ಚಾಮರಾಜನಗರದಲ್ಲಿಯೂ ಬೆಂಗಳೂರಿನ ಸ್ಥಿತಿಯೇ ನಿರ್ಮಾಣವಾಗಿದ್ದು, ಆಕ್ಸಿಜನ್‌ ಕೊರತೆಯಿಂದ ಹೆಚ್ಚು ಸಾವು ನೋವುಗಳಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ಸುಧಾಕರ್ ತುರ್ತಾಗಿ ಜಿಲ್ಲೆಗೆ ತೆರಳಿದ್ದಾರೆ. 

ಬೆಂಗಳೂರು (ಮೇ.03): ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ ಜಿಲ್ಲಾಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಜನ ಸಾವೀಗೀಡಾದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವರು ತಕ್ಷಣ ಚಾಮರಾಜನಗರಕ್ಕೆ ತೆರಳುವಂತೆ ಸಿಎಂ ಸೂಚಿಸಿದ್ದಾರೆ. 

 ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಆರೋಗ್ಯ ಸಚಿವ ಸುಧಾಕರ್ ಗೆ ಸಿಎಂ ಬುಲಾವ್ ನೀಡಿದ್ದು, ತುರ್ತಾಗಿ ಸಿಎಂ ಮನೆಗೆ ತೆರಳಿ ಆರೋಗ್ಯ ಸಚಿವ ಸುಧಾಕರ್ ಚರ್ಚೆ ನಡೆಸಿದ್ದಾರೆ.

 ಬೆಂಗಳೂರು ಅಷ್ಟೇ ಅಲ್ಲ, ಚಾಮರಾಜನಗರದಲ್ಲೂ ಆಕ್ಸಿಜನ್ ಕೊರತೆ ಭೀಕರ ಪರಿಣಾಮ ಎದುರಾಗಿದೆ. ಆಕ್ಸಿಜನ್ ಸಿಗದೆ ಜಿಲ್ಲಾಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಈ ನಿಟ್ಟಿನಲ್ಲಿ ತಕ್ಷಣವೇ ಚಾಮರಾಜನಗರಕ್ಕೆ ತೆರಳುವಂತೆ ಸುಧಾಕರ್‌ಗೆ ಸಿಎಂ ಆದೇಶಿಸಿದ್ದಾರೆ. ಅಲ್ಲದೇ ಅಲ್ಲಿಮ ವಾಸ್ತವ ಸಂಗತಿ ವರದಿ ಮಾಡುವಂತೆ ಸೂಚನೆ ನೀಡಿದ್ದಾರೆ. 

ಆಕ್ಸಿಜನ್ ಇಲ್ಲದೇ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 20 ಮಂದಿ ಸಾವು .

ಈಗ ಚಾಮರಾಜನಗರ ಘಟನೆ ನೋವಿನ ಸಂಗತಿ. ಅತ್ಯಂತ ದುರಾದೃಷ್ಟಕರ ವಿಚಾರ ಇದು. ಕೂಡಲೇ ಚಾಮರಾಜನಗರ, ಮೈಸೂರು, ಮಂಡ್ಯಕ್ಕೆ ತರಳುತ್ತೇನೆ. ಕಾರಣ ಏನು ? ನಿಜವಾಗಿಯೂ ಆಕ್ಸಿಜನ್ ಕೊರತೆಯ ಅಂತ ಪರಿಶೀಲಿಸುತ್ತೇನೆ. ಕೆಲವು ಹೊಂದಾಣಿಕೆ, ಸಮಸ್ಯೆ, ನ್ಯೂನ್ಯತೆ ಸರಿಪಡಿಸುವ ಕೆಲಸ ಮಾಡುತ್ತೇನೆ. ಹಟಾತ್ತಾಗಿ ಹೇಳೋ ಬದಲು, ಸ್ಪಷ್ಟ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಸುಧಾಕರ್ ಹೇಳಿದ್ದು, ಚಾಮರಾಜನಗರಕ್ಕೆ ತೆರಳಿದ್ದಾರೆ. 

ನಿನ್ನೆ ರಾತ್ರಿ 16, ಬೆಳಗಿನ ಜಾವ 4ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಮತ್ತೆ ಆಕ್ಸಿಜನ್ ಸಿಲಿಂಡರ್ ಬರೋವರೆಗೂ ಸಾವಿನ ಸರಣಿ ಮುಂದುವರಿಯುವ ಆತಂಕ ಎದುರಾಗಿದೆ. ಕಳೆದ 3 ದಿನದಿಂದ ಪೂರೈಕೆಯಾಗುತ್ತಿದ್ದ ಆಕ್ಸಿಜನ್ ಸ್ಥಗಿತವಾಗಿದ್ದು, ಈ ಅನಾಹುತಕ್ಕೆ ಕಾರಣ ಎನ್ನಲಾಗುತ್ತಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona