* ರಾಹುಲ್‌ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಣ್ಣು ವಿತರಿಸಿದ ಮುನಿಯಪ್ಪ* ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದೆ* ಪ್ರಧಾನಿಯಾಗಿ ರಾಹುಲ್‌ ಗಾಂಧಿಯವರನ್ನು ದೇಶದ ಜನ ಆಯ್ಕೆ ಮಾಡುವುದು ಖಚಿತ 

ಕೋಲಾರ(ಜೂ.20): ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಮಾಜಿ ಸಂಸದ ಕೆ.ಎಚ್‌ ಮುನಿಯಪ್ಪ ಆರೋಪಿಸಿದರು.

Add Asianetnews Kannada as a Preferred SourcegooglePreferred

ನಗರದ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ 51ನೇ ಜನ್ಮದಿನದ ಪ್ರಯುಕ್ತ ರೋಗಿಗಳಿಗೆ ಔಷಧಗಳ ಕಿಟ್‌, ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದ ಅವರು, ಬಿಜೆಪಿ ಬಗ್ಗೆ ಜನ ರೋಸಿಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಸಲ್ಲಿಸುತ್ತಿರುವ ಸೇವೆಯನ್ನು ನೆನೆದು ಜನ ಮುಂದೆ ಅಧಿಕಾರಕ್ಕೆ ತರಲಿದ್ದಾರೆ ಎಂದರು.

ಬಿಎಸ್‌ವೈ ಇಲ್ಲ ಅಂದ್ರೆ ಬಿಜೆಪಿ ಇಲ್ಲ

ಅಧಿಕಾರಕ್ಕಾಗಿ ಬಿಜೆಪಿಯಲ್ಲಿ ಒಬ್ಬರ ಕಾಲು ಮತ್ತೊಬ್ಬರು ಎಳೆಯುತ್ತಿದ್ದಾರೆ, ಪಕ್ಷದಲ್ಲಿ ಭಿನ್ನಮತ ಉಂಟಾಗಿದೆ, ಪಕ್ಷದಲ್ಲಿ ಯಡಿಯೂರಪ್ಪ ಇಲ್ಲ ಅಂದ್ರೆ ರಾಜ್ಯದಲ್ಲಿ ಬಿಜೆಪಿ ಇಲ್ಲ ಎಂದೇ ಅರ್ಥ. ಇದು ಕಾಂಗ್ರೆಸ್‌ ಪಕ್ಷಕ್ಕೆ ಅನುಕೂಲಕರವಾಗಿದೆ. ಕೊರೋನಾ ಸಂದರ್ಭದಲ್ಲಿ ಮಂತ್ರಿಗಳು ಜನರ ಕಷ್ಟಗಳಿಗೆ ನೆರವಾಗುವುದನ್ನು ಬಿಟ್ಟು ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದರು.

ಜನರ ಸಂಕಷ್ಟಗಳಿಗೆ ಬಿಜೆಪಿ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಈ ಸರ್ಕಾರಗಳಿಗೆ ದೂರದೃಷ್ಟಿಮತ್ತು ಮುಂದಾಲೋಚನೆ ಇಲ್ಲದಂತಾಗಿದೆ. ಇದರಿಂದಾಗಿ ಜನರ ಕಷ್ಟಗಳಿಗೆ ಸ್ಪಂದಿಸಿ ಕಾಂಗ್ರೆಸ್‌ ಪಕ್ಷ ಕೆಲಸ ಮಾಡುತ್ತಿದೆ. ತುರ್ತು ವಾಹನಗಳ ಸೇವೆಯನ್ನು ಆರಂಭಿಸಿದ್ದು ಕಾಂಗ್ರೆಸ್‌ ಪಕ್ಷದ ಮೇಲೆ ನಂಬಕೆ ಬಂದಿದೆ ಎಂದರು.

ಕೋಲಾರ ಆಸ್ಪತ್ರೆ, ವೈದ್ಯರ ಬಗ್ಗೆ ಇರ್ಫಾನ್ ಪಠಾಣ್ ಮೆಚ್ಚುಗೆ, ವಿಡಿಯೋ ವೈರಲ್

ಜನರ ಕಷ್ಟಕ್ಕೆ ಸ್ಪಂದಿಸದ ಬಿಜೆಪಿ

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ ಚಂದ್ರಾರೆಡ್ಡಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತದೆ. ಪಕ್ಷದ ಕಟ್ಟಕಡೆಯ ಕಾರ್ಯಕರ್ತರು ಕಷ್ಟದಲ್ಲಿ ಭಾಗಿಯಾಗಿ ತನ್ನ ಸೇವೆಯನ್ನು ಕೊರೋನಾ ಸಂದರ್ಭದಲ್ಲಿ ಮಾಡುತ್ತಿದ್ದಾನೆ. ಕೇಂದ್ರ ಮತ್ತು ರಾಜ್ಯದ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿ ಇದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಕೇವಲ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ. ಎರಡು ವರ್ಷಗಳ ನಂತರ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ರಾಹುಲ್‌ ಗಾಂಧಿಯವರನ್ನು ದೇಶದ ಜನ ಆಯ್ಕೆ ಮಾಡುವುದು ಖಚಿತ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಎಲ್‌.ಎ. ಮಂಜುನಾಥ್‌, ಮುರಳಿಗೌಡ, ಕಿಸಾನ್‌ ಕೇತ್‌ ಜಿಲ್ಲಾ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌, ಮುಖಂಡರಾದ ಪ್ರಸಾದ್‌ ಬಾಬು, ಉದಯಶಂಕರ್‌, ಸಿ.ಆರ್‌ ಯುವರಾಜ್‌, ಕುಮಾರ್‌ ಜಯದೇವ್‌, ನಾಗರಾಜ್‌, ಮುಂತಾದವರು ಇದ್ದರು.