ತುಂಬರಮನೆ ಸೇತುವೆ ಕುಸಿತ: ಸ್ಥಳೀಯರ ಆಕ್ರೋಶ
ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಶೇಡ್ಗಾರು ಗ್ರಾ.ಪಂ. ವ್ಯಾಪ್ತಿಯ ತುಂಬರಮನೆ ಸೇತುವೆ ಕುಸಿದಿದ್ದು, ಆ ಭಾಗದ ಜನರು ಸಂಪರ್ಕ ವಂಚಿತರಾಗಿದ್ದಾರೆ. ಸೇತುವೆಗಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದ್ರೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಸೇತುವೆ ಕುಸಿದು ಆ ಭಾಗಕ್ಕೆ ಸಂಪರ್ಕವೇ ಇಲ್ಲದಂತಾಗಿದೆ.
ಶಿವಮೊಗ್ಗ(ಜು.24): ತೀರ್ಥಹಳ್ಳಿ ತಾಲೂಕಿನ ಶೇಡ್ಗಾರು ಗ್ರಾ.ಪಂ. ವ್ಯಾಪ್ತಿಯ ತುಂಬರಮನೆ ಸೇತುವೆ ಕುಸಿದಿದ್ದು, ಆ ಭಾಗದ ಜನರು ಸಂಪರ್ಕ ವಂಚಿತರಾಗಿದ್ದಾರೆ. ಮಳೆಗಾಲ ಆರಂಭಗೊಂಡಂತೆ ಮಲೆನಾಡಿನ ಅನೇಕ ಸಂಪರ್ಕ ಸೇತುವೆಗಳು ಕುಸಿಯುವುದು ಪ್ರತಿ ವರ್ಷದ ಗೋಳು. ಆದರೆ ಸೂಕ್ತ ಸಮಯದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವಲ್ಲಿ ಇಲಾಖೆಗಳು ವಿಫಲ ಆಗುವುದರಿಂದ ಜನರು ಸಂಪರ್ಕವಿಲ್ಲದೆ ಕಷ್ಟಪಡುವಂತಾಗಿದೆ.
ಸೇತುವೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದ್ರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು:
ಶಿವಮೊಗ್ಗ- ಚಿಕ್ಕಮಗಳೂರು ಗಡಿಭಾಗದಲ್ಲಿ ಇರುವ ಈ ಸೇತುವೆ ಅನೇಕ ಹಳ್ಳಿಗಳನ್ನು ಒಟ್ಟುಗೂಡಿಸುತ್ತದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು ಇದೇ ಸೇತುವೆ ಮೇಲೆ ಓಡಾಡಬೇಕು. ಇದು ಕುಸಿಯುವ ಸಾಧ್ಯತೆ ಬಗ್ಗೆ ಅನೇಕ ತಿಂಗಳುಗಳಿಂದ ಗ್ರಾಮಸ್ಥರು ಆಡಳಿತಕ್ಕೆ ತಿಳಿಸುತ್ತಲೇ ಬಂದಿದ್ದರೂ, ತಾಲೂಕು ಆಡಳಿತ ಈ ಬಗ್ಗೆ ಗಮನ ಹರಿಸಿರಲಿಲ್ಲ. ಇದೀಗ ಸೇತುವೆ ಪೂರ್ಣ ಕುಸಿದಿದೆ.
ಚಿಕ್ಕಮಗಳೂರು: ಅಪಾಯದ ಅರಿವಿದ್ದರೂ ನದಿ ದಾಟಲು ಕಾಲುಸಂಕವೇ ಗತಿ
ಗ್ರಾಮಸ್ಥರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ತಾ.ಪಂ. ಅಧ್ಯಕ್ಷೆ ನವಮಣಿ ರವಿಕುಮಾರ್, ತಾಲೂಕು ಅಧಿಕಾರಿಗಳು ಭೇಟಿ ನೀಡಿ ಹೋಗಿದ್ದರು. ಮಂಗಳವಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಯಾವುದೇ ಅನಾಹುತ ಸಂಭವಿಸುವುದಕ್ಕೆ ಮುನ್ನ ಸರ್ಕಾರ ಈ ಸೇತುವೆ ಕಡೆಗೆ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ