Asianet Suvarna News Asianet Suvarna News

ಫುಲ್ ಡ್ರಿಂಕ್ಸ್ ಮಾಡಿ ಆಸ್ಪತ್ರೆಗೆ ಬಂದ ವೈದ್ಯ ಬೆಡ್ ಮೇಲೆ ಸ್ಲೀಪಿಂಗ್: ಅನಸ್ತೇಷಿಯಾ ಪಡೆದ ಮಹಿಳೆಯರ ಗತಿ ಏನಾಯ್ತು?

ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ಪ್ರಸೂತಿ ತಜ್ಞರು ಅಸ್ವಸ್ಥರಾದ ಕಾರಣಕ್ಕೆ ಶಸ್ತ್ರಚಿಕಿತ್ಸಾ ಕ್ಯಾಂಪನ್ನೇ ರದ್ದು ಮಾಡಬೇಕಾದ ಪ್ರಸಂಗ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. 

Chikkamagaluru Doctor Fell down after over consumption of Alcohol during Family Planning Operation in Kalasa gvd
Author
First Published Jun 1, 2023, 11:02 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜೂ.01): ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ಪ್ರಸೂತಿ ತಜ್ಞರು ಅಸ್ವಸ್ಥರಾದ ಕಾರಣಕ್ಕೆ ಶಸ್ತ್ರಚಿಕಿತ್ಸಾ ಕ್ಯಾಂಪನ್ನೇ ರದ್ದು ಮಾಡಬೇಕಾದ ಪ್ರಸಂಗ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಪ್ರಸೂತಿ ವೈದ್ಯ ಡಾ.ಬಾಲಕೃಷ್ಣ ಮದ್ಯಸೇವನೆ ಮಾಡಿ ಬಂದಿದ್ದೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದ್ದು, ಆತ ಮಾಡಿದ ಎಡವಟ್ಟಿನಿಂದಾಗಿ ಶಸ್ತ್ರಚಿಕಿತ್ಸೆಗೆಂದು ಅರವಳಿಕೆ ಚುಚ್ಚುಮದ್ದು ಪಡೆದಿದ್ದ ಸುಮಾರು 10 ಮಂದಿ ಮಹಿಳೆಯರು ಪೇಚಿಗೆ ಸಿಕ್ಕಿದ್ದಲ್ಲದೆ, ಅವರ ಸಂಬಂಧಿಕರು ದಿಗಿಲುಗೊಂಡು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂತಾನಹರಣ ಶಸ್ತ್ರಚಿಕಿತ್ಸಾ ಕ್ಯಾಂಪ್: ಬುಧವಾರ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸಾ ಕ್ಯಾಂಪ್ ಏರ್ಪಡಿಸಲಾಗಿತ್ತು. ಅಲ್ಲಿಗೆ ಶೃಂಗೇರಿ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ಬಾಲಕೃಷ್ಣ ಅವರನ್ನು ನಿಯೋಜನೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆಗೆ ನೊಂದಾಯಿಸಿಕೊಂಡ ಮಹಿಳೆರನ್ನು ಬೆಳಗ್ಗೆ 8 ಗಂಟೆಗೆ ಆಸ್ಪತ್ರೆಗೆ ಬರುವಂತೆ ಸೂಚಿಸಲಾಗಿತ್ತು. ಅದರಂತೆ 10 ಮಂದಿ ಮಹಿಳೆಯರು ಬೆಳಗ್ಗೆಯೇ ಆಸ್ಪತ್ರೆಗೆ ಬಂದಿದ್ದರು.ಆದರೆ ಡಾ.ಬಾಲಕೃಷ್ಣ ಮಧ್ಯಾಹ್ನ 3 ಗಂಟೆ ವೇಳೆಗೆ ಆಸ್ಪತ್ರೆಗೆ ಬಂದಿದ್ದರು. ಕೂಡಲೇ ಶಸ್ತ್ರಚಿಕತ್ಸೆಗೆ ಸಿಬ್ಬಂದಿ ಏರ್ಪಾಡು ಮಾಡಿದರು. ಅಲ್ಲೇ ಇದ್ದ ಅರವಳಿಕೆ ತಜ್ಞರು ಎಲ್ಲಾ ಮಹಿಳೆಯರಿಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದರು. ಈ ವೇಳೆ ಮೊದಲ ಶಸ್ತ್ರಚಿಕಿತ್ಸೆಗೆ ಮುಂದಾದ ಡಾ.ಬಾಲಕೃಷ್ಣ ಇದ್ದಕ್ಕಿದ್ದಂತೆ ಅಸ್ವಸ್ಥರಾದರು. 

ಏಕಾಏಕಿ ಕುಸಿತ ಕಂಡ ರೇಷ್ಮೆ ಗೂಡಿನ ಧಾರಣೆ: ಕಂಗಾಲಾದ ರೇಷ್ಮೆ ಬೆಳೆಗಾರರು

ಕೂಡಲೇ ಅಲ್ಲಿನ ಸಿಬ್ಬಂದಿ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಬೇರೆಡೆಗೆ ಕಳಿಸಿಕೊಟ್ಟರು.ಇದರಿಂದ ಗಾಬರಿಗೊಳಗಾದ ಮಹಿಳೆಯರ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಬೆಳಗ್ಗೆ ಬರಬೇಕಿದ್ದ ವೈದ್ಯರು ಮಧ್ಯಾಹ್ನ ಬಂದಿದ್ದಲ್ಲದೆ, ಮದ್ಯ ಸೇವಿಸಿ ಬಂದಿದ್ದಾರೆ. ಎಲ್ಲ ಮಹಿಳೆಯರು ಪುಟ್ಟ ಮಕ್ಕಳನ್ನು ಮನೆಯಲ್ಲಿ ಬಿಟ್ಟುಬಂದಿದ್ದಾರೆ. ಮಕ್ಕಳು ಹಾಲಿಲ್ಲದೆ ಹಸಿವಿನಿಂದ ತೊಂದರೆ ಅನುಭವಿಸುತ್ತಿವೆ. ತಾಯಂದಿರ ಜೀವಕ್ಕೆ ತೊಂದರೆಯಾದರೆ ಹೊಣೆಯಾರು, ವೈದ್ಯರು, ಸಿಬ್ಬಂದಿಗಳು ಬೇಜಾಬ್ದಾರಿ ತೋರಿದ್ದೀರಿ ಎಂದು ಕೂಗಾಡಿದ್ದಾರೆ.ಈ ವೇಳೆ ಡಾ.ಬಾಲಕೃಷ್ಣ ಅವರಿಗೆ ಲೋ ಶುಗರ್ ಉಂಟಾಗಿದೆ. ಬಿಪಿ ಹೆಚ್ಚಾಗಿ ಅಸ್ವಸ್ಥಗೊಂಡ ಕಾರಣ ಬೇರೆಡೆ ಚಿಕಿತ್ಸೆ ಕಳಿಸಿದ್ದೇವೆ ಎಂದು ಸಿಬ್ಬಂದಿಗಳು ಸಾರ್ವಜನಿಕರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ.ನಂತರ ಅನಸ್ತೇಸಿಯಾ ಪಡೆದಿದ್ದ ಮಹಿಳೆಯರಿಗೆ ಗ್ಲೂಕೋಸ್ ಹಾಕಿ ಅವರು ಚೇತರಿಸಿಕೊಂಡ ನಂತರ ಮನೆಗೆ ಕಳಿಸಿಕೊಡಲಾಗಿತ್ತು. 

10 ಮಂದಿ ಮಹಿಳೆಯರಿಗೆ ಸಂತಾಹರಣ ಶಸ್ತ್ರಚಿಕಿತ್ಸೆ: ಜಿಲ್ಲಾ ಆರೋಗ್ಯಾಧಿಕಾರಿ ಉಮೇಶ್ ಅವರು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಿಂದ ಇಂದು (ಗುರುವಾರ) ಮತ್ತೊಬ್ಬರು ಪ್ರಸೂತಿ ತಜ್ಞರನ್ನು ಕಳಿಸಿಕೊಟ್ಟು ಎಲ್ಲಾ 10 ಮಂದಿ ಮಹಿಳೆಯರಿಗೆ ಸಂತಾಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಮದ್ಯಸೇವಿಸಿ ಬಂದಿದ್ದರು ಎನ್ನುವ ವಿಚಾರ ಸಾರ್ವಜನಿಕರಲ್ಲೂ ಗಾಬರಿ ಮೂಡಿಸಿದೆ. ಶಸ್ತ್ರಚಿಕಿತ್ಸೆಗೆ ಮುನ್ನವೇ ಅಸ್ವಸ್ಥರಾದ ಕಾರಣ ಅನಾಹುತ ತಪ್ಪಿದೆ. ಅದೇ ಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದು, ಇಂತಹ ಬೇಜವಾಬ್ದಾರಿ ವರ್ತನೆ ತೋರುವ ವೈದ್ಯರ ವಿರುದ್ಧ ಶಿಸ್ತು ಕ್ರಮ ಆಗಬೇಕು ಎನ್ನುವ ಒತ್ತಾಯಗಳು ಕೇಳಿಬಂದಿದೆ.ಡಾ.ಬಾಲಕೃಷ್ಣ ಅವರು ಉತ್ತಮ ವೈದ್ಯರು ಎಂದು ಹೆಸರುಗಳಿಸಿದ್ದರೂ ಸಹ ಆಗಾಗ ಇಂತಹ ವಿವಾದಗಳಿಗೆ ಸಿಕ್ಕಿಕೊಂಡು ಕುಖ್ಯಾತಿಯನ್ನೂ ಪಡೆದಿದ್ದಾರೆ. ಕಳೆದ ವರ್ಷ ಕೊಪ್ಪದ ಸರ್ಕಾರಿ ತಾಯಿ ಮಗು ಆಸ್ಪತ್ರೆಯಲ್ಲಿ ನಡೆದಿದ್ದ ನವಜಾತ ಶಿಶು ಮಾರಾಟ ಪ್ರಕರಣದಲ್ಲೂ ಇದೇ ವೈದ್ಯರ ಮೇಲೆ ಆರೋಪ ಬಂದು ಅಮಾನತುಗೊಂಡಿದ್ದರು. ನಂತರ ಅವರನ್ನು ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ನಿಯೋಜಿಸಲಾಗಿತ್ತು.

ಸರ್ಕಾರಿ ಶಾಲೆ ಉಳಿದರೆ ಮಾತ್ರ ಸರ್ವರಿಗೂ ಶಿಕ್ಷಣ ಸಾಧ್ಯ: ಶಾಸಕ ಕೊತ್ತೂರು ಮಂಜುನಾಥ್‌

ಸಮಿತಿ ರಚಿಸಿ ತನಿಖೆ, ಡಿಎಚ್ಓ: ಕಳಸದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ವೈದ್ಯರು ಮದ್ಯಸೇವಿಸಿ ಅಸ್ವಸ್ಥರಾದ ಕಾರಣ ಕ್ಯಾಂಪ್ ರದ್ದಾಯಿತು ಎನ್ನುವ ಆರೋಪದ ಬಗ್ಗೆ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್ ತಿಳಿಸಿದರು.ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರತಿ ತಿಂಗಳು ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಕ್ಯಾಂಪ್ ನಡೆಯುತ್ತದೆ. ಅದರಂತೆ ಬುಧವಾರವೂ ಕ್ಯಾಂಪ್ ಏರ್ಪಡಿಸಲಾಗಿತ್ತು. ಅಲ್ಲಿಗೆ ಶೃಂಗೇರಿ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ.ಬಾಲಕೃಷ್ಣ ಅವರನ್ನು ನಿಯೋಜಿಸಲಾಗಿತ್ತು. ಅವರು ಶಸ್ತ್ರಚಿಕಿತ್ಸೆ ಮಾಡಲು ಬರುವಾಗ ಮದ್ಯಸೇವಿಸಿ ಅಸ್ವಸ್ಥರಾಗಿದ್ದರು ಎನ್ನುವ ದೂರುಗಳು ಸಾರ್ವಜನಿಕರಿಂದ ಬಂದಿವೆ. ಮಾಧ್ಯಮಗಳಲ್ಲೂ ವರದಿಯಾಗಿದೆ. ಈ ಬಗ್ಗೆ ಜಿಲ್ಲಾದಿಕಾರಿಗಳು, ಜಿ.ಪಂ. ಸಿಇಓ ಮತ್ತು ಆರೋಗ್ಯ ಇಲಾಖೆ ಆಯುಕ್ತರೊಂದಿಗೂ ಮಾತನಾಡಿದ್ದೇನೆ ಎಂದರು. ನಾನೂ ಸಹ ಇಂದು ಖುದ್ದು ಕಳಸಕ್ಕೆ ಭೇಟಿ ಮಾಡಿ ಎಲ್ಲರೀತಿ ತನಿಖೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ಮದ್ಯಸೇವಿಸಿರುವುದು ನಿಜವಾಗಿದ್ದಲ್ಲಿ ನಿರ್ಧಾಕ್ಷಿಣ್ಯವಾಗಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದರು.

Follow Us:
Download App:
  • android
  • ios