Asianet Suvarna News Asianet Suvarna News

ಚಿಕ್ಕಮಗಳೂರು ಎಂ.ಜಿ.ರಸ್ತೆ ಅಗಲೀಕರಣ: ಕಟ್ಟಡ ಮಾಲೀಕರು-ಪ.ಪಂ. ನಡುವೆ ಜಟಾಪಟಿ

ಜಿಲ್ಲೆಯ ಮೂಡಿಗೆರೆ ಪಟ್ಟಣದ ಆರ್ಥಿಕ ಚಟುವಟಿಕೆಗಳ ಪ್ರಮುಖವಾದ ಎಂ.ಜಿ. ರಸ್ತೆ ಅಗಲೀಕರಣ ವಿಷಯವೀಗ ಪಟ್ಟಣ ಪಂಚಾಯಿತಿ ಮತ್ತು ಕಟ್ಟಡ ಮಾಲೀಕರು, ವರ್ತಕರ ನಡುವೆ ಜಟಾಪಟಿಗೆ ಕಾರಣವಾಗಿದೆ. 

Building owner and town panchayat fight over widening of MG road at Chikkamagaluru gvd
Author
First Published Dec 28, 2022, 2:25 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಡಿ.28): ಜಿಲ್ಲೆಯ ಮೂಡಿಗೆರೆ ಪಟ್ಟಣದ ಆರ್ಥಿಕ ಚಟುವಟಿಕೆಗಳ ಪ್ರಮುಖವಾದ ಎಂ.ಜಿ. ರಸ್ತೆ ಅಗಲೀಕರಣ ವಿಷಯವೀಗ ಪಟ್ಟಣ ಪಂಚಾಯಿತಿ ಮತ್ತು ಕಟ್ಟಡ ಮಾಲೀಕರು, ವರ್ತಕರ ನಡುವೆ ಜಟಾಪಟಿಗೆ ಕಾರಣವಾಗಿದೆ. ಪಟ್ಟಣ ಪಂಚಾಯಿತಿ ವತಿಯಿಂದ ಮೊನ್ನೆ ರಸ್ತೆಯ ಎರಡೂ ಕಡೆ ಚರಂಡಿಯ ಮೇಲಿನ ಕಟ್ಟಡದ ಭಾಗಗಳನ್ನು ಜೆ.ಸಿ.ಬಿ. ಮೂಲಕ ತೆರೆವುಗೊಳಿಸಲಾಗಿದೆ. ಇದನ್ನು ಖಂಡಿಸಿ ಮೂಡಿಗೆರೆ ಎಂ.ಜಿ. ರಸ್ತೆ ಮತ್ತು ಮಾರ್ಕೆಟ್ ರಸ್ತೆಯ ಕಟ್ಟಡ ಮಾಲೀಕರು ಮತ್ತು ವರ್ತಕರು ಅಂಗಡಿ ಮುಗ್ಗಟ್ಟು ಬಾಗಿಲು ಮುಚ್ಚಿ ಬಂದ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಮನವಿ: ಅಂಗಡಿಗಳ ಮುಚ್ಚಿದ ವ್ಯಾಪಾರಸ್ಥರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಅವರಿಗೆ ಪಟ್ಟಣ ಪಂಚಾಯತಿ ಕ್ರಮದ ವಿರುದ್ಧ ದೂರು ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಕಟ್ಟಡ ಮಾಲೀಕರ ಸಂಘದ ಅಧ್ಯಕ್ಷ ಎನ್.ಎನ್. ಪ್ರಸನ್ನ ಎಂ.ಜಿ. ರಸ್ತೆ ಅಗಲೀಕರಣ ನೆಪದಲ್ಲಿ ಕಟ್ಟಡ ಮಾಲೀಕರು ಮತ್ತು ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದಾರೆ. ಕಾಲಾವಕಾಶವನ್ನೂ ನೀಡದೇ ಜೆಸಿಬಿ ಯಂತ್ರಗಳನ್ನು ಬಳಸಿ ರಸ್ತೆಯ ಸ್ಲಾಬ್‌ಗಳನ್ನು ತೆರವುಗೊಳಿಸಿದ್ದಾರೆ ಎಂದು ದೂರಿದ್ದಾರೆ. ರಸ್ತೆ ವಿಸ್ತರಣೆಗೆ ಅಗತ್ಯವಿದ್ದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ವಹಿಸಬೇಕು. ಜಾಗ ಕಳೆದುಕೊಳ್ಳುವ ಕಟ್ಟಡ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸೋತ ಅಭ್ಯರ್ಥಿ ಹೆಸರಲ್ಲಿ ಅನುದಾನ: ಸದನದಲ್ಲಿ ಟಿ.ಡಿ.ರಾಜೇಗೌಡ ಧರಣಿ

2002ರಲ್ಲಿ ನಡೆದಿದ್ದ ಅಗಲೀಕರಣ: ಮೂಡಿಗೆರೆ ಎಂ.ಜಿ.ರಸ್ತೆ ಬಹಳ ಇಕ್ಕಟ್ಟಿನಿಂದ ಕೂಡಿದೆ, ವಾಹನ ಸಂಚಾರ, ನಿಲುಗಡೆಗೆ ಮತ್ತು ಪಾದಾಚಾರಿಗಳ ಓಡಾಟಕ್ಕೆ ಬಹಳ ತ್ರಾಸದಾಯಕವಾಗಿದೆ. ಈ ರಸ್ತೆಯನ್ನು ವಿಸ್ತರಣೆ ಮಾಡಬೇಕು ಎಂದು ಬಹಳ ವರ್ಷಗಳಿಂದ ಸಾರ್ವಜನಿಕರು ಒತ್ತಾಯಿಸುತ್ತಾ ಬಂದಿದ್ದರು. 2002ರಲ್ಲಿ ಒಮ್ಮೆ ಎರಡೂವರೆ ಅಡಿ ಚರಂಡಿ ವಿಸ್ತರಣೆ ಮಾಡಿದ್ದು ಬಿಟ್ಟರೆ ರಸ್ತೆಯ ಅಗಲೀಕರಣ ನಡೆದಿರಲಿಲ್ಲ.ಇದೀಗ ಹಾಲಿ ಪಟ್ಟಣ ಪಂಚಾಯಿತಿಯಲ್ಲಿ ಜಿ.ಬಿ. ಧರ್ಮಪಾಲ್ ಅಧ್ಯಕ್ಷತೆಯ ಆಡಳಿತ ಮಂಡಳಿ ಎಂ.ಜಿ. ರಸ್ತೆ ವಿಸ್ತರಣೆ ಮಾಡಲೇ ಬೇಕು ಎಂದು ನಿರ್ಧರಿಸಿ ಅಂಗಲೀಕರಣದ ನಿರ್ಧಾರ ತೆಗೆದುಕೊಂಡಿದೆ.

ಇತ್ತೀಚೆಗೆ ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಸಂಘಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಎಂ.ಜಿ. ರಸ್ತೆ ಕಟ್ಟಡ ಮಾಲೀಕರು, ವರ್ತಕರು, ಸಾರ್ವಜನಿಕರ ಸಭೆಯನ್ನು ಏರ್ಪಡಿಸಿ ಎಂ.ಜಿ.ರಸ್ತೆ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗಿತ್ತು. ಸಭೆಯಲ್ಲಿ ಬಹುತೇಕ ಮಂದಿ ರಸ್ತೆಯನ್ನು ಎರಡೂ ಕಡೆ 10 ಅಡಿ ವಿಸ್ತರಣೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪಟ್ಟಣ ಪಂಚಾಯಿತಿಯಿಂದ ವ್ಯಾಪಾರಸ್ಥರು ತಮ್ಮ ಅಭಿಪ್ರಾಯ ತಿಳಿಸಲು ಕಟ್ಟಡ ಮಾಲೀಕರಿಗೆ ಒಂದು ವಾರದ ಗಡುವು ನೀಡಲಾಗಿತ್ತು. ಅದರಂತೆ ಕಟ್ಟಡ ಮಾಲೀಕರು ಪ್ರತ್ಯೇಕ ಸಭೆ ಸೇರಿ ರಸ್ತೆಯ ಎರಡೂ ಕಡೆ ತಲಾ ಎರಡೂವರೆ ರಸ್ತೆ ವಿಸ್ತರಣೆ ಮಾಡಲು ತಮ್ಮ ನಿಲುವು ವ್ಯಕ್ತಪಡಿಸಿದರು.

ಪ.ಪಂ. ಕೇವಿಯೇಟ್ ನೋಟೀಸ್: ಈ ನಡುವೆ ಎಂ.ಜಿ. ರಸ್ತೆ ವಿಸ್ತರಣೆ ವಿಚಾರವಾಗಿ ಕಟ್ಟಡ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತರಬಹುದು ಎಂದು ಪಟ್ಟಣ ಪಂಚಾಯಿತಿ ಮುನ್ನೆಚ್ಚರಿಕೆ ಕ್ರಮವಾಗಿ ಮೂಡಿಗೆರೆ ನ್ಯಾಯಾಲಯದಲ್ಲಿ ಕೇವಿಯೇಟ್ ಸಲ್ಲಿಸಿದೆ. ಕಟ್ಟಡ ಮಾಲೀಕರಿಗೆ ಕೇವಿಯೇಟ್ ನೋಟೀಸ್ ಜಾರಿ ಮಾಡಿದೆ. ಇದರಿಂದ ಕಟ್ಟಡ ಮಾಲೀಕರು ರಸ್ತೆ ವಿಸ್ತರಣೆ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಸಾಧ್ಯವಾಗುತ್ತಿಲ್ಲ.ಒಟ್ಟಾರೆ ಮೂಡಿಗೆರೆ ಎಂ.ಜಿ.ರಸ್ತೆ ವಿಸ್ತರಣೆ ಈಗ ವಿವಾದದ ಹಾದಿ ಹಿಡಿಯುತ್ತಿದೆ. ರಸ್ತೆ ವಿಸ್ತರಣೆ ಆಗಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿದೆ. 

ಹಿಂದೂ ಅರ್ಚಕರ ನೇಮಕ, ಹೋರಾಟಕ್ಕೆ ಬೆಲೆ ಸಿಕ್ಕಿದೆ: ಪ್ರಮೋದ್‌ ಮುತಾಲಿಕ್‌

ಇಲ್ಲಿ ಪ್ರತಿಷ್ಠೆಗಿಂತ ಜನರ ಹಿತದೃಷ್ಟಿ ಮುಖ್ಯವಾಗಿದೆ. ಕಟ್ಟಡ ಮಾಲೀಕರು ಮತ್ತು ಪಟ್ಟಣ ಪಂಚಾಯಿತಿ ಒಟ್ಟಾಗಿ ಕುಳಿತು ವಿವಾದಕ್ಕೆ ಅವಕಾಶವಾಗದಂತೆ ಅಗಲೀಕರಣಕ್ಕೆ ಒಂದು ಮಾನದಂಡ ರೂಪಿಸಿ ಅದನ್ನುಕಾರ್ಯಗತಗೊಳಿಸಬೇಕಾಗಿದೆ. ಈ ಹಿಂದೆ ಚಿಕ್ಕಮಗಳೂರು ಎಂ.ಜಿ.ರಸ್ತೆ ವಿಸ್ತರಣೆ ಸಮಯದಲ್ಲಿಯೂ ಹೀಗೆಯೇ ಪ್ರತಿರೋಧ ವ್ಯಕ್ತವಾಗಿತ್ತು. ಆದರೆ ಈಗ ರಸ್ತೆ ವಿಸ್ತರಣೆ ನಂತರ ವ್ಯಾಪಾರ ವಹಿವಾಟು ಹೆಚ್ಚಾಗಿದೆ, ಸಾರ್ವಜನಿಕರಿಗೂ ಅನುಕೂಲವಾಗಿದೆ. ಹಾಗೆಯೇ ಮೂಡಿಗೆರೆ ಎಂ.ಜಿ.ರಸ್ತೆಯೂ ಅಭಿವೃದ್ಧಿ ಆಗಬೇಕು ಎಂಬುದು ತಾಲ್ಲೂಕಿನ ಎಲ್ಲಾ ಜನರ ಅಭಿಲಾಷೆಯಾಗಿದೆ.

Follow Us:
Download App:
  • android
  • ios