Asianet Suvarna News Asianet Suvarna News

ಸಾರವರ್ಧಿತ ಅಕ್ಕಿ ಬಗ್ಗೆ ಹೆಚ್ಚುತ್ತಿರುವ ಗೊಂದಲ

ಸಾರವರ್ಧಿತ ಅಕ್ಕಿ ನೋಡಲು ಅಕ್ಕಿಯಂತೆ ಇರುವುದಿಲ್ಲ. ಇದನ್ನು ಬಳಸುವುದರಿಂದ ಆರೋಗ್ಯಕ್ಕೆ ಲಾಭಕರ. ನಿಶ್ಯಕ್ತಿ, ರಕ್ತಹೀನತೆಯಿಂದ ಬಳಲುತ್ತಿರುವವರು ಇದನ್ನು ಬಳಸುವುದರಿಂದ ಕಾಯಿಲೆಯಿಂದ ಮುಕ್ತರಾಗಬಹುದು. 

Confusion About Enriched Rice in Haveri grg
Author
First Published Aug 17, 2023, 10:30 PM IST

ಸತೀಶ ಸಿ.ಎಸ್‌.

ರಟ್ಟೀಹಳ್ಳಿ(ಆ.17):  ಪಡಿತರದ ಮೂಲಕ ವಿತರಿಸುತ್ತಿರುವ ಅಕ್ಕಿ ಪ್ಲಾಸಿಕ್‌ ಅಕ್ಕಿಯಲ್ಲ, ಸಾರವರ್ಧಿತ ಅಕ್ಕಿಯೆಂದು ಆಹಾರ ಇಲಾಖೆಯೇ ದೃಢೀಕರಿಸಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿ ಕೊಡಬಾರದೆಂದು ತಿಳಿಸಿದೆ. ಆದರೂ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಸೇರಿದೆ ಎಂಬ ವದಂತಿಯಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದರಿಂದ ಕೆಲ ಪಡಿತರದಾರರು ಮನೆಗೆ ತೆಗೆದುಕೊಂಡ ಹೋದ ಅಕ್ಕಿಯನ್ನು ಬಳಸಲು ಹಿಂದೆ-ಮುಂದೆ ನೋಡುವಂತಾಗಿದೆ.

ಪಡಿತರ ಅಕ್ಕಿಯಲ್ಲಿ ಪಾಸ್ಟಿಕ್‌ ಅಕ್ಕಿ ಸೇರಿದೆ ಎಂದು ಪಟ್ಟಣದಲ್ಲಿ ಕೆಲ ತಿಂಗಳ ಹಿಂದಿನಿಂದ ಜನರಲ್ಲಿ ಗೊಂದಲ ಮೂಡಿದೆ. ಇದಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಸಾರವರ್ಧಿತ ಅಕ್ಕಿ ನೋಡಲು ಅಕ್ಕಿಯಂತೆ ಇರುವುದಿಲ್ಲ. ಇದನ್ನು ಬಳಸುವುದರಿಂದ ಆರೋಗ್ಯಕ್ಕೆ ಲಾಭಕರ. ನಿಶ್ಯಕ್ತಿ, ರಕ್ತಹೀನತೆಯಿಂದ ಬಳಲುತ್ತಿರುವವರು ಇದನ್ನು ಬಳಸುವುದರಿಂದ ಕಾಯಿಲೆಯಿಂದ ಮುಕ್ತರಾಗಬಹುದು. ಕೊರೋನಾ ಸಂದರ್ಭದಲ್ಲಿ ಈ ಸಮಸ್ಯೆ ಉಂಟಾಗಿದ್ದು, ಅದನ್ನು ನೀಗಿಸಲು ಸರ್ಕಾರ ಸಾರವರ್ಧಿತ ಅಕ್ಕಿ ಪೂರೈಸುವುದನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಳ; ಇತ್ತ ರಾಜಕೀಯ ಹಗ್ಗ ಜಗ್ಗಾಟದಲ್ಲಿ ಸರ್ಕಾರ!

ಶಾಲೆಗಳಲ್ಲೂ ಸಹ ಬಿಸಿಯೂಟದಲ್ಲಿ ಈ ಅಕ್ಕಿ ಸೇರ್ಪಡೆಯಾದಾಗ ಮೊದಲು ಸಾಕಷ್ಟುಗೊಂದಲ ಉಂಟಾಗಿತ್ತು. ಮಕ್ಕಳು, ಪಾಲಕರು ಜತೆಗೆ ಶಿಕ್ಷಕರೂ ವದಂತಿ ನಂಬಲು ಪ್ರಾರಂಭಿಸಿದ್ದರು. ಅಡುಗೆ ಕಾರ್ಯಕರ್ತೆಯರು ಈ ಸಾರವರ್ಧಿತ ಅಕ್ಕಿಯನ್ನು ತೆಗೆದು ಬಿಸಾಡಿ ಅನ್ನ ತಯಾರಿಸುತ್ತಿದ್ದರು. ಇಲಾಖೆ ಸ್ಪಷ್ಟನೆ ಬಳಿಕ ಅದನ್ನು ಬಳಸಲು ಪ್ರಾರಂಭಿಸಿದರು. ಆದರೆ ಬಹುತೇಕ ಶಾಲೆಗಳಲ್ಲಿ ಸರಿಯಾದ ಮಾಹಿತಿ ಇಲ್ಲದ ಕಾರಣ ಗೊಂದಲ ಹಾಗೇ ಉಳಿದಿತ್ತು. ನಂತರ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಅಧಿಕಾರಿಗಳು ಅಕ್ಕಿಯ ಪೌಷ್ಟಿಕತೆ ಕುರಿತು ಮಾಹಿತಿ ನೀಡಿ ಅಡುಗೆ ಕಾರ್ಯಕರ್ತೆಯರು, ಶಿಕ್ಷಕರಿಗೆ ತರಬೇತಿ ನೀಡಿದರು. ಆದರೆ ಸಾರ್ವಜನಿಕರು ಇನ್ನೂ ಗೊಂದಲದಲ್ಲಿ ಕಾಲ ಕಳೆಯುವಂತಾಗಿದೆ.

ವದಂತಿಯಿಂದಾಗಿ ಸಾರ್ವಜನಿಕರಲ್ಲಿ ಮತ್ತೆ ಸಂಶಯ ಮೂಡತೊಡಗಿದ್ದು, ಆ ಹಿನ್ನೆಲೆ ಅದು ಸಾರವರ್ಧಿತ ಅಕ್ಕಿಯೆಂದು ಸಾಬೀತು ಮಾಡಲಾಗಿದೆ. 1 ಕೆಜಿ ಅಕ್ಕಿಗೆ 10 ಗ್ರಾಂ ಸಾರವರ್ಧಿತ ಅಕ್ಕಿ ಸೇರಿಸಲಾಗಿದೆ. ಇದರಲ್ಲಿ ಕಬ್ಬಿಣದ ಅಂಶ, ಪೊಲಿಕ್‌ ಆಮ್ಲ, ವಿಟಮಿನ್‌ ಬಿ ಸೇರಿದೆ. ಅಕ್ಕಿಯನ್ನು ತೊಳೆಯುವಾಗ ಈ ಸಾರವರ್ಧಿತ ಅಕ್ಕಿ ತೇಲುತ್ತಿರುತ್ತದೆ. ಅದನ್ನು ಪ್ಲಾಸ್ಟಿಕ್‌ ಅಕ್ಕಿ ಅಥವಾ ಪೊಳ್ಳು ಎಂದು ಭಾವಿಸದೆ ಬಳಸಬೇಕೆಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾವೇರಿ: 15 ದಿನದಲ್ಲಿ 3 ರೈತರ ಆತ್ಮಹತ್ಯೆ

ಜನರು ಗೊಂದಲಕ್ಕೆ ಒಳಗಾಗದೆ ಪಡಿತರ ಅಕ್ಕಿಯಲ್ಲಿ ಸೇರ್ಪಡೆಯಾಗಿರುವ ಅಕ್ಕಿಯನ್ನು ಬಳಸಬೇಕು. ಮಾಹಿತಿ ಕೊರತೆಯಿರುವವರು ಇಲಾಖೆಯನ್ನು ಸಂಪರ್ಕಿಸಬಹುದು. ಈ ಅಕ್ಕಿಯನ್ನು ಬಳಸುವುದರಿಂದ ದೇಹಕ್ಕೆ ಉಪಯೋಗವಿರುವ ಪೋಷಕಾಂಶಗಳು ದೊರೆಯುತ್ತವೆ ಎಂದು ಆಹಾರ ಇಲಾಖೆ ನಿರೀಕ್ಷಕ ಚಂದ್ರಶೇಖರ ಹೆದ್ದಳ್ಳಿ ತಿಳಿಸಿದ್ದಾರೆ. 

ಪಡಿತರ ಅಕ್ಕಿ ವಿತರಣೆಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಎಂದು ಮೊದಲು ಗೊಂದಲ ಮೂಡಿತ್ತು. ಬಳಸಲು ಭಯವಾಗಿತ್ತು. ಆಗ ಸ್ಥಳೀಯ ನ್ಯಾಯ ಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಎಂದು ವಾದಿಸಿದಾಗ ನ್ಯಾಯ ಬೆಲೆ ಅಂಗಡಿಯ ಚಂದ್ರಪ್ಪ ಮಳಗೊಂಡರ ಇದು ಸಾರ್ವರ್ಧಿತ ಅಕ್ಕಿ ಇದರಲ್ಲಿ ಪೋಷಕಾಂಶ ಅಂಶ ಹೆಚ್ಚಿದೆ ಎಂದು ಪಟ್ಟಣದ ನಿವಾಸಿ ವಿನಾಯಕ ತಿಪ್ಪಕ್ಕನವರ ಮಾಹಿತಿ ನೀಡಿದರು.  

Follow Us:
Download App:
  • android
  • ios