ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ, ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟ ಪತಿಯ ಶವದೊಂದಿಗೆ 10 ದಿನಗಳ ಕಾಲ ವಾಸವಾಗಿದ್ದರು. ಪತಿ ಸತ್ತಿರುವುದೇ ತಿಳಿಯದ ಆಕೆ, ಕೊಳೆತ ಶವದ ವಾಸನೆಯಿಂದಾಗಿ ಅಕ್ಕಪಕ್ಕದವರು ಗಮನಿಸಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು (ಏಪ್ರಿಲ್ 9): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಅತಿ ಭೀಕರ ಮತ್ತು ಕರುಣಾಜನಕ ಘಟನೆಯೊಂದು ನಡೆದಿದೆ. ಅನಾರೋಗ್ಯದಿಂದ ಮಲಗಿದ್ದಲ್ಲೇ ಮೃತಪಟ್ಟ ಪತಿಯ ಶವದದೊಂದಿಗೆ ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು ಬರೋಬ್ಬರಿ 10 ದಿನಗಳ ಕಾಲ ಕಳೆದಿದ್ದಾರೆ. ವಿಚಿತ್ರವೆಂದರೆ ಪತಿ ಸತ್ತಿರೋದೇ ಪತ್ನಿಗೆ ತಿಳಿದಿಲ್ಲ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಲಗಿದ್ದಲ್ಲೇ ಸತ್ತಿದ್ದ ಸಿರಿಲ್ ಮೋನಿಸ್

77 ವರ್ಷದ ಸಿರಿಲ್ ಮೋನಿಸ್ ಅವರು ವಯೋಸಹಜ ಅನಾರೋಗ್ಯದಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ಆದರೆ ಮನೆಯಲ್ಲಿದ್ದ ಮಾನಸಿಕ ಅಸ್ವಸ್ಥ ಪತ್ನಿಗೆ ತನ್ನ ಪತಿ ಮೃತಪಟ್ಟಿದ್ದಾರೆಂಬ ಎಂಬ ಕನಿಷ್ಠ ಜ್ಞಾನವೂ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಪತಿ ಬದುಕಿದ್ದಾರೆ, ಮಲಗಿದ್ದಾರೆಂದೇ ಭಾವಿಸಿ ಪತ್ನಿ ಪತಿಯ ಶವದ ಪಕ್ಕದಲ್ಲೇ 10 ದಿನ ಕಳೆದಿದ್ದಾರೆ ಎಂಬುದು ಎಂಥವರಿಗೂ ದಿಗಿಲು ಹುಟ್ಟಿಸುತ್ತದೆ..

ಮಗ ಫೋನ್ ಮಾಡಿದಾಗಲೆಲ್ಲಾ ಸುಳ್ಳು ಹೇಳುತ್ತಿದ್ದ ತಾಯಿ

ಮೃತ ಮೋನಿಸ್ ಅವರ ಮಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗ ನಿತ್ಯ ತಾಯಿಗೆ ಫೋನ್ ಮಾಡಿ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದನಂತೆ. ಆದರೆ ಪ್ರತಿ ಸಲ ಮಗ ಫೋನ್ ಮಾಡಿ ಅಪ್ಪನ ಬಗ್ಗೆ ವಿಚಾರಿಸಿದಾಗ ಮಾನಸಿಕ ಅಸ್ವಸ್ಥ ತಾಯಿ ಮಾತ್ರ 'ಅಪ್ಪ ಚೆನ್ನಾಗಿದ್ದಾರೆ, ಮಲಗಿದ್ದಾರೆ' ಎಂದೇ ಹೇಳುತ್ತಿದ್ದಳಂತೆ. ಇದರಿಂದ ಮಗನೂ ಅಪ್ಪ ಮೃತಪಟ್ಟಿರುವ ಬಗ್ಗೆ ತಿಳಿದಿಲ್ಲ.

ಕೊಳೆತ ಹೆಣದ ವಾಸನೆ ಬಂದಾಗ ಬಯಲಾಯ್ತು ಭೀಕರ ದೃಶ್ಯ

ಹತ್ತು ದಿನಗಳು ಕಳೆದಿದ್ದರಿಂದ ಮೋನಿಸ್ ಮೃತದೇಹ ಸಂಪೂರ್ಣ ಕೊಳೆತು ಹುಳ ಹಿಡಿದಿತ್ತು. ಆ ಮನೆಯಿಂದ ವಿಪರೀತ ವಾಸನೆ ಬರಲಾರಂಭಿಸಿದಾಗ ಸಂಶಯಗೊಂಡ ಅಕ್ಕಪಕ್ಕದ ನಿವಾಸಿಗಳು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ನೋಡಿದಾಗ ಭೀಕರ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.

ಪತಿಯ ಶವ ಮುಟ್ಟಲು ಬಿಡದ ಪತ್ನಿ!

'ನನ್ನ ಗಂಡ ನನಗೆ ಬೇಕು, ಅವರನ್ನು ಎಲ್ಲಿಗೂ ಕೊಂಡೊಯ್ಯಬೇಡಿ' ಸತ್ತ ಪತಿಯ ಶವವನ್ನು ಯಾರೂ ಮುಟ್ಟೋಕೆ ಬಿಡದಂತೆ ಪತ್ನಿ ಹಟ ಹಿಡಿದಿದ್ದಾಳೆ. ನನ್ನ ಪತಿ ಆರಾಮ ಇದ್ದಾರೆ ಏನೂ ಆಗಿಲ್ಲ ಅನ್ನುವ ಆಕೆಯ ಮಾನಸಿಕ ಸ್ಥಿತಿ ಮನಕಲುಕುವಂತಿತ್ತು. ಶವವು ಸಂಪೂರ್ಣವಾಗಿ ಕೊಳೆತು ಹುಳು ಹಿಡಿದು ಕೆಟ್ಟ ವಾಸನೆಯಿಂದಾಗಿ ಸ್ಥಳೀಯರು ಮುಟ್ಟಲು ಕೂಡ ಬರಲಿಲ್ಲ. ಇಂಥ ಪರಿಸ್ಥಿತಿ ವೇಳೆ ಸಮಾಜ ಸೇವಕ ಆರೀಫ್ ಅವರು ಮುಂದೆ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲು ನೆರವಾದರು.

ಕೊನೆಯ ಬಾರಿ ಅಪ್ಪನ ಮುಖ ನೋಡಲಾಗದ ಮಕ್ಕಳು

ಹದಿನೈದು ದಿನಗಳ ಹಿಂದಷ್ಟೇ ಮನೆಗೆ ಬಂದು ಹೋಗಿದ್ದ ಮಗ ಕೆಲವು ದಿನಗಳ ಕಾಲ ಅಪ್ಪನ ಯೋಗಕ್ಷೇಮ ನೋಡಿಕೊಂಡು ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದ. ಅಲ್ಲಿಂದ ಕಾಲ್ ಮಾಡಿದಾಗ 'ಅಪ್ಪ ಆರಾಮಿದ್ದಾರೆ' ಎನ್ನುವ ತಾಯಿಯ ಮಾತು ಕೇಳಿ ಮತ್ತೆ ಬಂದಿರಲಿಲ್ಲ. ಆದರೆ ಇದೀಗ ಅಪ್ಪನ ಸಾವಿನ ಸುದ್ದಿ ಕೇಳಿ ಓಡಿಬಂದರೂ. ಅಪ್ಪನ ಶವ ಸಂಪೂರ್ಣ ಕೊಳೆತುಹೋಗಿದ್ದರಿಂದ ಅಪ್ಪನ ಮುಖ ನೋಡುವ ಭಾಗ್ಯವೂ ಸಿಗಲಿಲ್ಲ. ಇನ್ನು ದುಬೈನಿಂದ ಮಗಳು ಕೂಡ ಬರಲಾಗಲಿಲ್ಲ. ಅಂತಿಮವಾಗಿ ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಮೋನಿಸ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಹಣ, ಅಂತಸ್ತು ಇದ್ದರೂ ಹೆತ್ತವರ ಕಡೆಯ ದಿನಗಳಲ್ಲಿ ಜೊತೆಗಿಲ್ಲದ ಮಕ್ಕಳ ಸ್ಥಿತಿ ಕಂಡು ಸ್ಥಳೀಯರು ಮರುಗುತ್ತಿದ್ದಾರೆ.