ಪ್ರವಾಹ ಸಂತ್ರಸ್ತರಿಗೆ ನೀಡಲಾಗಿದ್ದ ಚಪಾತಿ ಕಸದ ರಾಶಿಯಲ್ಲಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಚಪಾತಿ ಬೇಡವಾಗಿದ್ದರೆ, ಬೇರೆ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಬೇಕಾಗಿತ್ತು ಅಥವಾ ಭಿಕ್ಷುಕರಿಗೆ ನೀಡಬಹುದಿತ್ತು. ಈ ರೀತಿಯಲ್ಲಿ ಎಸೆದು ಅವಮಾನ ಮಾಡಬಾರದಿತ್ತು ಎಂದು ಮೂಡಿಗೆರೆಯ ಬಿಳಗುಳದ ಅಲ್ತಾಪ್‌ ಎಂಬುವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಚಿಕ್ಕಮಗಳೂರು(ಆ.22): ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿಯ ನಿರಾಶ್ರಿತರ ಕೇಂದ್ರದ ಆವರಣದ ಕಸದಲ್ಲಿ ಚಪಾತಿಗಳು ಬಿದ್ದಿರುವುದು ವೈರಲ್‌ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಗಲು ರಾತ್ರಿ ಅದೆಷ್ಟೋ ಮಾತೆಯರು ಶ್ರಮಪಟ್ಟು ಕಳುಹಿಸಿದ ಚಪಾತಿಗಳು ತಿನ್ನದೇ ನಿರಾಶ್ರಿತರ ಕೇಂದ್ರದಲ್ಲಿ ಎಸೆಯಲಾಗಿದೆ. ಬೇಡವಾಗಿದ್ದರೆ, ಬೇರೆ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಬೇಕಾಗಿತ್ತು ಅಥವಾ ಭಿಕ್ಷುಕರಿಗೆ ನೀಡಬಹುದಿತ್ತು. ಈ ರೀತಿಯಲ್ಲಿ ಎಸೆದು ಅವಮಾನ ಮಾಡಬಾರದಿತ್ತು ಎಂದು ಮೂಡಿಗೆರೆಯ ಬಿಳಗುಳದ ಅಲ್ತಾಪ್‌ ಎಂಬುವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಿಜವಾಗಿಯೂ ಕಷ್ಟದಲ್ಲಿರುವ ಅರ್ಹರಿಗೆ ಆಹಾರ ನೀಡಬೇಕು. ಅದು, ಫೋಲಾಗದಂತೆ ತಾಲೂಕು ಆಡಳಿತ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಶಿವಕುಮಾರ್‌, ಬೇರೆ ಕಡೆಗಳಲ್ಲಿ ಸಿದ್ಧಪಡಿಸಿ ಕಾಳಜಿ ಕೇಂದ್ರಗಳಿಗೆ ಆಹಾರ ತರಬಾರದೆಂದು ಜಿಲ್ಲಾಡಳಿತ ಸೂಚನೆ ನೀಡಿತ್ತು ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರು : ವಾರದ ಮುಂಚೆಯೇ ಸಿಕ್ಕಿತ್ತು ಭೂ ಕುಸಿತದ ಮುನ್ಸೂಚನೆ

ದಾನಿಗಳು ಬಿದರಹಳ್ಳಿಯ ಕಾಳಜಿ ಕೇಂದ್ರಕ್ಕೆ ಡ್ರೈ ಚಪಾತಿಯನ್ನು ತಂದಿದ್ದಾರೆ. ಮಲೆನಾಡಿನ ಭಾಗದ ಜನರು ಈ ರೀತಿಯ ಚಪಾತಿ ಊಟಕ್ಕೆ ಬಳಸುವುದಿಲ್ಲ. ಆದ್ದರಿಂದ ಬೆಂಗಳೂರಿನಿಂದ ಬಂದಿರುವ ಚಪಾತಿಗಳು ಹೊರಗೆ ಉಳಿದುಕೊಂಡಿವೆ. ಯಾರೂ ಕೂಡ ಬಿಸಾಕಿದ್ದಲ್ಲ ಎಂದು ಹೇಳಿದ್ದಾರೆ.