ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗ್ರಾಮೀಣ ಅಂಚೆ ಬ್ಯಾಂಕ್‌ ಸೌಲಭ್ಯವು ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಸಮಸ್ಯೆಯಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಗ್ರಾಮೀಣ ನಿವಾಸಿಗಳಿಗೆ ಉಪಯೋಗ ಆಗೋದಕ್ಕಿಂತ ಹೆಚ್ಚಾಗಿ ಅವರನ್ನು ಮತ್ತಷ್ಟುಸಮಸ್ಯೆಗಳ ಸುಳಿಗೆ ದೂಡಿದಂತಾಗಿದೆ.

ಚಿಕ್ಕಮಗಳೂರು (ಜು.13): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗ್ರಾಮೀಣ ಅಂಚೆ ಬ್ಯಾಂಕ್‌ ಸೌಲಭ್ಯವು ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಸಮಸ್ಯೆಯಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗ್ರಾಮೀಣ ಭಾಗದ ಜನತೆಗೆ ಆರ್‌ಡಿ ಮುಂತಾದ ಉಳಿತಾಯ ಯೋಜನೆ, ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ, ಪಿಂಚಣಿ ಮುಂತಾದ ಸೌಲಭ್ಯಗಳ ಹಣವನ್ನು ಪಡೆಯಲು ಅನುಕೂಲವಾಗುವಂತೆ ಗ್ರಾಮೀಣ ಭಾಗದ ಅಂಚೆ ಕಚೇರಿಗಳಿಗೆ ಆರ್‌.ಐ.ಸಿ.ಟಿ. ಡಿವೈಸ್‌ ಯಂತ್ರವನ್ನು ನೀಡಲಾಗಿತ್ತು. ಆದರೆ, ಸರ್ಕಾರದ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಅಳವಡಿಕೆ ಆಗಿರುವ ಈ ಯಂತ್ರ ಅತಿಯಾದ ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದೆ.

ಜನರಲ್ಲಿ ಗೊಂದಲ, ನೌಕರರ ಮೇಲೆ ದೂರು ದಾಖಲು:

ಗ್ರಾಮಸ್ಥರು ಅವಶ್ಯಕತೆಗೆ ಸಮಯದಲ್ಲಿ ಹಣ ಪಡೆಯಲು ಸಾಧ್ಯವಾಗದೇ ಅಂಚೆ ನೌಕರರನ್ನೇ ಅನುಮಾನ ದೃಷ್ಠಿಯಿಂದ ನೋಡತೊಡಗಿದ್ದಾರೆ. ಅನೇಕ ಕಡೆ ಗ್ರಾಮೀಣ ಅಂಚೆ ನೌಕರರ ಮೇಲೆ ಸಾರ್ವಜನಿಕ ದೂರುಗಳು ದಾಖಲಾಗತೊಡಗಿವೆ. ಗ್ರಾಮೀಣ ಅಂಚೆ ಪಾಲಕರು ಮತ್ತು ಗ್ರಾಮೀಣ ಜನಸಾಮಾನ್ಯರ ನಡುವಿನ ಸಾಮರಸ್ಯ ಸಂಬಂಧಗಳಿಗೆ ಈ ಪುಟ್ಟ ಆರ್‌ಐಸಿಟಿ ಯಂತ್ರ ಸೇತುವೆಯಾಗುವ ಬದಲು ತಡೆಗೋಡೆಯಂತಾಗಿದೆ ಎನ್ನುವುದು ಗ್ರಾಮೀಣ ಅಂಚೆ ನೌಕರರ ಅನಿಸಿಕೆ. ಕುದ್ರೆಗುಂಡಿ, ಜಯಪುರ, ಕೂಳೂರು, ಅದ್ದಡ, ಕೆಸವೆ, ಮೇಗೂರು, ಅಗಳಗಂಡಿ, ಗುಡ್ಡೆತೋಟ, ಹೇರೂರು, ಬೊಮ್ಲಾಪುರ, ನಾರ್ವೆ, ನುಗ್ಗಿ, ದೇವನ್‌ ಎಸ್ಟೇಟ್‌ ಮುಂತಾದ ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಅತಿಯಾಗಿದೆ.

ಸಂಸದೆ ಶೋಭ ಕರಂದ್ಲಾಜೆ ಅವರು ಈ ಬಗ್ಗೆ ಗಮನಹರಿಸಿ ಬಿಎಸ್ಸೆನ್ನೆಲ್‌ ನೆಟ್‌ವರ್ಕ್ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರದ ಗಮನ ಸೆಳೆಯಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.