'ರಾಜಕೀಯ ಯಕ್ಕುಟ್ಟೋಗಿದೆ, ಆರೋಗ್ಯ ನೋಡ್ಕೋ', ದೇವೇಗೌಡರಿಗೆ ಬಾಲ್ಯದ ಗೆಳೆಯನ ಸಲಹೆ
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರಿಗೆ ಬಾಲ್ಯ ಸ್ನೇಹಿತ ಆರೋಗ್ಯ ನೋಡಿಕೊಳ್ಳುವಂತೆ ಸಲಹೆ ಮಾಡಿದ್ದಾರೆ. ದೇವೇಗೌಡರು ತಮ್ಮ ಹುಟ್ಟೂರು ಹರದನಹಳ್ಳಿಯಲ್ಲಿ ಇರುವ ಶ್ರೀ ಈಶ್ವರ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಹೊರ ಬಂದಾಗ ಬಾಲ್ಯದ ಗೆಳೆಯನನ್ನು ಭೇಟಿಯಾಗಿದ್ದಾರೆ.
ಹಾಸನ: ‘ಇವತ್ತು ರಾಜಕೀಯ ಯಕ್ಕುಟ್ಟಿ(ತೀರ ಕೆಟ್ಟು) ಹೋಗಿದೆ. ಸತ್ಯಕ್ಕೆಲ್ಲಾ ನಾಲ್ಕಾಣೆ ಬೆಲೆ ಇಲ್ಲ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡ. ಮೊದ್ಲು ನಿನ್ನ ಆರೋಗ್ಯ ನೋಡ್ಕೋ’.. ಎಂದು ಮಾಜಿ ಪ್ರಧಾನಿ ದೇವೇಗೌಡ ಅವರ ಬಾಲ್ಯ ಸ್ನೇಹಿತ ಸಲಹೆ ನೀಡಿದ್ದಾರೆ.
ದೇವೇಗೌಡರು ಸೋಮವಾರ ಬೆಳಗ್ಗೆ ತಮ್ಮ ಹುಟ್ಟೂರು ಹರದನಹಳ್ಳಿಯಲ್ಲಿ ಇರುವ ಶ್ರೀ ಈಶ್ವರ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಹೊರ ಬಂದರು. ಆಗ ಅವರೂರಿನ ಬಾಲ್ಯದ ಗೆಳೆಯ ಪಾಪಣ್ಣ ಎದುರಾದರು. ಕೂಡಲೇ ಗೌಡರು, ಹಾಸನ ಭಾಷೆಯಲ್ಲಿ 'ಲೋ.. ಪಾಪಣ್ಣ ಬಾರ್ಲಾ ಈ ಕಡಿಕೆ. ಎಲ್ಲಾ ಕಾಣಿಸಿಕೊಳ್ಳಲೇ ಇಲ್ಲವಲ್ಲಾ...' ಎಂದು ಹತ್ತಿರಕ್ಕೆ ಕರೆದುಕೊಂಡು ಭುಜದ ಮೇಲೆ ಕೈ ಹಾಕಿ ಕೊಂಡು ಸುಮಾರು ಹೊತ್ತು ಮಾತನಾಡಿದರು.
ದೇವೇಗೌಡರೊಂದಿಗೆ ಆತ್ಮೀಯತೆಯಿಂದ ಮಾತನಾಡಿದ ಪಾಪಣ್ಣ, 'ರಾಜಕೀಯ ಯಕ್ಕುಟ್ಟಿಹೋಗಿದೆ. ಸತ್ಯಕ್ಕೆ ಕಾಲವಲ್ಲ. ನೀನು ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡ. ಆರೋಗ್ಯ ನೋಡ್ಕೋ ಎಂದು ಹಿತವಚನ ಹೇಳಿದರು. ಆಯ್ತು...ಆಯ್ತು... ನೀನು ಚೆನ್ನಾಗಿ ಇರು. ನಿನ್ ಮಕ್ಕಳು ಚೆನ್ನಾಗಿ ನಿನ್ನ ನೋಡ್ಕೋತಾ ಇದ್ದಾರಾ.. ಎಂದು ಹೇಳಿ ಗೌಡರು ಮುಗುಳ್ನಕ್ಕು ಮುಂದೆ ಸಾಗಿದರು.