ಲಾಕ್ಡೌನ್ ಎಫೆಕ್ಟ್: ರಾಜ್ಯ ಸರ್ಕಾರಿ ನೌಕರರ ವೇತನಕ್ಕೆ ಬೀಳುತ್ತಾ ಕತ್ತರಿ..?
ರಾಜ್ಯ ಸರ್ಕಾರಿ ನೌಕರರ ವೇತನ ಕಟ್ ಮಾಡುವ ಸಂಬಂಧ ಸಿಎಂ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಭೆ| ರಾಜ್ಯದಲ್ಲೂ ಕೇರಳ, ಕೇಂದ್ರ ಸರ್ಕಾರದ ಮಾದರಿ ಅನುಸರಿಸಲು ಸಿಎಂಗೆ ಆರ್ಥಿಕ ಅಧಿಕಾರಿಗಳ ಸಲಹೆ| ರಾಜ್ಯ ಸರ್ಕಾರಿ ನೌಕರರ ವೇತನ ಕಟ್ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡದ ಸಿಎಂ| ಸದ್ಯಕ್ಕೆ ಈ ರೀತಿಯ ಯಾವುದೇ ಕ್ರಮ ಬೇಡ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಯಡಿಯೂರಪ್ಪ|
ಧಾರವಾಡ(ಏ.24): ಕೊರೋನಾ ವೈರಸ್ನಿಂದ ತಪ್ಪಿಸಿಕೊಳ್ಳಲು ವಿಶ್ವಾದ್ಯಂತ ಬಹತೇಕ ರಾಷ್ಟ್ರಗಳು ಲಾಕ್ಡೌನ್ ಮಾಡಿವೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ದೇಶಾದ್ಯಂತ ಲಾಕ್ಡೌನ್ಗೆ ಆದೇಶಿಸಿದ್ದಾರೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಆದಾಯ ಹರಿದು ಬರುತ್ತಿಲ್ಲ.
ಹೀಗಾಗಿ ರಾಜ್ಯ ಸರ್ಕಾರಿ ನೌಕರರ ವೇತನ ಕಟ್ ಮಾಡುವ ಸಂಬಂಧ ಇಂದು(ಶುಕ್ರವಾರ) ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲೂ ಕೇರಳ ಮಾದರಿಯಲ್ಲಿ ಒಂದು ತಿಂಗಳ ವೇತನವನ್ನ 6 ಇನ್ಸ್ಟಾಲ್ಮೆಂಟ್ನಲ್ಲಿ ಕಟ್ ಮಾಡಲು ಅಧಿಕಾರಿಗಳು ಯೋಜನೆ ರೂಪಿಸಿದ್ದರು. ರಾಜ್ಯದಲ್ಲೂ ಕೇರಳ ಆಥವಾ ಕೇಂದ್ರ ಸರ್ಕಾರದ ಮಾದರಿ ಅನುಸರಿಸಲು ಸಿಎಂಗೆ ಆರ್ಥಿಕ ಅಧಿಕಾರಿಗಳ ಸಲಹೆ ನೀಡಿದ್ದರು ಎಂದು ತಿಳಿದು ಬಂದಿದೆ.
14 ಜಿಲ್ಲೇಲಿ ಲಾಕ್ಡೌನ್ ಸಡಿಲ: ಜನಸಂಚಾರ ಹಠಾತ್ ಹೆಚ್ಚಳ
ಆದರೆ, ಸಿಎಂ ಯಡಿಯೂರಪ್ಪ ಅವರು ರಾಜ್ಯ ಸರ್ಕಾರಿ ನೌಕರರ ವೇತನ ಕಟ್ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ, ಸದ್ಯಕ್ಕೆ ಈ ರೀತಿಯ ಯಾವುದೇ ಕ್ರಮ ಬೇಡ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.
ಈ ಮೊದಲು ನೌಕರರ ವೇತನದ ಒಂದಷ್ಟು ಭಾಗವನ್ನ ಮೂರು ತಿಂಗಳು ಮುಂದೆ ಹಾಕಲು ರಾಜ್ಯ ಸರ್ಕಾರ ಆಲೋಚನೆಯಲ್ಲಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ತೆರಿಗೆ ಸಂಗ್ರಹ ಶೂನ್ಯವಾಗಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿತ್ತು.
ಕೇಂದ್ರ ಸರ್ಕಾರ ರಾಜ್ಯ ತೆರಿಗೆ ಪಾಲಲ್ಲಿ 1678 ಕೋಟಿ ಬಿಡುಗೆಗೊಳಿಸಿದ ಹಿನ್ನೆಲೆಯಲ್ಲಿ ಸಿಎಂ ನೌಕರರ ವೇತನ ಕಟ್ ಮಾಡುವುದು ಬೇಡ ಎಂದು ಹೇಳಿದ್ದಾರೆ. ಅಲ್ಲದೇ 5495 ಕೋಟಿ ಸ್ಪೆಷಲ್ ಅನುದಾನ ನೀಡಲು ಕೇಂದ್ರ ಸರ್ಕಾರ ಭರವಸೆ ನೀಡಿದೆ. 15 ಫೈನಾನ್ಸ್ ಕಮಿಷನ್ ಶಿಫಾರಸಿನಂತೆ ರಾಜ್ಯಕ್ಕೆ ಸ್ಪೆಷಲ್ ಗ್ರಾಂಟ್ಸ್ ಕೊಡಲು ಕೇಂದ್ರ ಒಪ್ಪಿದೆ. ಹೀಗಾಗಿ ಆರ್ಥಿಕ ತೊಂದರೆ ಸರಿಹೋಗಲಿದೆ. ಸದ್ಯಕ್ಕೆ ಮ್ಯಾನೇಜ್ ಮಾಡಿ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.