Asianet Suvarna News Asianet Suvarna News

ಕೋಲಾರದಲ್ಲಿ ಸಿದ್ದು ಸ್ಪರ್ಧೆ : ಬಹಿರಂಗ ಕಿತ್ತಾಟ

: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವ ವಿಚಾರ ಶುಕ್ರವಾರ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾರೀ ಹೈಡ್ರಾಮಕ್ಕೆ ಸಾಕ್ಷಿಯಾಯಿತು.

Clashes over Siddaramaiah Contesting in Kolar Issue snr
Author
First Published Dec 31, 2022, 6:43 AM IST

  ಕೋಲಾರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವ ವಿಚಾರ ಶುಕ್ರವಾರ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾರೀ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಸಿದ್ದರಾಮಯ್ಯ ಸ್ಪರ್ಧೆಗೆ ವಿರೋಧ ಎದ್ದುಕಾಣದಿದ್ದರೂ ಈ ವಿಚಾರವಾಗಿ ಜಿಲ್ಲಾ ಕಾಂಗ್ರೆಸ್‌ನ ಬಣ ಜಗಳ ಮತ್ತೆ ಬೀದಿಗೆ ಬಂದು ಅಭಿಪ್ರಾಯ ಸಂಗ್ರಹಕ್ಕೆ ಆಗಮಿಸಿದ್ದ ವೀಕ್ಷಕರು ಹೈರಾಣಾಗಬೇಕಾಯಿತು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Election)  ಕೋಲಾರ ಕ್ಷೇತ್ರದ ಟಿಕೆಟ್‌ (Ticket)  ಆಕಾಂಕ್ಷಿಗಳ ಕುರಿತ ಅಭಿಪ್ರಾಯ ಸಂಗ್ರಹ ವಿಚಾರವಾಗಿ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಕಾಂಗ್ರೆಸ್‌ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಸಭೆಗೆ ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸಚಿವರಾದ ಕೆ.ಎಚ್‌.ಮುನಿಯಪ್ಪ, ರಾಮಲಿಂಗಾರೆಡ್ಡಿ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್ತ, ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ ನಾರಾಯಣಸ್ವಾಮಿ ಸಮ್ಮುಖದಲ್ಲೇ ಈ ಎಲ್ಲ ಹೈಡ್ರಾಮ ನಡೆಯಿತು.

ಅಭಿಪ್ರಾಯ ಸಂಗ್ರಹಿಸಿ ವಾಪಸ್‌ ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರನ್ನು ಅಡ್ಡಗಟ್ಟಿದ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹಾಗೂ ಕೆ.ಎಚ್‌ ಮುನಿಯಪ್ಪ ಬಣದ ನಡುವೆ ಒಂದು ಹಂತದಲ್ಲಿ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಒಂದು ಬಣದವರು ಮುನಿಯಪ್ಪಗೆ ಜೈಕಾರ ಹಾಕಿದರೆ, ರಮೇಶ್‌ ಕುಮಾರ್‌ ಬಣದವರು ಸಿದ್ದರಾಮಯ್ಯಗೆ ಜೈಕಾರ ಹಾಕಿದರು. ಎರಡೂ ಬಣದವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಸಿದ್ದರಾಮಯ್ಯರಿಗೆ ಟಿಕೆಟ್‌ ನೀಡಬೇಕು ಎಂದು ರಮೇಶ್‌ ಕುಮಾರ್‌ ಬಣದವರು ಪಟ್ಟು ಹಿಡಿದರೆ, ಮುನಿಯಪ್ಪ ಬಣದವರು ಸಿದ್ದರಾಮಯ್ಯಗೆ ಟಿಕೆಟ್‌ ನೀಡಿ ಆದರೆ ನಮ್ಮ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ತಿರುಗೇಟು ನೀಡಿದರು.

 ಕಾಂಗ್ರೆಸ್ ಬಿಟ್ಟವರಿಗೆ ಮರಳಿ ಆಹ್ವಾನ

 ಬೆಳಗಾವಿ :  ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಅನೇಕರು ಕಾಂಗ್ರೆಸ… ಸೇರಲು ಉತ್ಸುಕರಾಗಿದ್ದಾರೆ. ಬೇರೆ ಪಕ್ಷದಿಂದ ಬರಲು ಇಚ್ಛಿಸುವವರಿಗೆ ಮುಕ್ತ ಆಹ್ವಾನ ನೀಡುತ್ತೇನೆ. ಯಾರೆಲ್ಲಾ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ… ಗಾಂಧಿ ಅವರ ಮುಖಂಡತ್ವದಲ್ಲಿ ನಂಬಿಕೆ ಇಟ್ಟು, ಪಕ್ಷದ ಸಿದ್ಧಾಂತ ಒಪ್ಪಿ ಬೇಷರತ್ತಾಗಿ ಸೇರಬಯಸುವರೋ ಅವರು ಅರ್ಜಿ ಹಾಕಬಹುದು. ಸ್ಥಳೀಯ ಮಟ್ಟದಲ್ಲಿ ಸೇರಲು ಅವಕಾಶ ಮಾಡಿಕೊಡಲಾಗುವುದು. ರಾಜ್ಯದಲ್ಲಿ ಬಲಿಷ್ಠ ಕಾಂಗ್ರೆಸ್‌ ಸರ್ಕಾರ ಬರಲಿದ್ದು, ಅದರ ಭಾಗವಾಗಿರಬೇಕು ಎಂದು ಬಯಸುವವರು ಪಕ್ಷ ಸೇರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಕಾಂಗ್ರೆಸ್‌ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಾವು ಯಾರನ್ನೂ ಬೇಡ ಎಂದು ತಿರಸ್ಕರಿಸುವುದಿಲ್ಲ. ನಮ್ಮಿಂದ ದೂರ ಹೋಗಿರುವ ಅನೇಕರು ಮತ್ತೆ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅರ್ಜಿ ಹಾಕುವಂತೆ ತಿಳಿಸಿದ್ದೇನೆ ಎಂದರು.

ಪಕ್ಷ ಸೇರುವವರಲ್ಲಿ ಈ ಹಿಂದೆ ಪಕ್ಷ  ಬಿಟ್ಟು ಹೋಗಿದ್ದ 15 ಶಾಸಕರು (MLA)  ಇದ್ದಾರಾ ಎಂಬ ಪ್ರಶ್ನೆಗೆ, ಈಗ ಆ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು. ಬಿಜೆಪಿ (BJP)  ಸರ್ಕಾರದ ಭ್ರಷ್ಟಾಚಾರ ನೋಡಿ ಇಲ್ಲಿಂದ ಹೋದವರು ಸೇರಿದಂತೆ ಎಲ್ಲರೂ ಬೇಸತ್ತಿದ್ದಾರೆ. ಕೆಲವರು ತಮ್ಮ ಬೇಸರ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ವ್ಯಕ್ತಪಡಿಸಿಲ್ಲ. ಈಗ ಈ ವಿಚಾರವಾಗಿ ಹೆಚ್ಚು ಚರ್ಚೆ ಮಾಡುವುದಿಲ್ಲ’ ಎಂದರು.

ರಾಮನಗರದಲ್ಲಿ ರಾಮಮಂದಿರ ಕಟ್ಟುವ ಬಗ್ಗೆ ಸಚಿವ ಅಶ್ವತ್ಥ ನಾರಾಯಣ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಕಟ್ಟಲಿ, ಅದನ್ನು ಬೇಡ ಎಂದು ತಡೆದಿರುವವರು ಯಾರು? ಅವರು ಜಿಲ್ಲಾ ಮಂತ್ರಿಗಳಾಗಿದ್ದು, ರಾಮಮಂದಿರ ಕಟ್ಟುತ್ತೇವೆ ಎಂದರೆ ಅದನ್ನು ತಡೆಯುತ್ತಿರುವವರು ಯಾರು? ಅವರು ರಾಮಮಂದಿರ, ಸೀತಾ ಮಂದಿರ, ಹನುಮಂತನ ಮಂದಿರ ಕಟ್ಟಲಿ, ಶಿವ ಮಂದಿರ ಕಟ್ಟಲಿ. ಬೇಕಾದರೆ ಅಶ್ವತ್ಥ ನಾರಾಯಣ ಅವರ ಮಂದಿರವನ್ನೂ ಕಟ್ಟಿಕೊಳ್ಳಲಿ. ನಾನು 35 ವರ್ಷಗಳಿಂದ ಅಲ್ಲಿ ಬಹಳ ಗಂಡುಗಳನ್ನು ನೋಡಿದ್ದೇನೆ ಎಂದರು.

ಸರ್ಕಾರ ಹವಾನಿಯಂತ್ರಿತ ಕೊಠಡಿಯಲ್ಲಿ ಮಾಸ್‌್ಕ ಧರಿಸಿ ಎಂದು ಹೇಳಿದೆ. ಆರೋಗ್ಯ ಸಚಿವರು, ಮುಖ್ಯಮಂತ್ರಿಗಳು ಹಾಗೂ ಇತರೆ ಸಚಿವರು ಹಾಗೂ ನಾಯಕರು ಎಸಿ ಕೊಠಡಿಯಲ್ಲಿ ಸಭೆ ಮಾಡುತ್ತಿದ್ದಾರೆ. ಅಧಿವೇಶನದ ಸಮಯದಲ್ಲಿ ಅವರು ಯಾಕೆ ಮಾಸ್‌್ಕ ಧರಿಸಿಲ್ಲ? ನಿನ್ನೆ ಮುಖ್ಯಮಂತ್ರಿಗಳು, ಗೃಹಸಚಿವರು ಸೇರಿದಂತೆ ಹಲವು ಮಂದಿ ಸದನದಲ್ಲಿ ಉತ್ತರ ನೀಡುವಾಗ ಮಾಸ್‌್ಕ ಯಾಕೆ ಧರಿಸಿರಲಿಲ್ಲ? ಅವರು ಹಾಕದೇ ಬೇರೆಯವರಿಗೆ ಹಾಕಿ ಎಂದು ಹೇಳುತ್ತಿದ್ದಾರೆ. ಮೊದಲು ನೀವುಗಳು ನಿಮ್ಮ ಸಭೆಗಳಲ್ಲಿ ಮಾಸ್‌್ಕ ಧರಿಸಬೇಕು. ಮಾಸ್‌್ಕ ಕಡ್ಡಾಯ ಎಂದು ಘೋಷಿಸಿದ ಮೇಲೆ ಸದನದಲ್ಲೇ ಅವರು ಧರಿಸಬೇಕಿತ್ತು. ಅದನ್ನು ಬಿಟ್ಟು ಬಾರಿನಲ್ಲಿ ಮಾಸ್‌್ಕ ಹಾಕಬೇಕು ಎಂದು ಹೇಳುತ್ತಾರೆ ಎಂದು ತಿಳಿಸಿದರು.

Follow Us:
Download App:
  • android
  • ios