Asianet Suvarna News Asianet Suvarna News

ಬಿಜೆಪಿ ಎಂಬ ಕುಡುಕ ಗಂಡನ ಮದುವೆಯಾಗಿದ್ದೇವೆ: ಪ್ರಮೋದ್‌ ಮುತಾಲಿಕ್‌

*  ಈಶ್ವರಪ್ಪ ಸಹ ಹಿಂದೂತ್ವದ ಕಾರ್ಯದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ
*  ಸರ್ಕಾರ ಹರ್ಷ ಕುಟುಂಬಕ್ಕೆ 25 ಲಕ್ಷ ನೀಡಿದ್ದನ್ನು ಅಭಿನಂದಿಸುತ್ತೇನೆ
*  ಹಿಂದೂ ಸಮಾಜಕ್ಕೆ ಅನ್ಯಾಯವಾದರೆ ಬಿಜೆಪಿ ವಿರುದ್ಧ ಚುನಾವಣೆಗೆ ಸ್ಪರ್ಧೆ 

Chief of the Sri Ram Sena Pramod Mutalik React on BJP grg
Author
First Published Mar 10, 2022, 11:16 AM IST | Last Updated Mar 10, 2022, 11:16 AM IST

ಗಜೇಂದ್ರಗಡ(ಮಾ.10):  ಹಿಂದೂ(Hindu) ಸಮಾಜಕ್ಕೆ ಅನ್ಯಾಯ, ಮೋಸ ಹಾಗೂ ಮುಖವಾಡದ ನಾಟಕವನ್ನು ಬಿಜೆಪಿ ಮಾಡಿದರೆ ಚುನಾವಣೆಗೆ ಬಿಜೆಪಿ ವಿರುದ್ಧ ಬಂಡಾಯ ಹಿಂದೂ ಕಾರ್ಯಕರ್ತನನ್ನು ನಿಲ್ಲಿಸುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌(Pramod Mutalik) ಹೇಳಿದರು. ಇಳಕಲ್‌ ಪಟ್ಟಣದಲ್ಲಿ ಶಿವಾಜಿ ಜಯಂತಿ(Shivaji Jayanti)  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವಾಗ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬಿಜೆಪಿ(BJP) ಪಕ್ಷ ವಿಪಕ್ಷದಲ್ಲಿದ್ದಾಗ ಎಸ್‌ಡಿಪಿಐ(SDPI) ಹಾಗೂ ಪಿಎಫ್‌ಐ(PFI) ಸಂಘಟನೆಗಳನ್ನು ಬ್ಯಾನ್‌ ಮಾಡಿ ಎನ್ನುತ್ತದೆ. ಆದರೆ, ರಾಜ್ಯದಲ್ಲಿ ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್‌ ಮಾಡಿ ಎಂದು ಹಿಂದೂ ಸಂಘಟನೆಗಳು(Hindu Organizations), ಕಾಂಗ್ರೆಸ್‌(Congress) ಸೇರಿ ಇತರರ ಒತ್ತಾಯವಿದ್ದರೂ ಸಹ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸಂಘಟನೆಗಳ ಮೇಲೆ ನಿಗಾ ವಹಿಸುವುದಾಗಿ ಹೇಳಿದ್ದು ಖಂಡನಾರ್ಹ. ಹಿಂದೂ ಕಾರ್ಯಕರ್ತರ ಹೆಣಗಳ ಮೇಲೆ ರಾಜಕೀಯ ಮಾಡುವ ಪ್ರವೃತ್ತಿ ಹೊಂದಿದ್ದೀರಾ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಗಳಿಂದ ನಡೆಯುವ ಆಂದೋಲನ ಬಿಜೆಪಿ ವಿರುದ್ಧ ತಿರುಗಲಿದೆ ಎಂದರು.

Hijab Row: ಕುಂಕುಮ, ಬಳೆ ವಿಷಯಕ್ಕೆ ಬಂದ್ರೆ ನಾಲಿಗೆ ಸೀಳ್ತೇವೆ: ಮುತಾಲಿಕ್‌ ಖಡಕ್‌ ಎಚ್ಚರಿಕೆ

ಶಿವಮೊಗ್ಗ(Shivamogga) ಹರ್ಷ(Harsha) ಕುಟುಂಬಕ್ಕೆ ಎಂಎಲ್‌ಎ ಟಿಕೆಟ್‌ ಕೊಡಿಸಲು ಹಿಂದೂ ಸಂಘಟನೆಗಳು ಮುಂದಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್‌ ಮುತಾಲಿಕ್‌, ಹರ್ಷ ಕುಟುಂಬದಿಂದ ಆ ರೀತಿ ಅಪೇಕ್ಷೆ ಹಾಗೂ ಬೇಡಿಕೆಯಿಲ್ಲ. ಹೀಗಾಗಿ, ಸಂಘಟನೆಯಿಂದ ಅಂತಹ ಬೇಡಿಕೆಯಿಲ್ಲ. ಅಲ್ಲದೆ ಈಶ್ವರಪ್ಪ ಸಹ ಹಿಂದೂತ್ವದ ಕಾರ್ಯದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ(Government of Karnataka) ಈಗಾಗಲೇ ಹರ್ಷ ಅವರ ಕುಟುಂಬಕ್ಕೆ .25 ಲಕ್ಷ ನೀಡಿದ್ದನ್ನು ಅಭಿನಂದಿಸುತ್ತೇನೆ. ಹಿಂದಿನ ಸರ್ಕಾರಗಳು ನಮ್ಮ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಾಕಿದ್ದ ಕೇಸ್‌ಗಳನ್ನು ಬಿಜೆಪಿ ಸರ್ಕಾರ ತೆರವುಗೊಳಿಸಿಲ್ಲ. ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಪೂರ್ಣವಾಗಿಸಲು ಸರ್ಕಾರ ಮುಂದಾಗಬೇಕು ಸೇರಿದಂತೆ ಇತರ ಬೇಡಿಕೆಗಳೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ ಕಟೀಲ್‌ ಅವರನ್ನು ಭೇಟಿಯಾಗುತ್ತೇನೆ ಎಂದರು. ಸಂಜೀವಕುಮಾರ ಜೋಶಿ, ಅಂದಪ್ಪ ಸಂಕನೂರ, ಯಶ್‌ರಾಜ್‌ ಘೋರ್ಪಡೆ, ಸಂತೋಷಕುಮಾರ ವಸ್ತ್ರದ ಇದ್ದರು.

ಬಿಜೆಪಿ ಎಂಬ ಕುಡುಕ ಗಂಡನನ್ನು ನಾವು ಮದುವೆಯಾಗಿದ್ದೇವೆ. ಹೀಗಾಗಿ ಹಿಂದೂತ್ವ ರಕ್ಷಣೆಗಾಗಿ ಹಾಗೂ ಆಚರಣೆ ಮಾಡಲು ಬಿಜೆಪಿ ಪಕ್ಷವನ್ನು ಒತ್ತಾಯ ಮಾಡಿ ನೂರಕ್ಕೆ ನೂರು ರಿಪೇರ್‌ ಮಾಡುತ್ತೇವೆ. ಆದರೆ ಬಿಜೆಪಿ ನಾಟಕವಾಡಿದರೆ ಬಿಜೆಪಿ ವಿರುದ್ಧ ಬಂಡಾಯ ಹಿಂದೂ ಕಾರ್ಯಕರ್ತನನ್ನು ಚುನಾವಣೆಯಲ್ಲಿ ನಿಲ್ಲಿಸುತ್ತೇವೆ ಅಂತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ. 

Hubballi: ಕಾಲೇಜಿಗೆ ಹಿಜಾಬ್‌ ಧರಿಸಿಯೇ ಬರ್ತೇವೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಮುತಾಲಿಕ್‌

ಮಚ್ಚು ಲಾಂಗು ಹಿಡ್ಕೊಂಡು ಹೊಡೆದಾಡುತ್ತೇವೆ ಎಂದರೆ ಇದು ಅಷ್ಘಾನಿಸ್ತಾನವಲ್ಲ: ಮುತಾಲಿಕ್‌

ಮೈಸೂರು: ಮಚ್ಚು ಲಾಂಗು ಹಿಡ್ಕೊಂಡು ಹೊಡೆದಾಡುತ್ತೇವೆ ಎಂದರೆ ಇದು ಅಷ್ಘಾನಿಸ್ತಾನವಲ್ಲ(Afghanistan). ಈ ದೇಶದ ಅನ್ನ ತಿನ್ನುವ ನೀವು ಸಂವಿಧಾನದ ಆಧಾರದಲ್ಲಿರಬೇಕು. ದೇಶದಲ್ಲಿ ಸಂವಿಧಾನವಿದೆ, ನ್ಯಾಯಾಲಯವಿದೆ. ನಿಮಗೆ ತೊಂದರೆಯಾದರೆ ನ್ಯಾಯಾಲಯಕ್ಕೆ ಹೋಗಿ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದ್ದರು.

ಫೆ.24 ರಂದು ಶಿವಮೊಗ್ಗ(Shivamogga) ಹರ್ಷ ಹತ್ಯೆ(Harsha Murder)  ಪ್ರಕರಣ ಸಂಬಂಧ ಮೈಸೂರಿನಲ್ಲಿ(Mysuru) ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಹಿಂದುಗಳ ಹತ್ಯೆ ಹೀಗೆ ಮುಂದುವರಿದರೆ ನಾವು ಬೀದಿ ಬೀದಿಯಲ್ಲಿ ಉತ್ತರ ಕೊಡಬೇಕಾಗುತ್ತದೆ. ಹತ್ಯೆಯಾದ 24 ಗಂಟೆಯೊಳಗೆ ಕೊಲೆಗಡುಕರನ್ನ ಬಂಧಿಸಿದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು. ನಿರಂತರವಾಗಿ ನಡೆಯುತ್ತಿರುವ ಹಿಂದುಗಳ ಹತ್ಯೆ ಕೊನೆಯಗಬೇಕು. ಮುಂದೆ ಈ ರೀತಿ ಹತ್ಯೆ ಮುಂದುವರಿದರೆ ಸರ್ಕಾರ ಅಥವಾ ಕಾನೂನು ಇಲ್ಲದೆ ಹಿಂದೂ ಸಮಾಜ ಸಿಡಿದು ನಿಲ್ಲಬೇಕಾಗುತ್ತದೆ. ನಾವು ಬೀದಿ ಬೀದಿಯಲ್ಲಿ ಉತ್ತರ ಕೊಡಬೇಕಾಗುತ್ತದೆ. ಬಂಧನವಾಗಿರುವವರು ಕ್ರಿಮಿನಲ್ಸ್‌ ಇದ್ದಾರೆ, ಅಂತವರನ್ನ ಎನ್‌ಕೌಂಟರ್‌ ಮಾಡಿಯೇ ಉತ್ತರ ಕೊಡಬೇಕು. ಈ ಘಟನೆಯ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ(Court) ರಚನೆ ಮಾಡಿ, ತುರ್ತಾಗಿ ಸಂಬಂಧಪಟ್ಟ ಪ್ರಕ್ರಿಯೆ ಉಂಟಾಗಬೇಕು ಎಂದು ಅವರು ಆಗ್ರಹಿಸಿದ್ದರು. 
 

Latest Videos
Follow Us:
Download App:
  • android
  • ios