ಧರ್ಮವನ್ನು ಆಚೆಗೆ ಇಟ್ಟು ಬಿಜೆಪಿ ಚುನಾವಣೆ ಎದುರಿಸಿದಲ್ಲಿ ರಾಜ್ಯದಲ್ಲಿ ಬಿಜೆಪಿ ಒಂದೂ ಸ್ಥಾನವೂ ಬರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. 

ಶಿವಮೊಗ್ಗ (ಸೆ.24): ಕಾಂಗ್ರೆಸ್‌ ಪಕ್ಷದಲ್ಲಿ ನಾಯಕತ್ವದ ಕೊರತೆ ಇಲ್ಲ. ನಾಯಕತ್ವದಲ್ಲಿ ಎಲ್ಲಿಯೂ ಎಡವಿಲ್ಲ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ನೂತನ ವಕ್ತಾರ ಕಿಮ್ಮನೆ ರತ್ನಾಕರ್‌ ಹೇಳಿದರು.

Add Asianetnews Kannada as a Preferred SourcegooglePreferred

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಅಧಿಕಾರಕ್ಕೆ ಬಂದಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕ ನೀತಿ ಬದಿಗಿಟ್ಟು ಧರ್ಮದ ಮೇಲೆ ರಾಜಕಾರಣ ಮಾಡುತ್ತಿದೆ. ಧರ್ಮವನ್ನು ಆಚೆಗೆ ಇಟ್ಟು ಚುನಾವಣೆ ಎದುರಿಸಿದರೆ ಆ ಪಕ್ಷಕ್ಕೆ 10 ಸ್ಥಾನವೂ ಲಭಿಸುವುದಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷರು ಭರವಸೆಯನ್ನಿಟ್ಟು ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಪ್ರಚಲಿತ ವಿದ್ಯಮಾನದಲ್ಲಿ ಪಕ್ಷದ ನಡೆಯನ್ನು ಸಮರ್ಥಿಸಿಕೊಳ್ಳುವ ಹಾಗೂ ಪಕ್ಷದ ಧ್ಯೇಯೋದ್ದೇಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಧ್ಯಮಗಳಿಗೆ ತಲುಪಿಸುವ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.

ಪಕ್ಷೇತರ ಅಭ್ಯರ್ಥಿಗಳಿಗೇ ಮಣೆ ಹಾಕಿದೆ ಶಿರಾ! ಮತ್ತೆ ಮರಳುತ್ತಾ ಇತಿಹಾಸ.? .

ಕೊರೋನಾ ತಹಬದಿಗೆ ಬಂದನಂತರ ಶಾಲೆ ಆರಂಭಿಸಿ

ರಾಜ್ಯದಲ್ಲಿ ಶಾಲಾ-ಕಾಲೇಜು ಪುನರಾರಂಭ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಮಕ್ಕಳ ಜೀವನದ ಜೊತೆ ಚೆಲ್ಲಾಟ ವಾಡಬಾರದು. ಕೊರೋನಾ ತಹಬದಿಗೆ ಬರುದ ಹೊರತು, ಶಾಲೆಗಳನ್ನು ಆರಂಭಿಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧಿಕಾರದಲ್ಲಿರುವುದು ಜನತೆಯ ದುರಂತ. ಯಾವಾಗ ಕೊರೋನಾ ಇರಲಿಲ್ಲವೋ ಆಗ ಲಾಕ್‌ ಡೌನ್‌ ಮಾಡಿದ್ದರು. ಈಗ ಕೊರೋನಾ ಹೆಚ್ಚಾಗಿದೆ, ಜನರು ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಲೆ ಆರಂಭದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲೆಲ್ಲಾ ಕೊರೋನಾ ಎಲ್ಲೆಡೆ ಹಬ್ಬಿಸಲಾಗುತ್ತಿದೆ ಎಂದು ಮುಸಲ್ಮಾನರ ವಿರುದ್ಧ ಆರೋಪಿಸಿದ್ದರು. ಸೋಂಕು ಹರಡುವುದಕ್ಕೆ ತಬ್ಲೀಘಿಘಿಗಳೇ ಕಾರಣ ಎಂದು ಆಪಾದಿಸಿದ್ದರು. ಸೋಂಕು ಈಗ ಎಲ್ಲೆಡೆ ಹಬ್ಬಿದೆ ಇದಕ್ಕೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಕಿಮ್ಮನೆ ರತ್ನಾಕರ್‌, ಡ್ರಗ್ಸ್‌ ಪ್ರಕರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೋ ಅವರೆಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಟಿ ರಾಗಿಣಿ ಬಿಜೆಪಿ ಶಾಲು ಹಾಕಿಕೊಂಡು ಓಡಾಡ್ತಿದ್ದರು. ಅದಕ್ಕೆ ಏನು ಮಾಡೋಕೆ ಆಗುತ್ತೆ. ಈಗ ಅವರ ಮಕ್ಕಳು, ಇವರ ಮಕ್ಕಳು, ರಾಜಕಾರಣಿಗಳ ಮಕ್ಕಳು ಅನ್ನೋದಕ್ಕೆ ಬರೋದಿಲ್ಲ. ಮಳೆ, ಗಾಳಿ, ಬೆಳೆ, ನೀರಿಗೆ ಜಾತಿ, ಧರ್ಮ, ಪಕ್ಷ ಅಂಟಿಸಲು ಬರೋದಿಲ್ಲ. ಯಾರು, ಯಾವ ರಾಜಕಾರಣಿಗಳ ಮಕ್ಕಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ಬೇಡವೇ ಬೇಡ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ ಅಷ್ಟೇ ಎಂದರು