Asianet Suvarna News Asianet Suvarna News

ಕೇಂದ್ರ ಬರ ಅಧ್ಯಯನ ತಂಡ ತುಮಕೂರಿಗೆ ಭೇಟಿ

ತುಮಕೂರನ್ನು ಬರ ಪೀಡಿತ ಜಿಲ್ಲೆ ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕು ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡ ತಾಲೂಕಿನ ಬೈರೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿತು.

Central Drought Study Team visits Tumkur snr
Author
First Published Oct 8, 2023, 7:27 AM IST

ಕೊರಟಗೆರೆ: ತುಮಕೂರನ್ನು ಬರ ಪೀಡಿತ ಜಿಲ್ಲೆ ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕು ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡ ತಾಲೂಕಿನ ಬೈರೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿತು.

ಕೇಂದ್ರದಿಂದ ಆಗಮಿಸಿರುವ ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಆಶೋಕ್‌ಕುಮಾರ್, ಎಂಎನ್‌ಸಿಎಫ್‌ಸಿಯು ಉಪನಿರ್ದೇಶಕ ಕರಣ್‌ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪಕಾರ್ಯದರ್ಶಿ ಸಂಗೀತ್‌ಕುಮಾರ್, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ.ಶ್ರೀನಿವಾಸರೆಡ್ಡಿ ಅವರನ್ನು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ. ಸಿಇಒ ಪ್ರಭು ಅವರನ್ನು ಸ್ವಾಗತಿಸಿದರು.

ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಆಶೋಕ್‌ಕುಮಾರ್ ನೇತೃತ್ವದ ತಂಡ ತಾಲೂಕಿನಲ್ಲಿ ಬರ ಅಧ್ಯಯನ ನಡೆಸಿತು. ತಂಡವು ಮೊದಲಿಗೆ ಬೈರೇನಹಳ್ಳಿ ಗ್ರಾಮದ ನಾಗೇಂದ್ರಕುಮಾರ್, ರೈತರ ಜಮೀನಿಗೆ ಭೇಟಿ ನೀಡಿ 1.20 ಎಕರೆ ಪ್ರದೇಶದಲ್ಲಿ ಬೆಳೆದ ಶೇಂಗಾ ಬೆಳೆ ಮತ್ತು ಸುತ್ತಲಿನ ರೈತರ ಜಮೀನಿನಲ್ಲಿ ತೊಗರಿ, ಜೋಳ, ರಾಗಿ, ಮುಸುಕಿನ ಜೋಳ ಬೆಳೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ರೈತ ನಾಗೇಂದ್ರಕುಮಾರ್ ಅವರ ಜಮೀನಿನಲ್ಲಿ ನೀರಿಲ್ಲದೆ ಒಣಗಿದ್ದ ಶೇಂಗಾ ಬೆಳೆ ವೀಕ್ಷಿಸಿದರು, ಭಾಗ್ಯಮ್ಮ ಅವರ ಜಮೀನಿನಲ್ಲಿಯೂ ಒಣಗಿದ ಬೆಳೆ ಕಂಡು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ಬರ ಅಧ್ಯಯನ ತಂಡವು ಭೇಟಿ ನೀಡಿದ ವೇಳೆ ರೈತ ಸಂಘದ ಅಧ್ಯಕ್ಷ ಸಿದ್ದರಾಜು, ತಾಲೂಕಿನ ರೈತರು ತಮ್ಮ ಅಳಲು ತೋಡಿಕೊಂಡು ಬೆಳೆ ನಷ್ಟ ಪರಿಹಾರ ನೀಡುವಂತೆ ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಆಶೋಕ್‌ಕುಮಾರ್‌ ಅವರ ಬಳಿ ಮನವಿ ಪತ್ರದ ಸಲ್ಲಿಸಿದರು.

ಕೇಂದ್ರದ ಬರ ಅಧ್ಯಯನದ ಅಧಿಕಾರಿಗಳ ತಂಡ ಭೇಟಿ ನೀಡಿದ ವೇಳೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಸಿಇಒ ಪ್ರಭು, ತಾ.ಪಂ ಇಒ ದೊಡ್ಡಸಿದ್ದಯ್ಯ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು, ಪೋಲಿಸ್ ಇಲಾಖೆಯ ಸಿಪಿಐ ಸುರೇಶ್, ಸಬ್‌ಇನ್ಸ್‌ಪೆಕ್ಟರ್‌ ಚೇತನ್‌ ಕುಮಾರ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಬಾಕ್ಸ್ ಸುದ್ದಿ: ಕೇಂದ್ರ ಸರ್ಕಾರ ಎಕರೆಗೆ 7 ಸಾವಿರ ನಿಗಧಿಪಡಿಸದೆ, ಅದನ್ನು 25 ಸಾವಿರ ರು. ಗೆ ಹೆಚ್ಚಿಸಬೇಕೆಂದು ಕೇಂದ್ರದ ಬರ ಅಧ್ಯಯನ ತಂಡದ ಅಧಿಕಾರಿಗಳಲ್ಲಿ ರೈತರೆಲ್ಲರೂ ಮನವಿ ಮಾಡಿಕೊಂಡಿದ್ದೇವೆ, ಸಾಲ ಮಾಡಿ, ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಕೃಷಿ ಮಾಡಿದ್ದಾರೆ, ಆದರೆ, ಈ ಬಾರಿ ಮಳೆಯು ಕೈಕೊಟ್ಟಿದೆ ಆದ್ದರಿಂದ, ಕೇಂದ್ರ ಸರ್ಕಾರ ಇದನ್ನು ಜಾರಿಗೊಳಿಸಿ ರೈತರಿಗೆ ನೆರವಾಗಬೇಕೆಂದು ಮನವಿ ಮಾಡುತ್ತೇವೆ.

-ಸಿದ್ದರಾಜು, ತಾ.ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ

Follow Us:
Download App:
  • android
  • ios