ಕಲಬುರಗಿ ಜಿಲ್ಲೆಯಲ್ಲಿ 2023ರ ಮುಂಗಾರು ಹಂಗಾಮಿನಲ್ಲಿ ತೊಗರಿ ಬೆಳೆಗೆ 1.25 ಲಕ್ಷ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ. ಬೆಳೆ ಕಟಾವು ಪ್ರಯೋಗಗಳು ಸರ್ಕಾರದ ಮಾರ್ಗಸೂಚಿಯಂತೆ ಕೈಗೊಳ್ಳಲಾಗುತ್ತಿದೆ. ಬೆಳೆ ಇಳುವರಿ ಆಧರಿಸಿ ಬೆಳೆ ವಿಮೆ ರೈತರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಜಮೆ ಮಾಡಲಾಗುತ್ತದೆ ಎಂದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ 

ಕಲಬುರಗಿ(ಡಿ.24):  ಬೆಳೆ ವಿಮೆಗಾಗಿ ರೈತರು ಯಾವುದೇ ವ್ಯಕ್ತಿಗೆ ಹಣ ನೀಡುವ ಅವಶ್ಯಕತೆ ಇರುವುದಿಲ್ಲ. ಯಾರಾದರು ಬೆಳೆ ಕಟಾವು ಕ್ಷೇತ್ರಕ್ಕೆ ಬಂದು ಬೆಳೆ ವಿಮೆ ಮಂಜೂರು ಮಾಡಲು ಹಣ ಕೇಳಿದ್ದಲ್ಲಿ ಅಂತಹವರ ವಿರುದ್ಧ ಸಮೀಪದ ಪೊಲೀಸ್ ಠಾಣೆಯಲ್ಲಿ ಅಥವಾ ತಹಸೀಲ್ದಾರ್‌ ಕಚೇರಿಯಲ್ಲಿ ದೂರು ದಾಖಲಿಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2023ರ ಮುಂಗಾರು ಹಂಗಾಮಿನಲ್ಲಿ ತೊಗರಿ ಬೆಳೆಗೆ 1.25 ಲಕ್ಷ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ. ಬೆಳೆ ಕಟಾವು ಪ್ರಯೋಗಗಳು ಸರ್ಕಾರದ ಮಾರ್ಗಸೂಚಿಯಂತೆ ಕೈಗೊಳ್ಳಲಾಗುತ್ತಿದೆ. ಬೆಳೆ ಇಳುವರಿ ಆಧರಿಸಿ ಬೆಳೆ ವಿಮೆ ರೈತರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಜಮೆ ಮಾಡಲಾಗುತ್ತದೆ ಎಂದರು.

ರೈತರಿಗೆ ಸಾಲ ವಸೂಲಾತಿ ನೋಟಿಸ್‌ ಶೂಲ: ಕಂಗಾಲಾದ ಅನ್ನದಾತ..!

ಕೆಲವು ಪುಢಾರಿಗಳು, ದಲ್ಲಾಳಿಗಳು ಗುಂಪು ರಚಿಸಿಕೂಂಡು ಬೆಳೆ ಕಟಾವು ಕ್ಷೇತ್ರಕ್ಕೆ ಬಂದು ಬೆಳೆ ವಿಮೆ ಮಂಜೂರು ಮಾಡಲು ರೈತರಿಂದ ಹಣ ಕೇಳುತ್ತಿದ್ದಾರೆಂದು ನಿಂಬರ್ಗಾ ಹಾಗೂ ಇತರೆ ಗ್ರಾಮ ಪಂಚಾಯಿತಿಯ ರೈತರು ದೂರು ನೀಡಿದ್ದಾರೆ. ಇಂತಹ ಪ್ರಕರಣಗಳು ಮತ್ತೆ ಬೇರೆ ಎಲ್ಲಾದರು ಕಂಡುಬಂದಲ್ಲಿ ತಕ್ಷಣವೇ ರೈತರು ಪೊಲೀಸ್ ಠಾಣೆ ಅಥವಾ ತಹಸಿಲ್ದಾರ್‌ ಕಚೇರಿಯಲ್ಲಿ ದೂರು ದಾಖಲಿಸಬೇಕು. ರೈತರಿಗೆ ಮೋಸ ಮಾಡುವವರ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.

ಇನ್ನು ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಮೂಲ ಕಾರ್ಯಕರ್ತರು (ಗ್ರಾಮ ಲೆಕ್ಕಾಧಿಕಾರಿ) ಜೊತೆಗೆ ಸೂಪರ್‌ವೈಸರ್, ನೋಡಲ್ ಅಧಿಕಾರಿ ಹಾಗೂ ಯೂನಿವರ್ಸಲ್ ಸೊಂಪೊ ಇನ್ಶುರೆನ್ಸ್ ಸಂಸ್ಥೆಯ ಪ್ರತಿನಿಧಿಗಳು ಜೊತೆಗೂಡಿ ರೈತರ ಸಮಕ್ಷಮ ಬೆಳೆ ಕಟಾವು ಮಾಡಿ ತಕ್ಷಣ ಸ್ಥಳದಲ್ಲಿಯೆ ಬೆಳೆಯ ಇಳುವರಿಯನ್ನು ಮೊಬೈಲ್ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ ಎಂದಿದ್ದಾರೆ.