ಚಾಮರಾಜನಗರ ದುರಂತ : ಆಕ್ಸಿಜನ್ ಕೊರತೆಯಲ್ಲವೆಂದ ಡೀಸಿ-ಸರ್ಕಾರವೆ ಹೊಣೆ ಎಂದ ಶಾಸಕ
ಚಾಮರಾಜನಗರ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 24,ಮಂದಿ ಸಾಗೀಡಾಗಿದ್ದು ಬೆಂಗಳೂರು ರೀತಿಯದ್ದೆ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದು, ಇದರಲ್ಲಿ 23 ಕೋವಿಡ್ ಸಂಬಂಧಿ ಸಾವೆಂದು ಹೇಳಿದ್ದಾರೆ.
ಚಾಮರಾಜನಗರ (ಮೇ.03): ಕೊರೋನಾ ಮಹಾಮಾರಿ ಏರಿಕೆಯಾದ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 24 ಮಂದಿ ಮೃತಪಟ್ಟಿದ್ದು, ಇವು ಆಕ್ಸಿಜನ್ ಕೊರತೆಯಿಂದಾದ ಸಾವೆಂದು ಹೇಳಲು ಸಾದ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಆರ್ ರವಿ ಹೇಳಿದ್ದಾರೆ.
ಚಾಮರಾಜನಗರದಲ್ಲಿಂದು ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಇಲ್ಲಿ ನಿನ್ನೆ ಬೆಳಗ್ಗಿನಿಂದ ಇಂದು ಬೆಳಗ್ಗಿನವರೆಗೆ 24 ಮಂದಿ ಮೃತಪಟ್ಟಿದ್ದು ಅದರಲ್ಲಿ 23 ಕೊವಿಡ್ ಸಾವು. ಒಂದು ನಾನ್ ಕೋವಿಡ್ ಸಾವು. ಆದರೆ ಕೋವಿಡ್ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವಿಗೀಡಾಗಿದ್ದಾರೆ ಎನ್ನಲಾಗದು ಎಂದು ಹೇಳಿದ್ದಾರೆ.
ಅವರಿಗೆ ಬೇರೆ ಬೇರೆ ಕಾಯಿಲೆಗಳಿದ್ದವು. ಈ ಸಾವುಗಳು ನಿನ್ನೆ ಒಂದೆ ರಾತ್ರಿ ಸಂಭವಿಸಿಲ್ಲ. ನಿನ್ನೆ ಬೆಳಿಗ್ಗೆಯಿಂದ ಮಧ್ಯರಾತ್ರಿ 12 ರ ವರೆಗೆ 14 ಸಾವು. ಮದ್ಯರಾತ್ರಿ12 ರಿಂದ ಮದ್ಯರಾತ್ರಿ 2 ರವರೆಗೆ 3 ಸಾವು. ಮದ್ಯರಾತ್ರಿ 2 ರಿಂದ ಬೆಳಿಗ್ಗೆ ವರೆಗೆ 7 ಸಾವು ಸಂಭವಿಸಿದೆ ಎಂದರು.
ಚಾಮರಾಜನಗರದಲ್ಲಿ ಘೋರ ಸ್ಥಿತಿ : ಏರುತ್ತಿರುವ ಸಾವಿನ ಸರಣಿ - ಆರೋಗ್ಯ ಸಚಿವರ ದೌಡು ..
ರಾತ್ರಿ 10.30ಕ್ಕೆ ಅಕ್ಸಿಜನ್ ಕೊರತೆ ಆಗುವ ಸಂಭವವಿತ್ತು. ಮೈಸೂರು ಸರಬರಾಜು ಇಲಾಖೆಗೆ ಕರೆ ಮಾಡಿ 60 ಆಕ್ಸಿಜನ್ ಸಿಲಿಂಡರ್ ತರಿಸಲಾಗಿದೆ. ಬೆಳಿಗ್ಗೆಯು 60 ಸಿಲಿಂಡರ್ ತರಿಸಲಾಗಿದೆ. ಮಧ್ಯಾಹ್ನದ ವೇಳೆಗೆ ಲಿಕ್ವಿಡ್ ಆಕ್ಸಿಜನ್ ಸಹ ಬರಲಿದೆ. ವೈದ್ಯರು ಡೆತ್ ಆಡಿಟ್ ರಿಪೋರ್ಟ್ ಕೊಟ್ಟಮೇಲೆ ಸಾವುಗಳಿಗೆ ನಿಖರ ಕಾರಣ ಗೊತ್ತಾಗಲಿದೆ. ಜಿಲ್ಕೆಗೆ 300-350 ಸಿಲಿಂಡರ್ ಅಗತ್ಯ ವುದ್ದು ಅಷ್ಟು ಪೂರೈಕೆಯಾಗುತ್ತಿಲ್ಲ ಎಂದು ಈ ವೇಳೆ ಜಿಲ್ಲಾಧಿಕಾರಿ ಹೇಳಿದರು.
ಆಕ್ಸಿಜನ್ ಕೊರತೆಯೇ ಕಾರಣ : 24 ಕೊರೋನ ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ ಎಂದು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಆರೋಪ ಮಾಡಿದ್ದು, ವೈದ್ಯಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಈ ಸಾವುಗಳಿಗೆ ಸರ್ಕಾರವೇ ನೇರ ಹೊಣೆ. ಆಕ್ಸಿಜನ್ ಕೊರತೆ ನೀಗಲು ಶಾಶ್ವತ ಪರಿಹಾರ ಆಗಬೇಕು ಎಂದು ಅಸಮಾಧಾನ ಹೊರಹಾಕಿದರು.
ಜಿಲ್ಲೆಯ ಕೋಟಾ ವನ್ನು ಸರ್ಕಾರ ಪೂರೈಸಬೇಕು. ಚೀಫ್ ಸೆಕ್ರೆಟರಿ ಅವರೊಂದಿಗೂ ಮಾತನಾಡಿದ್ದೇನೆ. ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಪುಟ್ಟರಂಗಶೆಟ್ಟಿ ಹೇಳಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona