ಬಂಟ್ವಾಳ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಜಟಾಪಟಿ, ಸ್ಥಳದಲ್ಲಿ ಬಿಗುವಿನ ವಾತಾವರಣ
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವೀಕ್ಷಣೆಗೆ ತೆರಳಿದ್ದ ವೀಕ್ಷಣೆಗೆಂದು ಮಾಜಿ ಸಚಿವ ಬಿ ರಮಾನಾಥ್ ರೈ ನೇತೃತ್ವದ ನಿಯೋಗ| ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ ನಿರ್ಮಾಣವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ| ಸ್ಥಳದಲ್ಲಿ ಪೊಲೀಸರ ನಿಯೋಜನೆ|
ಬಂಟ್ವಾಳ(ಜ.30): ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ.
ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ ನಿರ್ಮಾಣವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನ ನಾಳೆ(ಭಾನುವಾರ) ಸಚಿವ ಕೆ .ಎಸ್ ಈಶ್ವರಪ್ಪ ಅವರು ಉದ್ಘಾಟಿಸಲಿದ್ದಾರೆ. ಹೀಗಾಗಿ ಉದ್ಘಾಟನೆಗೂ ಮುನ್ನ ಯೋಜನೆ ವೀಕ್ಷಣೆಗೆಂದು ಮಾಜಿ ಸಚಿವ ಬಿ ರಮಾನಾಥ್ ರೈ ನೇತೃತ್ವದ ನಿಯೋಗ ತೆರಳಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿದ್ದರು. ಹೀಗಾಗಿ ಸಂಘರ್ಷ ತಡೆಯುವ ಹಿನ್ನಲೆಯಲ್ಲಿ ಯೋಜನಾ ಘಟಕಕ್ಕೆ ಪೋಲಿಸರು ಗೇಟ್ ಹಾಕಿದ್ದರು.
ಬಂಟ್ವಾಳದ ಕಾರಿಂಜೇಶ್ವರ ದೇಗುಲದ ಭಕ್ತರೆ ಎಚ್ಚರ!
ಇದರಿಂದ ಕುಪಿತರಾದ ರಮಾನಾಥ್ ರೈ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ನೆರೆದಿದ್ದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಜಟಾಪಟಿ ನಡೆದಿದೆ. ಸ್ಥಳದಲ್ಲಿನ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಂಟ್ವಾಳ ಠಾಣಾ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.