'ಕೈ, ಬಾಯಿಗೆ ಬ್ರಾಂದಿ ಹಾಕ್ಕೊಂಡ್ರೆ ಕೊರೋನಾ ಸಾಯುತ್ತಾ’?
ವಿಶ್ವವನ್ನೇ ಕಾಡುತ್ತಿರುವ ಕೊರೋನಾ ವೈರಸ್ ಬ್ರಾಂದಿ ಕುಡಿಯುವುದರಿಂದ ದೂರವಾಗುತ್ತಾ? ಕೈಯನ್ನು ಸ್ವಚ್ಛಗೊಳಿಸಲು ಸ್ಯಾನಿಟೈಜರ್ ಬದಲು ಬ್ರಾಂದಿ ಉಪಯೋಗಿಸಬಹುದೇ? ಈ ಪ್ರಶ್ನೆಗಳನ್ನು ಸದನದಲ್ಲಿ ಕೇಳುವ ಮೂಲಕ ಜೆಡಿಎಸ್ನ ಮರಿತಿಬ್ಬೇಗೌಡ ಕೆಲ ಕಾಲ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿದರು.
ಬೆಂಗಳೂರು[ಮಾ.13]: ವಿಶ್ವವನ್ನೇ ಕಾಡುತ್ತಿರುವ ಕೊರೋನಾ ವೈರಸ್ ಬ್ರಾಂದಿ ಕುಡಿಯುವುದರಿಂದ ದೂರವಾಗುತ್ತಾ? ಕೈಯನ್ನು ಸ್ವಚ್ಛಗೊಳಿಸಲು ಸ್ಯಾನಿಟೈಜರ್ ಬದಲು ಬ್ರಾಂದಿ ಉಪಯೋಗಿಸಬಹುದೇ? ಈ ಪ್ರಶ್ನೆಗಳನ್ನು ಸದನದಲ್ಲಿ ಕೇಳುವ ಮೂಲಕ ಜೆಡಿಎಸ್ನ ಮರಿತಿಬ್ಬೇಗೌಡ ಕೆಲ ಕಾಲ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿದರು.
ಸಂವಿಧಾನದ ಮೇಲೆ ನಡೆದ ವಿಶೇಷ ಚರ್ಚೆ ವೇಳೆ ಮಾತನಾಡುವ ಸಂದರ್ಭದಲ್ಲಿ ವಿಶ್ವದಲ್ಲಿ ಎಲ್ಲರೂ ಕೊರೋನಾ ವೈರಸ್ಗೆ ನಡುಗುತ್ತಿದ್ದಾರೆ. ಹೋಟೆಲ್, ಸಿನಿಮಾ ಟಾಕೀಸ್, ಮಾಲ್, ಶಾಲಾ-ಕಾಲೇಜುಗಳು, ದೇವಸ್ಥಾನಗಳು ಬಂದ್ ಆಗಿವೆ. ಜೀವ ಉಳಿದರೆ ಸಾಕು ಎಂದು ಎಲ್ಲರೂ ಮನೆಯಲ್ಲಿ ಕುಳಿತುಬಿಟ್ಟಿದ್ದಾರೆ. ನಮ್ಮ ಮುಕ್ಕೋಟಿ ದೇವಸ್ಥಾನಗಳು, ಸ್ವಾಮೀಜಿಗಳು ಈಗ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.
ಮಹಾಮಾರಿ ಕರೋನಾಗೆ ಕರ್ನಾಟಕದಲ್ಲೇ ಮೊದಲ ಬಲಿ..ಎಚ್ಚರ ಎಚ್ಚರ
ಬ್ರಾಂದಿ ಕುಡಿದರೆ ಕೊರೋನಾ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಆಲ್ಕೊಹಾಲ್ ಇರುವ ಸ್ಯಾನಿಟೈಜರನ್ನು ಕೈ ಸ್ವಚ್ಛತೆಗೆ ಬಳಸಬೇಕೆಂದು ಹೇಳಲಾಗುತ್ತಿದೆ. ಹೀಗಾಗಿ ಕೈ ಹಾಗೂ ಬಾಯಿಗೆ ಬ್ರಾಂದಿ ಹಾಕಿಕೊಂಡರೆ ಬಹುಶಃ ಕೊರೋನಾ ಬರುವುದಿಲ್ಲ ಎಂದು ಕಾಣುತ್ತದೆ ಎಂದರು.
ಇದಕ್ಕೆ ಕಾಂಗ್ರೆಸ್ನ ಪಿ.ಆರ್.ರಮೇಶ್, ಹಿಂದೆ ಪ್ಲೇಗ್ ಬಂದಾಗ ಪ್ಲೇಗಮ್ಮ ದೇವಸ್ಥಾನ ಬಂತು. ಈಗ ಕೋವಿದಮ್ಮ ಅಂತ ದೇವರು ಸೃಷ್ಟಿಯಾಗಬಹುದು. ಈ ದೇವರಿಗೆ ಬ್ರಾಂದಿಯೇ ತೀರ್ಥ ಆಗುತ್ತದೆ ಎಂದಾಗ, ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು, ನಿನ್ನೆ ಸಿ.ಎಂ.ಇಬ್ರಾಹಿಂ ಈರುಳ್ಳಿ, ಉಪ್ಪು ಬಳಸಿದರೆ ಕೊರೋನಾ ಬರುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನಮಗೆ ಗೊಂದಲ ಆಗಿದೆ, ಯಾವುದನ್ನು ಬಳಸಬೇಕು ಎಂದರು.
6ನೇ ಕ್ಲಾಸ್ವರೆಗೆ ಶಾಲೆಗಳಿಗೆ ರಜೆ ಶುರು : ಯಾವ ಜಿಲ್ಲೆಗೆ ಅನ್ವಯ..?
ಆಗ ಸಚಿವ ಸಿ.ಟಿ.ರವಿ ಅವರು ಸದಸ್ಯರು ಬ್ರಾಂದಿ ಬಗ್ಗೆ ಪ್ರಚಾರ ಮಾಡುತ್ತಿರುವುದನ್ನು ನೋಡಿದರೆ ಅಬಕಾರಿ ಸಚಿವರ ಜೊತೆ ಏನಾದರೂ ಹೊಂದಾಣಿಕೆ ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿ, ಬ್ರಾಂಡಿ ಜೊತೆಗೆ ಬೇರೆ ಏನಾದರೂ ತೆಗೆದುಕೊಳ್ಳಬೇಕೇ ಎಂದಾಗ ಮರಿತಿಬ್ಬೇಗೌಡ ಅವರು, ಬ್ರಾಂದಿ ಜೊತೆ ಎಲ್ಲ ಬರುತ್ತದೆ ಎಂದರು. ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಸರ್ವರೋಗಕ್ಕೂ ಸಾರಾಯಿ ಮದ್ದು ಎಂಬ ಮಾತಿದೆ ಎಂದು ನಗುತ್ತಾ ಹೇಳಿದರು.
ಅನಂತರ ಅಬಕಾರಿ ಸಚಿವರು ಇನ್ನೂ ಕೆಲವು ಕಾಲ ಕೊರೋನಾ ವೈರಸ್ ಇರುವಂತೆ ನೋಡಿಕೊಂಡರೆ ಬ್ರಾಂದಿ ಸಾಕಷ್ಟು ಮಾರಾಟವಾಗಿ ನಿಮ್ಮ ಇಲಾಖೆಗೆ ಲಾಭ ಎಂದು ಹೇಳಿದಾಗ ಸಭೆಯಲ್ಲಿ ನಗು ಕಾಣಿಸಿಕೊಂಡಿತು.