ಮಂಡ್ಯದ ರೈತರಿಂದ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಮೆಗೆ ರಕ್ತಾಭಿಷೇಕ! ರೈತರ ಬೆಳೆಗೆ ವೈಜ್ಞಾನಿಕ ಬೆಲೆಗಾಗಿ ಆಗ್ರಹ
ಕಬ್ಬು ಸೇರಿ ಇತರೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಮಂಡ್ಯ ನಗರದಲ್ಲಿ ಕಳೆದ 50 ದಿನಗಳಿಂದ ಶಾಂತಿಯುತ ಅಹೋರಾತ್ರಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದ ಮಂಡ್ಯ ಜಿಲ್ಲೆಯ ರೈತರು ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಪ್ರತಿಮೆ ಮೇಲೆ ಅಭಿಷೇಕ ಮಾಡಿದ್ದಾರೆ.
ಮಂಡ್ಯ (ಡಿ.28): ರಾಜ್ಯದಲ್ಲಿ ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದೆ. ಈಗಾಗಲೇ ರಸ್ತೆಯನ್ನು ಅಡ್ಡಗಟ್ಟುವುದು, ಉರುಳು ಸೇವೆ, ಅರೆಬೆತ್ತಲೆ ಮೆರವಣಿಗೆಯನ್ನು ಮಾಡಿದ್ದ ರೈತರು ಮಂಡ್ಯ ನಗರವನ್ನು ಬಂದ್ ಮಾಡುವಲ್ಲಿಯೂ ಯಶಸ್ವಿಯಾಗಿದ್ದರು. ಈಗ ಸಹನೆ ಕಟ್ಟೆಯೊಡೆದು ಒಂದು ಹೆಜ್ಜೆ ಮುಂದೆ ಹೋಗಿರುವ ರೈತರು ತಮ್ಮ ರಕ್ತವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಮೆ ಮೇಲೆ ಅಭಿಷೇಕ ಮಾಡಿದ್ದಾರೆ.
ಕಬ್ಬು ಬೆಳೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಬೆಂಬಲ ಬೆಲೆ ತೀವ್ರ ಕಡಿಮೆಯಾಗಿದೆ. ಕಬ್ಬಿನ ಬೆಲೆಯನ್ನು ಹೆಚ್ಚಳ ಮಾಡಬೇಕು ಎನ್ನುವುದಕ್ಕಿಂತ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಬೇಕು ಎಂದು ರೈತರು ಆಘ್ರಹಿಸುತ್ತಿದ್ದಾರೆ. ಇನ್ನು ಅಧಿವೇಶನ ಆರಂಭವಾದಂದಿನಿಂದ ಬೆಳಗಾವಿ, ಬೆಂಗಳೂರು, ಬಾಗಲಕೋಟೆ, ರಾಯಚೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ವಿವಿಧೆಡೆ ರೈತರ ಪ್ರತಿಭಟನೆ ಜೋರಾಗಿ ನಡೆದಿದೆ. ಆದರೆ, ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಮಂಡ್ಯದಲ್ಲಿ ರೈತರು ಮಾಡುತ್ತಿರುವ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಹೀಗಾಗಿ ವಿಚಿತ್ರ ಪ್ರತಿಭಟನೆ ಮಾಡಿದ್ದಾರೆ.
Assembly Election 2023: ಮಂಡ್ಯ ಗೆಲುವಿಗೆ 'ಪಂಚರತ್ನ' ಮಂತ್ರ: 2023ರಲ್ಲಿ ಜೆಡಿಎಸ್ ಭದ್ರಕೋಟೆ ಏನಾಗಲಿದೆ?
ಧರಣಿ 50 ದಿನ ತಲುಪಿದ ಬೆನ್ನಲ್ಲೇ ರಕ್ತಾಭಿಷೇಕ: ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವಂತೆ ರೈತರು ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಮಾಡುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿ ಇಂದಿಗೆ 50 ದಿನ ತಲುಪಿದೆ. ಇಷ್ಟಾದರೂ ದು ರೈತರ ಸಮಸ್ಯೆಗಳನ್ನು ಆಲಿಸದೆ, ಬೇಡಿಕೆಯನ್ನ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರದ ನಡೆ ಖಂಡಿಸಿ ಇಂದು ವಿಭಿನ್ನ ಪ್ರತಿಭಟನೆ ಮಾಡಲಾಗುತ್ತಿದೆ ಎಂದು 30ಕ್ಕೂ ಹೆಚ್ಚು ರೈತರು ತಮ್ಮ ರಕ್ತವನ್ನು ಸಿರಿಂಜ್ಗೆ (ಇಂಜೆಕ್ಷನ್ ಟ್ಯೂಬ್) ತುಂಬಿಸಿಕೊಂಡು ಸಂಗ್ರಹಣೆ ಮಾಡಿಕೊಂಡಿದ್ದಾರೆ. ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರ ಪ್ರತಿಮೆಯೊಂದನ್ನು ತರಿಸಿ ಅದರ ಮೇಲೆ ರಕ್ತವನ್ನು ಸುರಿದು ಅಭಿಷೇಕ ಮಾಡಿದ್ದಾರೆ.
ರೈತರನ್ನು ವಶಕ್ಕೆ ಪಡೆದ ಪೊಲೀಸರು: ವಿಶ್ವೇಶ್ವರಯಯ ಪ್ರತಿಮೆ ಮುಂಭಾಗ ರೈತರು ಸಿಎಂ ಪ್ರತಿಮೆಗೆ ರಕ್ತಾಭಿಷೇಕ ಮಾಡುತ್ತಿದ್ದಂತೆಯೇ, ಅಲ್ಲಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ರಕ್ತದ ಅಭಿಷೇಕ ಮಾಡಿದ ಪ್ರತಿಮೆಯನ್ನೂ ವಶಕ್ಕೆ ಪಡೆದಿದ್ದು, ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಎರಡು ದಿನ ಅಮಿತ್ ಶಾ ಪ್ರವಾಸ: ಬಿಜೆಪಿ ನಾಯಕರ ಜೊತೆ ಹೈವೋಲ್ಟೇಜ್ ಮೀಟಿಂಗ್?
ಅಮಿತ್ ಶಾ ಪ್ರವಾಸಕ್ಕೆ ಮುಳುವಾದರೇ ಪೊಲೀಸರು: ಮಂಡ್ಯ ಜಿಲ್ಲೆಯ ರೈತರು ಕಳೆದ ಐವತ್ತು ದಿನಗಳಿಂದ ಶಾಂತಿಯುತ ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ. ಯಾವತನ್ನೂ ರೈತರನ್ನು ರೊಚ್ಚಿಗೇಳಿಸುವ ಕೆಲಸ ಮಾಡಿರಲಿಲ್ಲ. ಆದರೆ, ಇಂದು ರೈತರು ಸಿಎಂ ಪ್ರತಿಮೆ ಮೇಲೆ ರಕ್ತಾಭಿಷೇಕ ಮಾಡಿದ ಬೆನ್ನಲ್ಲೇ ಅವರನ್ನು ಬಂಧಿಸುವ ಮೂಲಕ ಅವರ ಮೇಲೆ ಪೊಲೀಸರ ಗೂಂಡಾ ವರ್ತನೆ ತೋರಿದ್ದಾರೆ. ಶಾಂತವಾಗಿದ್ದ ಅನ್ನದಾತರನ್ನು ಪೊಲೀಸರು ರೊಚ್ಚಿಗೇಳಿಸಿದ್ದಾರೆ. ಆದರೆ, ಈ ನಿರ್ಧಾರ ಮುಂದೆ ಕೇಂದ್ರ ಗೃಹ ಸಚಿವ ಮಂಡ್ಯ ಪ್ರವಾಸಕ್ಕೆ ಬರುವ ವೇಳೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗುವ ಅಥವಾ ಮುತ್ತಿಗೆ ಹಾಕುವ ಸಾಧ್ಯತೆಯೂ ಹೆಚ್ಚಾಗಿದೆ. ಇನ್ನು ರೈತರನ್ನು ಒಕ್ಕಲೆಬ್ಬಿಸಿರುವುದು ಸರ್ಕಾರಕ್ಕೂ ಮುಳುಗಾಗುವ ಸಾಧ್ಯತೆ ಹೆಚ್ಚಾಗಿದೆ.