Asianet Suvarna News Asianet Suvarna News

Karnataka Congress : ಡಿಕೆ ಸಹೋ​ದ​ರ​ರ ಕೋಟೆಯಲ್ಲಿ ಕಾಂಗ್ರೆಸ್‌ ಮತ್ತಷ್ಟು ಭದ್ರ

  •  ಎಚ್‌ಡಿಕೆ ಮತ್ತು ಡಿಕೆಶಿ ಕಾಳ​ಗ​ದಲ್ಲಿ ಸೋತ ಜೆಡಿ​ಎಸ್‌
  •  ದಳ​ಪ​ತಿ​ಗ​ಳಿ​ಗೆ ಬಲದ ಜತೆಗೆ ನೆಲೆ​ಯನ್ನೂ ಕಳೆ​ದು​ಕೊ​ಳ್ಳುವ ಭೀತಿ
  •  ಮೂರನೇ ಬಾರಿಗೆ ಗೆಲವು ಸಾಧಿ​ಸಿ ದಾಖಲೆ ಬರೆದ ರವಿ
Congress   Gets More strength in Bengaluru Rural After Council Election snr
Author
Bengaluru, First Published Dec 15, 2021, 2:59 PM IST

ವರದಿ:  ಎಂ. ಅ​ಫ್ರೋಜ್ ಖಾನ್‌

 ರಾಮ​ನ​ಗರ (ಡಿ.15): ಸಾಲು ಸಾಲು ಚುನಾ​ವ​ಣೆ​ಗ​ಳ (Election)​ ಸೋಲಿಗೆ ಪ್ರತೀಕಾರವಾಗಿ ವಿಧಾನ ಪರಿಷತ್‌ ಚುನಾವಣಾ (MLC Election) ಹೋರಾಟವನ್ನು ಕೈಗೆತ್ತಿಕೊಂಡಿದ್ದ ಜೆಡಿಎಸ್‌, (JDS) ಮತ್ತೊಮ್ಮೆ ಸೋಲು ಅನು​ಭ​ವಿ​ಸಿ​ರು​ವುದು ಡಿಕೆ ಸಹೋ​ದ​ರರ ಕೋಟೆ​ಯಲ್ಲಿ ಕಾಂಗ್ರೆಸ್‌ (Congress) ಮತ್ತಷ್ಟು ಭದ್ರ​ಗೊಂಡಂತಾ​ಗಿದೆ.  ವಿಧಾನ ಪರಿ​ಷತ್‌ ಚುನಾ​ವ​ಣೆ​ಯನ್ನು ಎಚ್‌ಡಿಕೆ (HD Kumaraswamy) ಮತ್ತು ಡಿಕೆಶಿ ಕಾಳ​ಗ ಎಂದೇ ಬಿಂಬಿ​ತ​ವಾ​ಗಿತ್ತು. ಈ ಕಾಳ​ಗ​ದಲ್ಲಿ ಡಿಕೆ ಸಹೋ​ದ​ರರು ಹೂಡಿದ ರಣ​ತಂತ್ರಕ್ಕೆ ಪ್ರತಿ​ತಂತ್ರ ರೂಪಿ​ಸು​ವಲ್ಲಿ ಎಡ​ವಿದ ಕುಮಾ​ರ​ಸ್ವಾಮಿ ಸೋಲಿಗೆ ಶರ​ಣಾ​ಗಿದ್ದು, ಜೆಡಿ​ಎಸ್‌ ತನ್ನ ಭದ್ರಕೋಟೆಯನ್ನು ಛಿದ್ರಗೊಳಿಸಿಕೊಂಡಿದೆ.ಬೆಂಗ​ಳೂರು ಗ್ರಾಮಾಂತರ (Bengaluru Rural) ಹಾಗೂ ರಾಮ​ನ​ಗರ ಜಿಲ್ಲೆಯ ವ್ಯಾಪ್ತಿ​ಯ 8 ವಿಧಾ​ನ​ಸಭಾ ಕ್ಷೇತ್ರ​ಗಳ ಪೈಕಿ 5ರಲ್ಲಿ ಜೆಡಿ​ಎಸ್‌ ಶಾಸ​ಕರೇ ಇದ್ದರು. ಕೆಲ​ವೆಡೆ ಮತ​ದಾ​ರ​ರ ಸಂಖ್ಯಾ​ಬ​ಲ​ವನ್ನೂ ಹೊಂದಿತ್ತು. ಆದರೂ ದಳ ಶರ​ಣಾ​ಗಿ​ರು​ವುದು ಚರ್ಚೆಗೆ ಗ್ರಾಸ​ವಾ​ಗಿ​ದೆ.

ಶಾಸ​ಕರು ಹಾಗೂ ಸ್ಥಳೀಯವಾಗಿ ಅಧಿ​ಕಾರ ಪ್ರಾಬ​ಲ್ಯ​ವನ್ನು ಹೊಂದಿ​ದ್ದರೂ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ರವಿ  ವಿರುದ್ಧ ಪರಾ​ಭ​ವ​ಗೊಂಡಿ​ರು​ವುದು ಜೆಡಿ​ಎಸ್‌ ನಾಯ​ಕರ ಅಸಂಘ​ಟಿತ ಹೋರಾ​ಟಕ್ಕೂ ಸಾಕ್ಷಿ​ಯಾ​ಗಿ​ದೆ. ಅಲ್ಲದೆ, ದಳ​ಪ​ತಿ​ಗಳ ಅತಿ​ಯಾದ ಆತ್ಮ​ವಿ​ಶ್ವಾ​ಸವೋ ಅಥವಾ ನಾಯ​ಕತ್ವದ ಕೊರ​ತೆಯೋ ಎನ್ನು​ವ ಪ್ರಶ್ನೆ​ ಕಾಡ​ತೊ​ಡ​ಗಿ​ದೆ.

ಪ್ರತಿ ಚುನಾ​ವ​ಣೆ​ಯಂತೆ ಈ ಚುನಾ​ವ​ಣೆ​ಯ​ಲ್ಲಿಯೂ ಜೆಡಿಎಸ್‌ (JDS), ನಾಯಕತ್ವದ ಸವಾಲನ್ನು ಎದುರಿಸುತ್ತಲೇ ಬಂದಿತು. ಆರಂಭ​ದಲ್ಲಿ ಜೆಡಿ​ಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಸಾರಥ್ಯದಲ್ಲಿ ಚುನಾವಣೆ ನಡೆಯಲಿದೆ ಎಂಬ ಮಾತುಗಳು ಕೇಳಿಬಂದವು. ಅಂತಿ​ಮ​ವಾಗಿ ಜವಾ​ಬ್ದಾರಿ ವಹಿ​ಸಿ​ಕೊಂಡ ಮಾಜಿ ಸಿಎಂ ಕುಮಾ​ರ​ಸ್ವಾ​ಮಿ​ ಅವರೇ ಚುನಾ​ವ​ಣೆ​ಯನ್ನು ಗಂಭೀ​ರ​ವಾಗಿ ಪರಿ​ಗ​ಣಿ​ಸ​ಲಿಲ್ಲ ಎಂಬ ಮಾತು​ಗಳು ಜೆಡಿ​ಎಸ್‌ ವಲ​ಯ​ದ​ಲಿಯೇ ಕೇಳಿ ಬರುತ್ತಿದೆ.

ಜೆಡಿ​ಎಸ್‌ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಜೆಡಿಎಸ್‌ (JDS) ಬೆಂಬ​ಲಿ​ತ ಮತದಾರರನ್ನು ಹಿಡಿದಿಟ್ಟುಕೊಂಡಿದ್ದರೆ ಪಕ್ಷದ ಅಭ್ಯರ್ಥಿ ಸುಲಭವಾಗಿ ಗೆಲುವು ಸಾಧಿಸಬಹುದಿತ್ತು. ಒಟ್ಟು ಮತದಾರರಲ್ಲಿ ಶೇ.40ರಿಂದ 45ರಷ್ಟು ಮತದಾರರು ದಳದವರೇ ಆಗಿದ್ದರು ಎಂಬುದನ್ನು ಪಕ್ಷದ ನಾಯಕರು ಪ್ರಚಾರ ಸಭೆಯಲ್ಲಿ ಹೇಳುತ್ತಿದ್ದರು. ಹಾಗಿದ್ದರೆ ದಳ ಮತಗಳು ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿ ರಮೇಶ್‌ ಗೌಡ ಪರವಾಗಿ ಬಂದಿದ್ದರೂ, ಬೇರೆ ಪಕ್ಷ​ಗಳ ಮತ​ಗ​ಳನ್ನು ಸೆಳೆ​ಯು​ವಲ್ಲಿ ಪಕ್ಷದ ನಾಯ​ಕರು ವಿಫ​ಲ​ರಾದರೇ ಎಂಬ ಅನುಮಾನಗಳು ಫಲಿತಾಂಶದ ನಂತರ ಕಾಡುತ್ತಿದೆ.

ಜೆಡಿ​ಎಸ್‌ ಕೋಟೆ ಛಿದ್ರ:  ವಿಧಾನ ಪರಿಷತ್‌ ಚುನಾವಣೆಯಲ್ಲಿ ಹೆಚ್ಚಿನ ಮತದಾರರ ಸಂಖ್ಯಾಬಲವನ್ನು ಹೊಂದಿದ್ದ ಕಾರಣ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ರವಿ ಸುಲ​ಭ​ವಾಗಿ ಮೂರನೇ ಬಾರಿಗೆ ವಿಜೇ​ತ​ರಾಗಿ ದಾಖಲೆ ಬರೆ​ದಿ​ದ್ದಾ​ರೆ. 2015ರಲ್ಲಿ ಜೆಡಿಎಸ್‌ನಿಂದ ಕೇವಲ 278 ಮತಗಳ ಅಂತರದಿಂದ ಕಾಂಗ್ರೆಸ್‌ ಗೆಲುವು ದಾಖಲಿಸಿತ್ತು. ಈ ಬಾರಿ 722 ಮತಗಳ ಅಂತರದಿಂದ ಕಾಂಗ್ರೆಸ್‌ ಗೆಲುವು ಸಾಧಿ​ಸಿ​ರು​ವುದು ಮತ್ತೊಂದು ವಿಶೇಷ. ಇದೆಲ್ಲದರ ನಡುವೆ, ಜೆಡಿಎಸ್‌ಗೆ ಮುಖಭಂಗವಾಗಿರುವುದಂತು ಸುಳ್ಳಲ್ಲ.

2004ರಿಂದ ಈವರೆಗೂ ಮೂರು ಬಾರಿ ಗೆಲು​ವು ದಾಖಲಿಸಿರುವುದು ಕಾಂಗ್ರೆಸ್‌ಗೆ (Congress) ಆನೆಬಲ ಬಂದಂತಾ​ಗಿದ್ದು, ಜೆಡಿಎಸ್‌ ಬಲದ ಜತೆಗೆ ನೆಲೆ​ಯನ್ನೂ ಕಳೆದುಕೊಳ್ಳುತ್ತಿರುವುದು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಕೇವಲ 54 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿರುವ ಬಿಜೆಪಿಗೆ (BJP) ಮುಖಭಂಗ ಅನುಭವಿಸುವಂತಾಗಿದೆ. ಚಲಾವಣೆಗೊಂಡ ಒಟ್ಟು 3912 ಮತಗಳಲ್ಲಿ ಗೆಲ್ಲುವ ಅಭ್ಯರ್ಥಿ1929ಮತಗಳನ್ನು ಪಡೆಯಬೇಕಿತ್ತು. ಆದರೆ, ಕಾಂಗ್ರೆಸ್‌ ಅಭ್ಯರ್ಥಿ ರವಿ 333ಮತಗಳನ್ನು ಹೆಚ್ಚುವರಿಯಾಗಿ ಪಡೆದಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ನಡೆದಿದ್ದ ಗ್ರಾಪಂ ಚುನಾವಣೆಯಲ್ಲಿಯು ಕಾಂಗ್ರೆಸ್‌ ಬೆಂಬಲಿತರೆ ಹೆಚ್ಚಾಗಿ ಗೆಲುವು ದಾಖಲಿಸಿದ್ದರು. ಜೆಡಿಎಸ್‌ನ ಭದ್ರಕೋಟೆಯಾದ ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಬಿಜೆಪಿ ಬೆಂಬ​ಲಿ​ತ ಸದಸ್ಯರ ಮತಗಳೆಲ್ಲವೂ ಕಾಂಗ್ರೆಸ್‌ ಪಾಲಾ​ಗು​ವಂತೆ ಮಾಡು​ವಲ್ಲಿ ಯಶ​ಸ್ವಿ​ಯಾ​ಗಿ​ರು​ವುದು ಫಲಿತಾಂಶದದಿಂದ ಧೃಡ ಪಟ್ಟಿದೆ.

ಕಾಂಗ್ರೆಸ್‌-ಜೆಡಿಎಸ್‌ನ ಜಿದ್ದಾಜಿದ್ದಿನ ಅಖಾಡವಾಗಿರುವ ರಾಮನಗರದಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಅಧಿಕಾರ ಮತ್ತು ವರ್ಚಸ್ಸು ಸ್ಥಾಪಿಸಿಕೊಳ್ಳಲು ಹವಣಿಸುತ್ತಲೇ ಇದ್ದಾರೆ. ಅವಕಾಶ ಸಿಕ್ಕಾಗೆಲ್ಲ ಪ್ರಾಬಲ್ಯ ಮೆರೆಯಲು ಇನ್ನಿಲ್ಲದ ಕಸರತ್ತು ನಡೆಸುವುದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ವಾಡಿಕೆ. ಅದೇ ಮಾದರಿಯಲ್ಲಿ ವಿಧಾನ ಪರಿಷತ್‌ ಚುನಾವಣೆಯು ನಡೆದಿತ್ತು. ಈಗ ಕಾಂಗ್ರೆಸ್‌ ಗೆಲುವು ಸಾಧಿಸಿರುವುದು ಒಂದೆಡೆ ಡಿ.ಕೆ.ಶಿವಕುಮಾರ್‌ಗೆ ಪ್ಲಸ್‌ ಪಾಯಿಂಟ್‌ ಆಗಿದ್ದರೆ, ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹಿನ್ನಡೆಯಾದಂತಾ​ಗಿ​ದೆ.

ಗೆಲುವು-ಸೋಲಿಗೆ ಕಾರಣಗಳೇನು?

ಈ ಹಿಂದೆಯೂ ಎಸ್‌.ರವಿ ಕಾಂಗ್ರೆಸ್‌ನಿಂದ ಎಂಎಲ್‌ಸಿ ಆಗಿದ್ದರು. ಇದರೊಂದಿಗೆ ಡಿ.ಕೆ.ಶಿವಕುಮಾರ್‌ಗೆ ಸಂಬಂಧಿಯೂ ಆಗಿದ್ದರಿಂದ ಕಾಂಗ್ರೆಸ್‌ನ ಇಡೀ ಪಕ್ಷವೇ ಇವರೊಟ್ಟಿಗೆ ಪ್ರಚಾರಕ್ಕಿಳಿದಿತ್ತು. ಗ್ರಾಪಂನಲ್ಲಿಯು ಕಾಂಗ್ರೆಸ್‌ನ ಬೆಂಬಲಿತರ ಬಲ ಹೆಚ್ಚಾಗಿದ್ದ ಹಿನ್ನಲೆಯಲ್ಲಿ ಎಸ್‌.ರವಿ ಗೆಲುವು ನಿರಾಯಾಸವಾಗಿತ್ತು. ಇದರೊಂದಿಗೆ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್‌ ಒಳ ರಾಜಕೀಯ ಮಾಡಿ, ಬಿಜೆಪಿ ಮತಗಳು ಕಾಂಗ್ರೆಸ್‌ ಪಾಲಾ​ಗು​ವಂತೆ ಮಾಡಿ​ದ್ದಾರೆ ಎನ್ನಲಾಗಿದೆ.ಕಳೆದ ಬಾರಿ ಇ.ಕೃ​ಷ್ಣಪ್ಪ ಕಾಂಗ್ರೆಸ್‌ಗೆ (Congress) ಪ್ರಬಲ ಪೈಪೋಟಿ ನೀಡಿ​ದ್ದರು. ಆದರೆ, ಈ ಬಾರಿ ರಮೇಶ್‌ ಗೌಡ ಅವ​ರಿಗೆ ಕಾಲಾ​ವ​ಕಾಶ ಕಡಿಮೆ ಇದ್ದ ಕಾರಣ ಮತ​ದಾ​ರ​ರನ್ನು ಭೇಟಿ​ಯಾ​ಗಲು ಸಾಧ್ಯ​ವಾ​ಗ​ಲಿಲ್ಲ. ಅಲ್ಲದೆ,ಬಿಜೆಪಿ ಜತೆ​ಗೆ ಜೆಡಿ​ಎಸ್‌ ಮೈತ್ರಿ ಮಾಡಿ​ಕೊಂಡಿ​ರುವ ವದಂತಿ​ಗಳು ಚುನಾ​ವಣೆ ಮೇಲೆ ಪರಿ​ಣಾಮ ಬೀರಿ​ದೆ.

ಮುಂದಿನ ಚುನಾ​ವ​ಣೆಗೆ ದಿಕ್ಸೂಚಿ

2023ರ ವಿಧಾ​ನ​ಸಭಾ ಚುನಾ​ವ​ಣೆ​ಯನ್ನು ಗುರಿ​ಯಾ​ಗಿ​ಟ್ಟು​ಕೊಂಡು ಜೆಡಿ​ಎಸ್‌ ಪಕ್ಷವು ಜನತಾ ಪರ್ವ - ಜೆಡಿ​ಎಸ್‌ ಮಿಷನ್‌ 123 ಕಾರ್ಯಾ​ಗಾ​ರದ ಮೂಲಕ ಪಕ್ಷ ಸಂಘ​ಟ​ನೆ​ಯಲ್ಲಿ ತೊಡ​ಗಿ​ರು​ವಾ​ಗಲೇ ವಿಧಾನ ಪರಿ​ಷತ್‌ ಚುನಾ​ವಣೆ ಫಲಿ​ತಾಂಶ ಆಘಾತ ನೀಡಿದೆ. ಇದೆ​ಲ್ಲ​ವನ್ನು ನಿಭಾ​ಯಿ​ಸಿ​ಕೊಂಡು ನಾಯ​ಕರು ಪಕ್ಷ ತೊರೆ​ಯು​ವು​ದನ್ನು ತಡೆದು ಪಕ್ಷ ಸಂಘ​ಟಿಸಿ ಮತ್ತೆ ಚುನಾ​ವ​ಣೆಗೆ ಅಣಿ​ಗೊ​ಳಿ​ಸುವ ಜವಾ​ಬ್ದಾರಿ ಜೆಡಿ​ಎಸ್‌ ವರಿ​ಷ್ಠ​ರಿಗೆ ಸವಾ​ಲಾಗಿ ಪರಿ​ಣ​ಮಿ​ಸಿ​ದೆ. ಇನ್ನು ವಿಧಾನ ಪರಿ​ಷತ್‌ ಚುನಾ​ವ​ಣೆ ಫಲಿ​ತಾಂಶ ಕಾಂಗ್ರೆಸ್‌ ಕಾರ್ಯ​ಕ​ರ್ತ​ರಲ್ಲಿ ಹೊಸ ಹುರುಪು ತರಿ​ಸಿದೆ.

Follow Us:
Download App:
  • android
  • ios