ಸಂಬಳ ಸಿಗುತ್ತದೆ ಎಂಬ ಆಶಾಭಾವದಿಂದಲೇ ಪೌರಕಾರ್ಮಿಕರು ತಮ್ಮ ಕೆಲಸ ಮುಂದುವರಿಸಿದ್ದಾರೆ. ಆದರೆ, ಕಳೆದ 12 ತಿಂಗಳಿಂದ ಸಂಬಳವೇ ಸಿಕ್ಕಿಲ್ಲ. ಪರಿಣಾಮ ಅವರ ಬದುಕು ಸಂಕಷ್ಟದಲ್ಲಿ ಸಿಲುಕಿದೆ. ಇವರ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ. ಬಿಜೆಪಿ, ಕಾಂಗ್ರೆಸ್‌ ನಾಯಕರು ತಮ್ಮ ಒಣ ಪ್ರತಿಷ್ಠೆಯಲ್ಲೇ ಕಾಲಹರಣ ಮಾಡುತ್ತಿದ್ದು, ಪೌರಕಾರ್ಮಿಕರ ಬದುಕು ದಯನೀಯವಾಗಿದೆ. 

ಬೆಳಗಾವಿ(ನ.09): ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೇಮಕವಾದ 138 ಪೌರಕಾರ್ಮಿಕರ ಬದುಕು ಅತಂತ್ರವಾಗಿದೆ. ಈ ಪೌರಕಾರ್ಮಿಕರ ನೇಮಕ ವಿಚಾರ ಗೊಂದಲದ ಗೂಡಾಗಿದೆ. ಕಳೆದ ಒಂದು ವರ್ಷದಿಂದ ಸಂಬ‍ಳ ಇಲ್ಲದೇ ಕಂಗಾಲಾಗಿದ್ದಾರೆ. ಪಾಲಿಕೆಯ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌ ನಾಯಕರ ಒಣಪ್ರತಿಷ್ಠೆಗೆ ಪೌರ ಕಾರ್ಮಿಕರ ಬದುಕು ಬಸವಳಿಯುವಂತಾಗಿದೆ.

Add Asianetnews Kannada as a Preferred SourcegooglePreferred

ಈ ನೇಮಕಾತಿ ವಿಚಾರ ಬಿಜೆಪಿ, ಕಾಂಗ್ರೆಸ್‌ ನಾಯಕರ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಆದರೆ, ತಮ್ಮ ನೇಮಕದ ಬಗ್ಗೆ ಬಡ ಪೌರಕಾರ್ಮಿಕರಿಗೆ ಎಳ್ಳಷ್ಟು ಏನು ಗೊತ್ತಿಲ್ಲ. ತಮ್ಮ ನೇಮಕ ಆಗಿದೆ ಎಂಬುದು ಖಾತ್ರಿಪಡಿಸಿಕೊಂಡೇ ಕಳೆದ ಒಂದು ವರ್ಷದಿಂದ ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ವಿಚಿತ್ರವೆಂದರೆ ಯಾವೊಬ್ಬ ಪೌರಕಾರ್ಮಿಕರ ಕೈಗೆ ಸಂಬಳವೇ ಸಿಕ್ಕಿಲ್ಲ ಎಂಬುವುದು ದುರ್ದೈವದ ಸಂಗತಿ. ಕೈಯಲ್ಲಿ ಕಾಸಿಲ್ಲದೇ ಈ ಬಾರಿ ದೀಪಾವಳಿ ಹಬ್ಬವನ್ನು ಕತ್ತಲಲ್ಲೇ ಕಳೆಯುವಂತಾಗಿದೆ ಅವರ ಜೀವನ. ಕೈಯಲ್ಲಿ ಹಣ ಇಲ್ಲದೇ ಜೀವನೋಪಾಯ ನಡೆಸುವುದಾದರೂ ಹೇಗೆ ಎಂಬ ಸ್ಥಿತಿ ಅವರಿಗೆ ಬಂದೊದಗಿದೆ.

ಈ ಬಾರಿಯ ಚಳಿಗಾಲದ ಅಧಿವೇಶನ ಮಾದರಿಯಾಗಬೇಕು: ಸ್ಪೀಕರ್ ಯು.ಟಿ.ಖಾದರ್

ಸಂಬಳ ಸಿಗುತ್ತದೆ ಎಂಬ ಆಶಾಭಾವದಿಂದಲೇ ಪೌರಕಾರ್ಮಿಕರು ತಮ್ಮ ಕೆಲಸ ಮುಂದುವರಿಸಿದ್ದಾರೆ. ಆದರೆ, ಕಳೆದ 12 ತಿಂಗಳಿಂದ ಸಂಬಳವೇ ಸಿಕ್ಕಿಲ್ಲ. ಪರಿಣಾಮ ಅವರ ಬದುಕು ಸಂಕಷ್ಟದಲ್ಲಿ ಸಿಲುಕಿದೆ. ಇವರ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ. ಬಿಜೆಪಿ, ಕಾಂಗ್ರೆಸ್‌ ನಾಯಕರು ತಮ್ಮ ಒಣ ಪ್ರತಿಷ್ಠೆಯಲ್ಲೇ ಕಾಲಹರಣ ಮಾಡುತ್ತಿದ್ದು, ಪೌರಕಾರ್ಮಿಕರ ಬದುಕು ದಯನೀಯವಾಗಿದೆ. ಯಾರೋ ಮಾಡಿದ ತಪ್ಪಿಗೆ ಪೌರಕಾರ್ಮಿಕರು ಶಿಕ್ಷೆ ಅನುಭವಿಸುವಂತಹ ದುಸ್ಥಿತಿ ಈಗ ಬಂದಿದೆ.

ಪೌರ ಕಾರ್ಮಿಕರ ನೇಮಕ ವಿಚಾರವನ್ನು ಕಾಂಗ್ರೆಸ್‌ ಪಕ್ಷ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದೆ. ಪಾಲಿಕೆಯ ಸಾಮಾನ್ಯಸಭೆಯಲ್ಲಿ ಚರ್ಚೆ ನಡೆಸುವಂತೆ ಪಟ್ಟುಹಿಡಿದಿದ್ದರು. ಆದರೆ, ಆಡಳಿತ ಪಕ್ಷ ಬಿಜೆಪಿ ಸದಸ್ಯರೆಲ್ಲರೂ ಚರ್ಚೆಗೆ ಅವಕಾಶ ನೀಡದೇ ಸಭಾತ್ಯಾಗ ಮಾಡಿದ್ದರು. ಸ್ವತಃ ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಪಾಲಿಕೆಯಲ್ಲಿ ಪೌರಕಾರ್ಮಿಕರನ್ನು ಕಾನೂನು ಬಾಹಿರವಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಪಾಲಿಕೆ ಆಡಳಿತ ಪಕ್ಷದ ವಿರುದ್ಧ ಟೀಕಿಸಿದ್ದರು.

ಸಚಿವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ ಅವರು 138 ಪೌರಕಾರ್ಮಿಕರ ನೇಮಕ ವಿಚಾರ ಪಾಲಿಕೆಗೆ ಸಂಬಂಧಿಸಿದ್ದಲ್ಲ. ಸ್ವಚ್ಛತಾ ಟೆಂಡರ್‌ ಗುತ್ತಿಗೆ ಪಡೆದ ಗುತ್ತಿಗೆದಾರರೇ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಿದ್ದರು. ಹೀಗೆ ರಾಜಕೀಯ ನಾಯಕರ ಜಗಳದಲ್ಲಿ ಪೌರಕಾರ್ಮಿಕರು ಅಡ್ಡಕತ್ತರಿಯಲ್ಲಿ ಸಿಲುಕಿ ಪರದಾಡುವಂತಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 138 ರ ಪೌರಕಾರ್ಮಿಕರನ್ನು ಕಾನೂನು ಬಾಹೀರವಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.