮಂಜುನಾಥ್ ಅವರು ಜಿಲ್ಲಾ ಉಸ್ತುವಾರಿ ಸಚಿವರ ಎದುರೇ ದೂರಿರುವ ಘಟನೆ ಶುಕ್ರವಾರ ಮೈಸೂರಿನಲ್ಲಿ ನಡೆದಿದೆ.
ಜಿಪಂ ಸಭಾಂಗಣದಲ್ಲಿ ಮಳೆ ಹಾನಿ ಮತ್ತು ಪ್ರವಾಹ ಕುರಿತ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಶುಕ್ರವಾರ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಅವರು, ವಿಶ್ವನಾಥ್ ಪುತ್ರ ಅಮಿತ್ ದೇವರಟ್ಟಿಅವರು, ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಹಾಗೂ ದೂರವಾಣಿ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ, ಎಚ್. ವಿಶ್ವನಾಥ್ ಎದುರೇ ದೂರಿದ್ದಾರೆ.
ಬೆಂಗಳೂರಿಗೆ ಬೆಂಕಿ ಇಟ್ಟ ಸಂಘಟನೆಗಳ ಅಸಲಿ ಇತಿಹಾಸ ಬಟಾಬಯಲು...
ಶಾಸಕರಿಗೆ ಹೊಡೆಯಿರಿ, ಬಡಿಯಿರಿ ಎಂದು ಸಂದೇಶ ಬರುತ್ತಿದೆ. ಸುಮಾರು 17 ನಿಮಿಷದ ದೂರವಾಣಿ ಸಂಭಾಷಣೆಯೂ ಇದೆ. ಅದನ್ನು ಬೇಕಿದ್ದರೆ ಕೇಳಿ ಎಂದು ಧ್ವನಿಮುದ್ರಣವನ್ನು ಪ್ಲೇ ಮಾಡಿದರು. ಸ್ವಲ್ಪಹೊತ್ತು ಕೇಳಿದ ಸಚಿವರು, ಸಭೆ ಮುಗಿದ ಬಳಿಕ ಕೇಳುತ್ತೇನೆ. ಈಗ ಎಸ್ಪಿಗೆ ಅದನ್ನು ಕಳುಹಿಸಿ, ಅವರು ಕ್ರಮ ಕೈಗೊಳ್ಳುವುದಾಗಿ ಸಮಾಧಾನಪಡಿಸಿದರು.
ಬೆಂಗಳೂರು ಗಲಭೆ ಹಿಂದೆ SDPI, ಸಂಘಟನೆ ನಿಷೇಧಕ್ಕೆ ಮೀನಮೇಷ ಯಾಕೆ?..
ಈ ಬಗ್ಗೆ ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ವಿಶ್ವನಾಥ್, ನನ್ನ ಮಗನ ವಿರುದ್ಧ ಶಾಸಕ ಮಂಜುನಾಥ್ ಮಾಡಿರುವ ಆಡಿಯೋ ಫೇಕ್ ಎಂದು ಸ್ಪಷ್ಟಪಡಿಸಿದರು ಇದೊಂದು ಬುಲ್ಶಿಟ್. ಸುಳ್ಳಿನ ಕಂತೆಯಾಗಿದ್ದು ನನ್ನ ವಿರುದ್ಧ ನಡೆಯುತ್ತಿರುವ ಪಿತೂರಿ. ವಿಶ್ವನಾಥ್ ಮಂತ್ರಿ ಆಗಬಹುದು ಅಂತ ಈ ರೀತಿ ಅಪ ಪ್ರಚಾರ ಮಾಡುತ್ತಿದ್ದಾರೆ. ಅಂತಹ ಯಾವುದೇ ವಿಚಾರ ಇದ್ದರೂ ಸೈಬರ್ ಠಾಣೆಗೆ ದೂರು ನೀಡಿ, ಇತ್ಯರ್ಥಪಡಿಸಿಕೊಳ್ಳಲಿ ಎಂದು ಎಚ್.ಪಿ. ಮಂಜುನಾಥ್ಗೆ ತಿರುಗೇಟು ನೀಡಿದರು.