Chetan Ahimsa: ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ಸ್ವಂತ ಹಿತಾಸಕ್ತಿಗಾಗಿ ರಾಜಕೀಯ ಮಾಡುತ್ತ ಭ್ರಷ್ಟಾಚಾರದಲ್ಲಿ ಮುಳುಗಿ ಸಂವಿಧಾನದ ಆಶಯವನ್ನು ಮರೆತಿವೆ ಎಂದು ಚಿತ್ರ ನಟ ಚೇತನ್ ಅಹಿಂಸಾ ದೂರಿದರು.
ಕಾಗವಾಡ (ಜೂ.20): ದೇಶದಲ್ಲಿ ಈಗಿರುವ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ಸ್ವಂತ ಹಿತಾಸಕ್ತಿಗಾಗಿ ರಾಜಕೀಯ ಮಾಡುತ್ತ ಭ್ರಷ್ಟಾಚಾರದಲ್ಲಿ ಮುಳುಗಿ ಸಂವಿಧಾನದ ಆಶಯವನ್ನು ಮರೆತಿವೆ ಎಂದು ಚಿತ್ರ ನಟ ಚೇತನ್ ಅಹಿಂಸಾ ದೂರಿದರು. ಬೆಳಗಾವಿ ಜಿಲ್ಲೆಯ ಕಾಗವಾಡ ಪ್ರವಾಸಿ ಮಂದಿರದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಆಡಳಿತ ನಡೆಸಿದ ಯಾವುದೇ ರಾಜಕೀಯ ಪಕ್ಷಗಳು ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡದೆ ಬರೀ ಬೆಂಗಳೂರಿಗೆ ಒತ್ತು ನೀಡಿ ಈ ಭಾಗದ ಜನರಿಗೆ, ಯುವಕರಿಗೆ ಅನ್ಯಾಯ ಮಾಡುತ್ತಾ ಬಂದಿವೆ.
ಜನರು ಇದರಿಂದ ರೋಸಿ ಹೋಗಿದ್ದಾರೆ. ಅದಕ್ಕಾಗಿ ರಾಜ್ಯದ ಎಲ್ಲ 224 ಕ್ಷೇತ್ರದಲ್ಲಿ ಓಡಾಡಿ ಸಂವಿಧಾನದ ಆಶಯ ಎತ್ತಿ ಹಿಡಿಯುವ, ದಲಿತ ಸಂಘ ಬಹುಜನ ಸಂಘ, ಕಾರ್ಮಿಕ ಸಂಘ, ಭ್ರಷ್ಟಾಚಾರ ವಿರೋಧಿ ಸಂಘ, ಪರಿಸರವಾದಿ ಸಂಘ, ರೈತ ಸಂಘ, ಮಹಿಳಾ ಸಂಘ ಎಲ್ಲರ ಜೊತೆಗೆ ಕರ್ನಾಟಕದಲ್ಲಿ ಸಮ ಸಮಾಜ ನಿರ್ಮಾಣ ಮಾಡಿ ಬರುವ ಚುನಾವಣೆಯಲ್ಲಿ ಸಂವಿಧಾನದ ಶಕ್ತಿ ಕಟ್ಟಲಾಗುವುದು ಎಂದರು.
ಈಗಿರುವ ನಾಯಕರು ಈ ಭಾಗದ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿಲ್ಲ. ಈಗಿರುವ ಎಂಎಲ್ಎ ಎಂಪಿಗಳು ಯಾರಿಗೂ ದೂರದೃಷ್ಟಿ ಇಲ್ಲ. ಕರ್ನಾಟಕವನ್ನು ಅಭಿವೃದ್ಧಿ ಮಾಡಬೇಕು ಎನ್ನುವುದು ಯಾರ ಮನಸಿನಲ್ಲಿಯೂ ಇದ್ದಂತಿಲ್ಲ. ಎಲ್ಲವನ್ನೂ ವ್ಯಾಪಾರ ದೃಷ್ಟಿಯಿಂದ ನೋಡುತ್ತಿದ್ದಾರೆ. ದೇಶದಲ್ಲಿರುವ ಸುಮಾರು 3 ಸಾವಿರ ರಾಜಕೀಯ ಪಕ್ಷಗಳು ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ.
224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕೆ
ಹೀಗಾಗಿ ಅಭಿವ್ಯಕ್ತಿ, ಪ್ರತಿಭಟನೆ ಹಾಗೂ ಮಾಧ್ಯಮ ಸ್ವಾತಂತ್ರ್ಯವನ್ನು ಕಾಪಾಡುವುದು, ಲೋಕಾಯುಕ್ತ ಬಲಪಡಿಸಿ ಲಂಚಮುಕ್ತ ಕರ್ನಾಟಕ ಗುರಿಯೊಂದಿಗೆ ಪಾರದರ್ಶಕ ಆಡಳಿತ ನೀಡುವುದು ಘನ ಉದ್ದೇಶ ನಮ್ಮದಾಗಿದೆ. ಹೀಗಾಗಿ ಮುಂಬರುವ 2028ಕ್ಕೆ ಹೊಸಪಕ್ಷ ಕಟ್ಟಿ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ನಾನು ರಾಜ್ಯದ ಮೂಲೆ, ಮೂಲೆಗಳಿಗೆ ಹೋಗಿ ಯುವಕರ ಸಂಘಟನೆಯನ್ನು ಮಾಡುತ್ತಿದ್ದೇನೆ. ಎಲ್ಲ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.

