Asianet Suvarna News Asianet Suvarna News

ನಗರಸಭಾ ಚುನಾವಣೆ: ನಾಮಪತ್ರ ಸಲ್ಲಿಸಲು 28 ಕೊನೆಯ ದಿನ

ಚಿಕ್ಕಬಳ್ಳಾಪುರ ನಗರಸಣಾ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ಚುನಾವಣೆಯ ನಾನಾ ಕರ್ತವ್ಯಗಳಿಗಾಗಿ ವಾರ್ಡುವಾರು ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್‌. ಲತಾ ಆದೇಶಿಸಿದ್ದಾರೆ.

Chikkaballapur dc releases notification about corporation polls
Author
Bangalore, First Published Jan 22, 2020, 11:04 AM IST

ಚಿಕ್ಕಬಳ್ಳಾಪುರ(ಜ.22): ಕಳೆದ ಒಂದು ವರ್ಷದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಸೊರಗಿದ್ದ ಚಿಕ್ಕಬಳ್ಳಾಪುರ ನಗರಸಭಾ ಚುನಾವಣೆಗೆ ಮಂಗಳವಾರ ಅಧಿಸೂಚನೆ ಹೊರಡಿಸಲಾಗಿದ್ದು, ಚುನಾವಣೆಯ ನಾನಾ ಕರ್ತವ್ಯಗಳಿಗಾಗಿ ವಾರ್ಡುವಾರು ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್‌. ಲತಾ ಆದೇಶಿಸಿದ್ದಾರೆ.

ಜ.21ರ ಮಂಗಳವಾರ ನಗರಸಭಾ ಚುನಾವಣೆ ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಸಲು ಜ.28 ಅಂತಿಮ ದಿನವಾಗಿದೆ. ಜ.29ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜ.31ರಂದು ನಾಮಪತ್ರ ವಾಪಸ್‌ ಪಡೆಯಲು ಅಂತಿಮ ದಿನವಾಗಿದೆ. ಫೆ.9ರಂದು ಮತದಾನ ನಡೆಯಲಿದ್ದು, ಫೆ.11 ರಂದು ಮತ ಎಣಿಕೆ ನಡೆಯಲಿದೆ.

ನಾಮಪತ್ರ ಸಲ್ಲಿಕೆ ಎಲ್ಲಿ?

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಗೆ ನಾಮಪತ್ರ ಸ್ವೀಕರಿಸುವ ಕಾರ್ಯ ಆರಂಭವಾಗಿದ್ದು, 1ನೇ ವಾರ್ಡಿನ 8ನೇ ವಾರ್ಡಿನ ವರೆಗೂ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ನಗರದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಇವರು ಹಾಜರಿದ್ದು, ಸಂಬಂಧಿಸಿದ ವಾರ್ಡುಗಳ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಸ್ವೀಕರಿಸಲಿದ್ದಾರೆ.

ಆನ್‌ಲೈನ್‌ನಲ್ಲಿ ವೈಟ್‌ ಸಿಮೆಂಟ್ ತರಿಸಿಕೊಂಡಿದ್ದ, ಹೋಟೆಲ್‌ನಲ್ಲೇ ತಯಾರಿಸಿದ್ನಾ ಬಾಂಬ್..?

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ಎ. ಶ್ರೀನಿವಾಸರೆಡ್ಡಿ ಅವರನ್ನು 9ರಿಂದ 16ನೇ ವಾರ್ಡಿವರೆಗೂ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದ್ದು, ಇವರು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಹಾಜರಿದ್ದು, ನಾಮಪತ್ರಗಳನ್ನು ಸ್ವೀಕರಿಸಲಿದ್ದಾರೆ.

ತಾಪಂ ಇಒ ಚುನಾವಣಾಧಿಕಾರಿ

ತಾಪಂ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್‌ ಅವರು 17ನೇ ವಾರ್ಡಿನಿಂದ 24ನೇ ವಾರ್ಡಿನವರೆಗೂ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಇವರು ನಗರಸಭಾ ಕಾರ್ಯಾಲಯದಲ್ಲಿ ಹಾಜರಿದ್ದು, ನಾಮಪತ್ರಗಳನ್ನು ಸ್ವೀಕರಿಸಲಿದ್ದಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಶಿವಕುಮಾರ್‌ ಅವರು 25ನೇ ವಾರ್ಡಿನಿಂದ 31ನೇ ವಾರ್ಡಿನವರೆಗೂ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಹಿಸಲಿದ್ದು, ಇವರು ತಾಪಂ ಕಚೇರಿಯಲ್ಲಿರುವ ಕಾರ್ಯನಿರ್ವಾಹಕಾಧಿಕಾರಿ ಕಚೇರಿಯಲ್ಲಿ ಹಾಜರಿದ್ದು, ನಾಮಪತ್ರಗಳನ್ನು ಸ್ವೀಕರಿಸಲಿದ್ದಾರೆ.

25ರಂದೂ ನಾಮಪತ್ರ ಸ್ವೀಕಾರ

ಜ.28ರವರೆಗೆ ಈ ಎಲ್ಲ ಅಧಿಕಾರಿಗಳ ನಿಯೋಜಿತ ಜಾಗದಲ್ಲಿ ಹಾಜರಿದ್ದು, ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಸ್ವೀಕರಿಸಲಿದ್ದು, ಜ.25 ನಾಲ್ಕನೇ ಶನಿವಾರವಾಗಿದ್ದರೂ ಕಚೇರಿಯಲ್ಲಿ ಹಾಜರಿದ್ದು, ನಾಮಪತ್ರಗಳನ್ನು ಸ್ವೀಕರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌. ಲತಾ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದ್ದು, ನಾನಾ ಪಕ್ಷಗಳು ಅರ್ಹ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತರಾಗಿದ್ದು, ಗೆಲ್ಲುವ ಕುದುರೆಗಳನ್ನು ಕಣಕ್ಕಿಳಿಸಲು ಮುಂದಾಗಿರುವ ಪಕ್ಷಗಳಿಗೆ ಸೆಡ್ಡು ಹೊಡೆದು ಟಿಕೆಟ್‌ ವಂಚಿತ ಅಭ್ಯರ್ಥಿಗಳು ಪಕ್ಷೇತ್ರರಾಗಿ ಸ್ಪರ್ಧಿಸಲು ತಮ್ಮ ತಮ್ಮ ವಾರ್ಡುಗಳಲ್ಲಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ನಡೆಸಿದ್ದಾರೆ.

Follow Us:
Download App:
  • android
  • ios