Asianet Suvarna News Asianet Suvarna News

ಯಾದಗಿರಿ: ಬಡ ಕುಟುಂಬಕ್ಕೆ ನೆರವು, ಮಾನವೀಯತೆ ಮೆರೆದ ಬಾಲಿವುಡ್‌ ನಟ ಸೋನು ಸೂದ್‌

ತ್ರಿವಳಿ ಗಂಡು ಮಕ್ಕಳ ಹೆತ್ತ ಕುಟುಂಬದ ಮೊರೆ: ಸೋನು ಸೂದ್‌ ಸಹಾಯ| ರಾಮಸಮುದ್ರದ ನಾಗರಾಜ ಕುಟುಂಬ: ಮಾನವೀಯತೆ ಮೆರೆದ ಬಾಲಿವುಡ್‌ ಖ್ಯಾತ ನಟ| ತ್ರಿವಳಿ ಮಕ್ಕಳ ಕುಟುಂಬಕ್ಕೆ ಆರ್ಥಿಕ ಸಂಕಷ್ಟದ ಕುರಿತು ಮೆಸೇಜ್‌ ಮಾಡಿದ್ದ ಸ್ಥಳೀಯ ಪತ್ರಕರ್ತ| ಆಹಾರ ಸಾಮಗ್ರಿ, ಆರೋಗ್ಯ ಚಿಕಿತ್ಸೆಗೆ ತಗುಲುವ ವೆಚ್ಚ ನೀಡಲು ಮುಂದಾದ ಸೋನು ಸೂದ್‌| 

Bollywood Actor Sonu Sood Help to Poor Family in Yadgir in Karnataka
Author
Bengaluru, First Published Aug 26, 2020, 12:49 PM IST

ಯಾದಗಿರಿ(ಆ.26): ತ್ರಿವಳಿ ಮಕ್ಕಳ ಜನನದಿಂದಾಗಿ ಚಿಂತೆಗೀಡಾಗಿದ್ದ ಯಾದಗಿರಿಯ ಕುಟುಂಬವೊಂದಕ್ಕೆ ಖ್ಯಾತ ಬಾಲಿವುಡ್‌ ನಟ ಸೋನು ಸೂದ್‌ ನೆರವಿನ ಹಸ್ತ ಚಾಚಿದ್ದಾರೆ. ವಲಸೆ ಕಾರ್ಮಿಕರು ಹಾಗೂ ಬಡ ರೈತರ ಪರ ಸಹಾಯದ ಮೂಲಕ ಜನಮನ ಸೆಳೆದಿರುವ ಸೋನು ಸೂದ್‌ರ ಈ ಕಾರ್ಯ ಮತ್ತೊಮ್ಮೆ ಶ್ಲಾಘನೆಗೆ ಪಾತ್ರವಾಗಿದೆ.

ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಪದ್ಮಾ ಎಂಬಾಕೆ ಆ.22ರಂದು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮುದ್ದಾದ ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಪತಿ ನಾಗರಾಜ ಬೆಂಗಳೂರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೆಲಸ ಬಿಟ್ಟು ಮನೆಯಲ್ಲಿದ್ದ ನಾಗರಾಜಗೆ ಕುಟುಂಬದ ನಿರ್ವಹಣೆಯೇ ಕಷ್ಟವಾಗಿದ್ದ ಈ ಸಂದರ್ಭದಲ್ಲಿ ಪತ್ನಿ ಪದ್ಮಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು ಆರ್ಥಿಕ ಪರಿಸ್ಥಿತಿ ನೆನೆದು ಚಿಂತೆಗೆ ಕಾರಣವಾಗಿತ್ತು.

'ಅವರಿನ್ನು ಅನಾಥರಲ್ಲ': ಹೆತ್ತವರ ಕಳೆದುಕೊಂಡ 3 ಮಕ್ಕಳ ದತ್ತು ಪಡೆದ ಸೋನು ಸೂದ್!

ತಾಯಿ ಮಕ್ಕಳು ಆರೋಗ್ಯವಾಗಿರೋದು ನಾಗರಾಜ್‌ಗೆ ಖುಷಿ ತಂದಿತ್ತಾದರೂ, ಮೊದಲಿನ ಹೆಣ್ಣು ಮಗು ಸೇರಿದಂತೆ ನಾಲ್ವರು ಮಕ್ಕಳ ಭವಿಷ್ಯದ ಬಗ್ಗೆ ತೀವ್ರ ಚಿಂತಿತರಾಗಿದ್ದರು. ಈ ಮಾಹಿತಿ ಅರಿತ ಯಾದಗಿರಿಯ ಸ್ಥಳೀಯ ಪತ್ರಿಕೆಯ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ರೆಡ್ಡಿ ಹತ್ತಿಕುಣಿ, ಸೋನು ಟೀಮ್‌ಗೆ ಮೆಸೇಜ್‌ ಮಾಡಿ ನಾಗರಾಜ್‌ ಪರಿಸ್ಥಿತಿ ಬಗ್ಗೆ ವಿವರಿಸಿದ್ದರು.

ನಾಗರಾಜ್‌ ಜೊತೆ ಮಾತನಾಡಿದ ಸೋನು ಸೂದ್‌ ಟೀಮ್‌ ಸದಸ್ಯ ಗೋವಿಂದ್‌ ಅಗರ್ವಾಲ್‌, ನೆರವಿನ ಭರವಸೆ ನೀಡಿದ್ದಾರೆ. ಸದ್ಯ, ಮೂರು ತಿಂಗಳ ದಿನಸಿ ಪದಾರ್ಥ ನೀಡಲು ಮುಂದಾಗಿರುವ ಸೋನು ಟೀಮ್‌, ಭವಿಷ್ಯದಲ್ಲಿ ಮಕ್ಕಳ ಚಿಕಿತ್ಸೆ ವೆಚ್ಚವನ್ನೂ ಭರಿಸುವುದಾಗಿ ತಿಳಿಸಿದೆ. ನೆರವು ನೀಡಲು ಮುಂದಾಗಿರುವ ಟೀಮ್‌ಗೆ ನಾಗರಾಜ್‌ ಕೃತಜ್ಞತೆ ಸಲ್ಲಿಸಿದ್ದಾರೆ. ಇದರಿಂದ ಬಡ ಕುಟುಂಬದಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.

ಈ ಬಗ್ಗೆ ಯಾದಗಿರಿಯ ವಿವಿಧ ಪ್ರಮುಖರ ಜೊತೆ ಸಂಪರ್ಕಿಸಿದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ್‌ ರೆಡ್ಡಿ, ಒಂದಿಷ್ಟು ಧನ ಸಹಾಯವನ್ನೂ ನಾಗರಾಜ್‌ ಕುಟುಂಬಕ್ಕೆ ನೀಡಿದ್ದಾರೆ. ಸೋನೂ ಸೂದ್‌ ಅವರು ತಮ್ಮನ್ನು ಫೋನ್‌ ಮೂಲಕ ಸಂಪರ್ಕಿಸಿದ್ದ ಮಾನವೀಯತೆಯುಳ್ಳ ಮನುಷ್ಯ ಎಂದು ರೆಡ್ಡಿ ಹೇಳಿದರು.

ಕೇವಲ 5500 ರೂಗಳೊಂದಿಗೆ ಮುಂಬೈಗೆ ಬಂದಿದ್ದ ಲಾಕ್‌ಡೌನ್‌ ಹೀರೋ ಸೋನುಸೂದ್‌

ನಟ ಸೋನು ಸೂದ್‌ ಮುಂಬೈ ನಗರದಲ್ಲಿ ಕೊರೋನಾ ವೈರಸ್‌ ಹೆಚ್ಚಾಗಿ ಹರಡಿದ ಸಂದರ್ಭದಲ್ಲಿ ನಗರದಲ್ಲಿ ಕೆಲಸ ಮಾಡುತ್ತಿರುವ ದೇಶದ ವಿವಿದ ರಾಜ್ಯಗಳ ವಲಸೆ ಕಾರ್ಮಿಕರನ್ನು ಸ್ವಂತ ಖರ್ಚಿನಲ್ಲಿ ಅವರ ಅವರ ಗ್ರಾಮಗಳಿಗೆ ಕಳುಹಿಸುವ ಮೂಲಕ ಮಾನವಿಯತೆ ಮೆರೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು.

ತ್ರಿವಳಿ ಮಕ್ಕಳ ಹೆರಿಗೆ ನಂತರ ನಾಗರಾಜ್‌ ಕುಟುಂಬ ಸಹಜವಾಗಿಯೇ ಆತಂಕಕ್ಕೊಳಗಾಗಿತ್ತು. ಮಕ್ಕಳನ್ನು ಹೇಗೆ ನೋಡಿಕೊಳ್ಳುವುದು ಮನೆಯ ಪರಿಸ್ಥಿತಿ ನೆನೆದು ಚಿಂತಾಕ್ರಾಂತರಾಗಿದ್ದರು. ಸೋನು ಸೂದ್‌ ಟೀಮ್‌ ಬಗ್ಗೆ ಮಾಹಿತಿಯಿತ್ತು. ಹೀಗಾಗಿ, ಮೆಸೇಜ್‌ ಮಾಡಿದ್ದೆ. ಈಗ ಅವರ ಸ್ಪಂದನೆ ನಿಜಕ್ಕೂ ಶ್ಲಾಘನೀಯ ಎಂದು ಯಾದಗಿರಿಯ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ರೆಡ್ಡಿ ಅವರು ತಿಳಿಸಿದ್ದಾರೆ.

ಸೋನು ಸೂದ್‌ ಅವರ ತಂಡ ನನ್ನ ಕುಟುಂಬಕ್ಕೆ ಸಹಾಯ ಮಾಡಿರುವುದು ಮರೆಯಲಾರೆ. ನಾನು ಕೂಲಿ ಕೆಲಸ ಮಾಡಿ ಬದುಕುತ್ತಿದ್ದೆ . ಲಾಕ್‌ ಡೌನ್‌ ಸಂಕಷ್ಟದಲ್ಲಿದ್ದ ನನಗೆ ತ್ರಿವಳಿ ಮಕ್ಕಳ ಜನನ ಕೊಂಚ ಗಾಬರಿಯಾಗಿತ್ತು. ಈಗ ನಿಜಕ್ಕೂ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದು ತ್ರಿವಳಿ ಮಕ್ಕಳ ತಂದೆ ನಾಗರಾಜ್‌ ರಾಮಸಮುದ್ರ ಅವರು ತಿಳಿಸಿದ್ದಾರೆ. 

ಇದನ್ನೂ ನೋಡಿ | ಸರ್ಕಾರಿ ಶಾಲೆ ದತ್ತು ಪಡೆದ ಕಿಚ್ಚ ಸುದೀಪ್ 

"
 

Follow Us:
Download App:
  • android
  • ios