ಪೌರತ್ವದ ರೋಷಾಗ್ನಿ: ಫೇಸ್ಬುಕ್, ವಾಟ್ಸಪ್ ಅಡ್ಮಿನ್ಗಳೇ ಜೋಕೆ
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದು, ಕರ್ಫ್ಯೂ ಜಾರಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಲದಲ್ಲಿ ಸುಳ್ಳು ಸುದ್ದಿ ಸಹಿತ ತರಹೇವಾರಿ ಸುದ್ದಿಗಳು ಹಬ್ಬುತ್ತಿದ್ದು ಇದರ ವಿರುದ್ದ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ. ಎಸ್. ಹರ್ಷ ಗ್ರೂಪ್ ಅಡ್ಮಿನ್’ಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು, (ಡಿ.19): ಪೌರತ್ವ ತಿದ್ದುಪಡಿ ಮಸೂದೆ ಕಿಚ್ಚು ಮಂಗಳೂರಿನಲ್ಲಿ ಜ್ವಾಲೆಯಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಕೋಮು ದ್ವೇಷವನ್ನು ಹರಡುವುದರ ವಿರುದ್ಧ ಪೊಲೀಸ್ ಖಡಕ್ ನೋಟಿಸ್ ಜಾರಿಗೊಳಿಸಿದೆ.
ವಾಟ್ಸಾಪ್, ಟೆಲಿಗ್ರಾಂ, ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೂಕ್ಷ್ಮ ಸಂದೇಶಗಳನ್ನು ಹರಡಿದರೆ ಅಂತಹ ಗ್ರೂಪ್ ಅಡ್ಮಿನ್ಗಳ ವಿರುದ್ದ FIRದಾಖಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷಾ ಖಡಕ್ ವಾರ್ನಿಂಗ್ ನೀಡಿದ್ದು, ಈ ಬಗ್ಗೆ ನೋಟೀಸ್ ಜಾರಿಗೊಳಿಸಿದ್ದಾರೆ.
ಮಂಗಳೂರು: ಯಾವ ಕಾರಣಕ್ಕೆ ಗುಂಡು ಹಾರಿಸಬೇಕಾಯಿತು? ಹರ್ಷಾ ವಿವರಣೆ
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗೆ ದಕ್ಕೆ ತರುವಂತಹ ಸಂದೇಶಗಳು ಕೆಲವು ಮೊಬೈಲ್ ಸಂಖ್ಯೆಯಿಂದ ಹರಿದಾಡುತ್ತಿರುವುದು ಕಂಡುಬಂದಿರುತ್ತದೆ.
ಇಂತಹ ಸಂದೇಶಗಳ ಮೇಲೆ ಪೊಲೀಸ್ ಇಲಾಖೆಯು ತೀವ್ರ ನಿಗಾವಹಿಸಿರುತ್ತದೆ. ನೀವು ಇಂತಹ ಸಂದೇಶಗಳನ್ನು ರವಾನಿಸಿದಲ್ಲಿ ಕಲಂ 153(ಎ), 295 ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಗ್ರೂಪ್ ಅಡ್ಮಿನ್ ಗಳನ್ನು ನೇರವಾಗಿ ಹೊಣೆಗಾರಿಕೆ ಮಾಡಿ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.