ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಆದಿತ್ಯರಾವ್‌ ಅಸೌಖ್ಯಕ್ಕೀಡಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಈತನನ್ನು ನಗರದ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಂಗಳೂರು(ಫೆ.27): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಆದಿತ್ಯರಾವ್‌ ಅಸೌಖ್ಯಕ್ಕೀಡಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಈತನನ್ನು ನಗರದ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಾಗಿ ಗುರುತು ಪತ್ತೆಗೆ ಸಾಕ್ಷಿಗಳ ಮುಂದೆ ಬುಧವಾರ ನಡೆಯಬೇಕಾಗಿದ್ದ ಪರೇಡ್‌ನ್ನು ಮುಂದೂಡಲಾಗಿದೆ.

Add Asianetnews Kannada as a Preferred SourcegooglePreferred

ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಈಗಾಗಲೇ 50ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿದೆ. ಈ ಪೈಕಿ ಆರೋಪಿಯು ಸ್ಫೋಟಕ ಇರಿಸಿ ಪರಾರಿಯಾದ ದಿನ ಆತನನ್ನು ಪ್ರತ್ಯಕ್ಷವಾಗಿ ಕಂಡಿದ್ದ 15 ಮಂದಿ ಎದುರು ಬುಧವಾರ ಪರೇಡ್‌ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಮಂಗಳೂರು ತಹಸೀಲ್ದಾರ್‌ಗೆ ಪತ್ರ ಬರೆಯಲಾಗಿತ್ತು. ತಹಸೀಲ್ದಾರ್‌ ಕೂಡ ಪರೇಡ್‌ ನಡೆಸಲು ದಿನಾಂಕ ನಿಗದಿಪಡಿಸಿದ್ದರು.

ಬಾಂಬರ್ ಆದಿತ್ಯ ರಾವ್ ಧ್ವನಿ ಪರೀಕ್ಷೆ: ಶನಿವಾರ ಅಂತ್ಯವಾಗುತ್ತೆ ಪೊಲೀಸ್ ಕಸ್ಟಡಿ

ಈ ಮಧ್ಯೆ ಆದಿತ್ಯರಾವ್‌ ಮಲೇರಿಯಾದಿಂದ ಬಳಲುತ್ತಿದ್ದು, ಮಂಗಳವಾರ ರಾತ್ರಿ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಹಾಗಾಗಿ ಬುಧವಾರದ ಪರೇಡ್‌ ಮುಂದೂಡಲಾಗಿದೆ.

ಜ.20ರಂದು ಆದಿತ್ಯ ರಾವ್‌ ವಿಮಾನ ನಿಲ್ದಾಣಕ್ಕೆ ತೆರಳಿ ಸ್ಫೋಟಕ ಇರಿಸಿ ವಾಪಸ್‌ ಹೋದ ವೇಳೆ ಆತನನ್ನು ನೋಡಿದ 15 ಮಂದಿಯನ್ನೂ ನ್ಯಾಯಾಧೀಶರ ಎದುರು ಹಾಜರುಪಡಿಸಿ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 164ರ ಅಡಿಯಲ್ಲಿ ಹೇಳಿಕೆ ದಾಖಲು ಮಾಡಿಸಲು ತನಿಖಾಧಿಕಾರಿಗಳು ನಿರ್ಧರಿಸಿದ್ದು, ಈ ಪ್ರಕ್ರಿಯೆಗೆ ಕೂಡ ಸಿದ್ಧತೆ ನಡೆದಿದೆ.