ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹೋರಾಟದ ನಡುವೆ ಕಾಂಗ್ರೆಸ್‌ ಮುಖಂಡರು ಆಗಿರುವ ಒಕ್ಕಲಿಗ ಸಮಾಜದ ಪ್ರಭಾವಿ ಮುಖಂಡ ಸಾಲಿ ಗ್ರಾಮದವರಾದ ಬಾಬು ಹನುಮಾನ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಮತದಾರಲ್ಲಿ ಮತ್ತಷ್ಟುರಾಜಕೀಯ ಆಸಕ್ತಿ ಮೂಡುವಂತೆ ಮಾಡಿದೆ

ಕೆ.ಆರ್‌.ನಗರ (ಅ.28):ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹೋರಾಟದ ನಡುವೆ ಕಾಂಗ್ರೆಸ್‌ ಮುಖಂಡರು ಆಗಿರುವ ಒಕ್ಕಲಿಗ ಸಮಾಜದ ಪ್ರಭಾವಿ ಮುಖಂಡ ಸಾಲಿ ಗ್ರಾಮದವರಾದ ಬಾಬು ಹನುಮಾನ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಮತದಾರಲ್ಲಿ ಮತ್ತಷ್ಟು ರಾಜಕೀಯ ಆಸಕ್ತಿ ಮೂಡುವಂತೆ ಮಾಡಿದೆ.

Add Asianetnews Kannada as a Preferred SourcegooglePreferred

25 ವರ್ಷಗಳ ಹಿಂದೆ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ (BJP) ಸ್ಪರ್ಧೆ ಮಾಡಿ ದಾಖಲೆಯ 26 ಸಾವಿರ ಮತಗಳನ್ನು ಪಡೆದಿದ್ದ ದಿವಂಗತ ಎಸ್‌.ಎ. ಗೋವಿಂದರಾಜು ಅವರ ಪುತ್ರರಾಗಿರುವ ಬಾಬು ಹನುಮಾನ್‌ ಬಿಜೆಪಿ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.

ಇದರ ಜತೆಗೆ ಬಾಬು ಅವರ ತಾಯಿ ಸುಮಿತ್ರಮ್ಮ ಗೋವಿಂದರಾಜು ಸಾಲಿಗ್ರಾಮ ಕ್ಷೇತ್ರದಿಂದ 10 ವರ್ಷಗಳ ಹಿಂದೆ ಕಾಂಗ್ರೆಸ್‌ (congress) ಚಿಹ್ನೆಯಿಂದ ಜಿಪಂಗೆ ಆಯ್ಕೆಯಾಗಿದ್ದರಲ್ಲದೆ, ಕಳೆದ ಬಾರಿ ಮಿರ್ಲೆ ಜಿಪಂ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಬಾಬು ಹನುಮಾನ್‌ ಶಾಸಕ ಸಾ.ರಾ. ಮಹೇಶ್‌ ಅವರ ಸಹೋದರ ಸಾ.ರಾ. ನಂದೀಶ್‌ ಅವರಿಗೆ ಪ್ರಬಲ ಸ್ಪರ್ಧೆ ನೀಡಿ 9 ಸಾವಿರಕ್ಕೂ ಅಧಿಕ ಮತ ಗಳಿಸಿದ್ದರು.

ಸಾಕಷ್ಟುರಾಜಕೀಯ ಹಿನ್ನೆಲೆ ಮತ್ತು ವೈಯುಕ್ತಿಕ ವರ್ಚಸ್ಸು ಹೊಂದಿರುವ ಇವರ ಪಕ್ಷ ಸೇರ್ಪಡೆಯಿಂದ ಬಿಜೆಪಿ ಪ್ರಬಲವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ಸವಾಲು ಒಡ್ಡಲಿದ್ದು, ಇದು ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಸೇರ್ಪಡೆ ಸಂಬಂಧ ಕನ್ನಡಪ್ರಭ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕಳೆದ 14 ವರ್ಷಗಳಿಂದ ನಾನು ಕಾಂಗ್ರೆಸ್‌ಗೆ ದುಡಿದಿದ್ದು, ಈಗ ಬಿಜೆಪಿಯ ತತ್ವ ಮತ್ತು ಸಿದ್ಧಾಂತಗಳನ್ನು ಒಪ್ಪಿ ಸೇರ್ಪಡೆಯಾಗಲು ತೀರ್ಮಾನ ಮಾಡಿದ್ದೇನೆ ಎಂದರು.

ಬಿಜೆಪಿ ಸ್ಥಳೀಯ ಮುಖಂಡರು ಮತ್ತು ಇತರ ನಾಯಕರ ಜತೆ ಚರ್ಚೆ ಮಾಡಿ ನವೆಂಬರ್‌ ತಿಂಗಳಲ್ಲಿ ಪಕ್ಷ ಸೇರ್ಪಡೆಯಾಗಿ ಸಂಘಟನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

ಈ ಸಂಬಂಧ ಈಗಾಗಲೆ ಪಕ್ಷದ ರಾಜ್ಯಮಟ್ಟದ ನಾಯಕರೊಂದಿಗೆ ಮಾತನಾಡಿದ್ದು, ಜಿಲ್ಲಾ ಮತ್ತು ಕ್ಷೇತ್ರದ ಮುಖಂಡರು ಹಾಗೂ ಪ್ರಮುಖರ ಜತೆಯು ಚರ್ಚೆ ಮಾಡಿ ಶೀಘ್ರದಲ್ಲಿಯೆ ಬಿಜೆಪಿ ಸ್ಥಳೀಯ ಕಾರ್ಯಕರ್ತರು ಮತ್ತು ಮುಖಂಡರ ಸಮ್ಮುಖದಲ್ಲಿ ಸೇರ್ಪಡೆಯಾಗುವ ದಿನಾಂಕ ತಿಳಿಸುತ್ತೇನೆಂದು ಮಾಹಿತಿ ನೀಡಿದರು.

ಕಾಂಗ್ರೆಸ್ ವಿಜಯಪತಾಕೆ ಖಚಿತ : 

 ಕೆ.ಆರ್‌. ನಗರ (ಅ.27): ಕಾಂಗ್ರೆಸ್‌ ತತ್ವ, ಸಿದ್ಧಾಂತ ಮತ್ತು ಜನಪರ ಕಾಳಜಿಯನ್ನು ಮೆಚ್ಚಿ ನಿತ್ಯ ನೂರಾರು ಮಂದಿ ಸೇರ್ಪಡೆಯಾಗುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷ ವಿಜಯ ಪತಾಕೆ ಹಾರಿಸುವುದು ಖಚಿತ ಎಂದು ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಭರವಸೆ ವ್ಯಕ್ತಪಡಿಸಿದರು.

ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದಲ್ಲಿರುವ ಕೆಪಿಸಿಸಿ (KPCC) ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಅವರ ನಿವಾಸದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಸಾಲಿಗ್ರಾಮ ತಾಲೂಕಿನ ಸಾಲೆಕೊಪ್ಪಲು ಗ್ರಾಮದ ಒಕ್ಕಲಿಗ ಸಮಾಜದ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶ ಮತ್ತು ರಾಜ್ಯದ (Karnataka) ಉದ್ಧಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಅರಿತಿರುವ ಕ್ಷೇತ್ರದ ಪ್ರಜ್ಞಾವಂತ ಮತದಾರರು ಸ್ವಯಂ ಪ್ರೇರಿತರಾಗಿ ನಮಗೆ ಬೆಂಬಲ ನೀಡುತ್ತಿದ್ದು, ಇದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದರಲ್ಲದೆ, ಮುಂದಿನ ದಿನಗಳಲ್ಲಿ ಮತ್ತಷ್ಟುಪ್ರಭಾವಿಗಳು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮತ್ತು ಕ್ಷೇತ್ರದ ಕಾಂಗ್ರೆಸ್‌ ಮುಖಂಡ ಡಿ. ರವಿಶಂಕರ್‌ ಮಾತನಾಡಿ, ಇತರ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗುವವರನ್ನು ನಾವು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತೇವೆ ಎಂದರು.

ಗ್ರಾಪಂ ಸದಸ್ಯ ನೂತನಗೌಡ, ಮಾಜಿ ಸದಸ್ಯರಾದ ಪ್ರಕಾಶ್‌, ನವೀನ್‌, ಮನೋಹರ, ಮುಖಂಡ ಜಗದೀಶ್‌ ಅವರ ನೇತೃತ್ವದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಸಾಲೇಕೊಪ್ಪಲು ಗ್ರಾಮದ ಒಕ್ಕಲಿಗ ಸಮಾಜದ ಮುಖಂಡರಾದ ಲಕ್ಷ್ಮಣ, ಅಶೋಕ್‌, ಸಚಿನ್‌, ಶಿವಣ್ಣ, ಮನೋಹರ, ಉದಯ, ಚಂದನ್‌, ನಿತಿನ್‌, ರಾಹುಲ್‌, ಮಹದೇವ, ಶ್ರೀಕಾಂತ್‌, ಎಸ್‌.ಪಿ.ಶರತ್‌, ನಟರಾಜು, ಆಕಾಶ್‌, ನೇಮರಾಜ್‌, ಸಂಪತ್‌, ಶಿವಕುಮಾರ್‌, ಚಂದ್ರೇಗೌಡ ಅವರನ್ನು ಸ್ವಾಗಿತಿಸಿತು.

ಸಾಲಿಗ್ರಾಮ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಉದಯಶಂಕರ್‌, ಕೆ.ಆರ್‌. ನಗರ ತಾಲೂಕು ಅಧ್ಯಕ್ಷ ಎಂ.ಎಸ್‌. ಮಹದೇವ್‌, ಪ್ರಧಾನ ಕಾರ್ಯದರ್ಶಿ ಡಿ. ರಾಜೇಗೌಡ, ವಕ್ತಾರ ಸೈಯದ್‌ಜಾಬೀರ್‌, ತಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಅಧ್ಯಕ್ಷ ಕಾಂತರಾಜು, ಉಪಾಧ್ಯಕ್ಷ ದೇವರಾಜು, ರಾಜೀವ್‌ ಗಾಂಧಿ ಪಂಚಾಯ್ತಿ ಸಮಿತಿ ಅಧ್ಯಕ್ಷ ವಾಸಿಂಪಾಷಾ, ಉಪಾಧ್ಯಕ್ಷ ಮುಕ್ತಾರ್‌ಪಾಷಾ, ಪ.ಜಾತಿ ಘಟಕದ ಅಧ್ಯಕ್ಷ ಕಂಠಿಕುಮಾರ್‌, ವಕೀಲ ಪುನೀತ್‌ ಇದ್ದರು.