ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಗೌಪ್ಯ ಲಂಚ್ ಮೀಟಿಂಗ್ ನಡೆಸಿದ್ದಾರೆ. ಕರಾವಳಿಯ ವಿಶೇಷ ಖಾದ್ಯವಾದ ನಾಟಿ ಕೋಳಿ ಸವಿದ ಈ ನಾಯಕರ ಭೇಟಿ, ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ.

ಮಂಗಳೂರು: ರಾಜಕೀಯ ವಲಯದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳ ರಾಜಕೀಯ ಚರ್ಚೆಗಳು ಇನ್ನೂ ತಣ್ಣಗಾಗಿಲ್ಲದಿರುವಾಗ, ಇದೇ ಸಾಲಿಗೆ ಮತ್ತೊಂದು ಲಂಚ್ ಮೀಟಿಂಗ್‌ ಕೂಡ ಸೇರ್ಪಡೆಯಾಗಿದೆ. ಮಂಗಳೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮಂಗಳವಾರ ಮಧ್ಯಾಹ್ನ ಕಾವೇರಿ ಗೆಸ್ಟ್ ಹೌಸ್‌ನಲ್ಲಿ ನಡೆದ ಈ ವಿಶೇಷ ಲಂಚ್ ಮೀಟಿಂಗ್ ಈಗ ರಾಜಕೀಯ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Add Asianetnews Kannada as a Preferred SourcegooglePreferred

1.30ರಿಂದ 2 ಗಂಟೆವರೆಗೆ ವಿಶೇಷ ಲಂಚ್ ವ್ಯವಸ್ಥೆ

ಮಧ್ಯಾಹ್ನ 1.30ರಿಂದ 2 ಗಂಟೆಯವರೆಗೆ ಭೋಜನ ಕೂಟ ಏರ್ಪಡಿಸಲಾಗಿತ್ತು. ಇದಕ್ಕೂ ಮುನ್ನ ಬೆಳಗ್ಗೆ 15 ನಿಮಿಷಗಳ ಹೈ ವೋಲ್ಟೇಜ್ ಚರ್ಚೆಯ ಪ್ರಸ್ತಾಪವೂ ರಾಜಕೀಯ ವಲಯದಲ್ಲಿ ದೊಡ್ಡ ಮಾತಾಗಿತ್ತು.

ಕೋಣೆಯೊಂದರಲ್ಲಿ 12 ಸೀಟುಗಳ ವಿಶೇಷ ವ್ಯವಸ್ಥೆ

ಗೆಸ್ಟ್ ಹೌಸ್‌ನ ಒಂದು ಕೋಣೆಯಲ್ಲಿ 12 ಸೀಟ್‌ಗಳನ್ನು ವ್ಯವಸ್ಥೆ ಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಕೆಲ ಪ್ರಮುಖ ಸಚಿವರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಂಪೂರ್ಣ ವ್ಯವಸ್ಥೆಯನ್ನೂ ಅತ್ಯಂತ ಗೌಪ್ಯತೆಯಿಂದ ನಿರ್ವಹಿಸಲಾಗಿದೆ.

ಕರಾವಳಿಯ ನಾಟಿ ಕೋಳಿ ಮೆನುಗೆ ವಿಶೇಷ ಆದ್ಯತೆ

ಈ ಲಂಚ್ ಮೀಟಿಂಗ್‌ ಗೆ ವಿಶೇಷ ರುಚಿಯನ್ನು ನೀಡಿದ್ದು ಕರಾವಳಿಯ ನಾಟಿ ಕೋಳಿ ಖಾದ್ಯ. ಮಂಗಳೂರಿನ ವಿಶಿಷ್ಟ ನಾಟಿ ಕೋಳಿ ರೆಸಿಪಿ, ಅದರ ಜೊತೆಗೆ ಮೀನು ಸೇರಿ ಅನೇಕ ಮೆನುಗಳನ್ನು ರೆಡಿ ಮಾಡಲಾಗಿದೆ. ನೀರು ದೋಸೆ, ಆಪಂ, ಅಂಜಲ್ (ಸೀರ್ ಮೀನು) ಫ್ರೈ, ಸಿಗಡಿ (ಪ್ರಾನ್ಸ್) ಗೀ ರೋಸ್ಟ್, ಜೊತೆಗೆ ಇನ್ನೂ ಅನೇಕ ಬಗೆಯ ಸೈಡ್ ಡಿಷ್‌ಗಳನ್ನು ಬಡಿಸಲಾಗಿತ್ತು. ಮುಖ್ಯಮಂತ್ರಿಗೂ, ವೇಣುಗೋಪಾಲಿಗೂ ಹಾಗೂ ಇತರ ನಾಯಕರಿಗೂ ಮನಸಾರೆ ಸವಿಯುವಂತೆ ವಿಶೇಷ ಮೆನು ಸಿದ್ಧವಾಗಿತ್ತು.

ಮಂಗಳೂರು ವಿವಿ ಗೆಸ್ಟ್ ಹೌಸ್ ತಂಡ

ಈ ಸಂಪೂರ್ಣ ಖಾದ್ಯ ಸಿದ್ಧತೆಯ ಹಿಂದೆ ಮಂಗಳೂರು ವಿಶ್ವವಿದ್ಯಾಲಯ ಗೆಸ್ಟ್ ಹೌಸ್‌ನ ಅಡುಗೆಗಾರರ ವಿಶೇಷ ಕೈಚಳಕವಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾತನಾಡಿದ ಊಟದ ಉಸ್ತುವಾರಿ ಪ್ರವೀಣ್, ನಾಯಕರಿಗಾಗಿ ನಾಟಿ ಕೋಳಿ ಮತ್ತು ಕರಾವಳಿಯ ಸ್ಪೆಷಲ್ ಐಟಂಗಳನ್ನೇ ಮಾಡಲಾಗಿದೆ. ಎಲ್ಲಾ ಐಟಂಗಳನ್ನು ಅತ್ಯಂತ ಶ್ರದ್ಧೆಯಿಂದ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಂಚ್ ಮೀಟಿಂಗ್‌ನ ರಾಜಕೀಯ ಕುತೂಹಲ

ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳ ರಾಜಕೀಯ ಪ್ರಸ್ತಾಪವೇ ಸಾಕಷ್ಟು ಸಂಚಲನ ಮಾಡಿದ್ದರೆ, ಇದೀಗ ನಡೆದ ಲಂಚ್ ಮೀಟಿಂಗ್‌ವೂ ಹೊಸ ಊಹಾಪೋಹಕ್ಕೆ ಕಾರಣವಾಗಿದೆ. ವಿಶೇಷವಾಗಿ ಸಿಎಂ–ವೇಣುಗೋಪಾಲ್–ಸಚಿವರ ಒಕ್ಕೂಟ ಸಭೆ, ಅದರ ಬಳಿಕ ನಡೆದ ಗೌಪ್ಯ ಲಂಚ್… ರಾಜ್ಯ ರಾಜಕೀಯದಲ್ಲಿ ಈಗ ಮತ್ತಷ್ಟು ಚರ್ಚೆಗಳಿಗೆ ವೇದಿಕೆ ಒದಗಿಸಿದೆ.