Asianet Suvarna News Asianet Suvarna News

ವಿರೋಧ ಪಕ್ಷಗಳನ್ನು ಬೆದರಿಸುವ ಬಿಜೆಪಿಯ ಕುತಂತ್ರ : ಮಹಿಳಾ ಕಾಂಗ್ರೆಸ್‌

ರಾಹುಲ್‌ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವ ಕೆಂದ್ರ ಬಿಜೆಪಿ ಸರ್ಕಾರದ ನಿರ್ಧಾರವು ವಿರೋಧ ಪಕ್ಷಗಳನ್ನು ಬೆದರಿಸುವ ಕುತಂತ್ರ ಎಂದು ಎಐಸಿಸಿ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನೆಟ್ಟಾಡಿಸೋಜಾ ಆರೋಪಿಸಿದರು.

BJPs ploy to intimidate opposition parties: Mahila Congress snr
Author
First Published Mar 26, 2023, 6:25 AM IST

  ಮೈಸೂರು :  ರಾಹುಲ್‌ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವ ಕೆಂದ್ರ ಬಿಜೆಪಿ ಸರ್ಕಾರದ ನಿರ್ಧಾರವು ವಿರೋಧ ಪಕ್ಷಗಳನ್ನು ಬೆದರಿಸುವ ಕುತಂತ್ರ ಎಂದು ಎಐಸಿಸಿ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನೆಟ್ಟಾಡಿಸೋಜಾ ಆರೋಪಿಸಿದರು.

ಮೈಸೂರಿನ ವಿಂಡ್‌ ಫ್ಲವರ್‌ ರೆಸಾರ್ಚ್‌ನಲ್ಲಿ ಶನಿವಾರ ನಡೆದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನ ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಜನರಿಗೆ ನೆರವಾಗದೇ, ಕರ್ಪೊರೇಟ್‌ಗಳಿಗೆ ನೆರವಾಗುತ್ತಿದೆ. ಅಲ್ಲದೆ, ಸರ್ವಾಧಿಕಾರಿ ಧೋರಣೆ ಹೊಂದಿದೆ ಎಂದು ದೂರಿದರು.

ಅದಾನಿ ಸಮೂಹ ಭ್ರಷ್ಟಾಚಾರ ಕುರಿತು ಹಿಂಡನ್‌ಬಗ್‌ರ್‍ ಆರೋಪವನ್ನು ಜಂಟಿ ಪಾರ್ಲಿಮೆಂಟ್‌ ಸಮಿತಿ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ಆಗ್ರಹಿಸುತ್ತಿರುವುದು ಬಿಜೆಪಿಗೆ ಭಯ ಶುರುವಾದಂತೆ ಕಾಣುತ್ತಿದೆ. ಹೀಗಾಗಿಯೇ, ಸಣ್ಣ ಪ್ರಕರಣ ಮುಂದಿಟ್ಟುಕೊಂಡು ರಾಹುಲ್‌ ಅವರನ್ನು ಸಂಕಷ್ಟಕ್ಕೆ ಸಿಲುಕಿಸುವ ಪಿತೂರಿ ಮಾಡಿದ್ದು, ಇದರ ವಿರುದ್ಧ ಮಹಿಳಾ ಕಾಂಗ್ರೆಸ್‌ ದೇಶವ್ಯಾಪ್ತಿ ಸಹಿ ಸಂಗ್ರಹ ಚಳವಳಿ ನಡೆಸಲಿದೆ ಎಂದು ಅವರು ಹೇಳಿದರು.

ದೇಶದ ಇತಿಹಾಸದಲ್ಲೇ ಅದಾನಿ ಸಮೂಹದ ಹಗರಣ ದೊಡ್ಡದ್ದಾಗಿದ್ದು, ತಮ್ಮ ಭವಿಷ್ಯಕ್ಕಾಗಿ ಜನಸಾಮಾನ್ಯರು ಎಲ್‌ಐಸಿ ಮತ್ತು ಎಸ್‌ಬಿಐ ಬ್ಯಾಂಕ್‌ಗಳಲ್ಲಿ ಕೂಡಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕ್ಳೊಲಾಗಿದೆ. ಈ ಬೃಹತ್‌ ಭ್ರಷ್ಟಾಚಾರದ ವಿರುದ್ಧ ತನಿಖೆಗೆ ಆಗ್ರಹಿಸುತ್ತಿರುವ ವಿರೋಧ ಪಕ್ಷಗಳನ್ನು ಉದ್ದೇಶ ಪೂರ್ವಕವಾಗಿ ಸದೆಬಡಿಯುವ ಉದ್ದೇಶದಿಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಭಾರತ್‌ ಜೋಡೋ ಯಾತ್ರೆ ಮೂಲಕ ರಾಹುಲ್‌ ಗಾಂಧಿ ದೇಶವ್ಯಾಪಿ ಎಲ್ಲಾ ವರ್ಗದ ಜನರ ಮನಸ್ಸನ್ನು ಬೆಸೆಯುವ ಕೆಲಸ ಮಾಡಿದ್ದಾರೆ. ಇದು ಮುಂಬರುವ ಲೋಕಸಭಾ ಚುನಾವಣೆ ಮೇಲೆ ಸಾಕಷ್ಟುಪರಿಣಾಮ ಬೀರಲಿದ್ದು, ಇದರಿಂದ ಬಿಜೆಪಿಗೆ ದೊಡ್ಡ ನಡುಕ ಶುರುವಾಗಿದೆ ಎಂದು ಅವರು ತಿಳಿಸಿದರು.

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಕರ್ನಾಟಕ್ಕೆ ಆಗಮಿಸಲಿದ್ದಾರೆ. ಈ ಹಿಂದೆ ನಡೆದ ಪ್ರಜಾಧ್ವನಿ ಯಾತ್ರೆಯ ವೇಳೆ ಪ್ರತಿ ಮನೆ ಒಡತಿಗೆ ಮಾಸಿಕ . 2000 ಸಹಾಯಧನದ ಗ್ಯಾರಂಟಿ ಕಾರ್ಡ್‌ ಉದ್ಘಾಟನೆ ವೇಳೆ ಅವರು ಬಂದಿದ್ದರು ಎಂದರು.

ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ಹಾಗೂ ಪದಾಧಿಕಾರಿಗಳು ಇದ್ದರು.

ಮೊದಲ ಪಟ್ಟಿ ರಿಲೀಸ್

2023 ರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್‌ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ 3 - 4 ದಿನಗಳಿಂದ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಈವರೆಗೆ ಪಟ್ಟಿ ಬಿಡುಗಡೆಯಾಗಿರಲಿಲ್ಲ. ಆದರೆ, ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುವ ದಿನವೇ ಕಾಂಗ್ರೆಸ್‌ 124 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪ್ರಮುಖವಾಗಿ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಈಗ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸುವುದು ಸ್ಪಷ್ಟವಾಗಿದೆ. ಅಲ್ಲದೆ, ಮೊದಲ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ಕ್ಷೇತ್ರದ ಅಭ್ಯರ್ಥಿ ಹೆಸರಿಲ್ಲ. ಸಿದ್ದರಾಮಯ್ಯ 2 ಕ್ಷೇತ್ರ ಸ್ಪರ್ಧೆ ಸುಳಿವು ಬೆನ್ನಲ್ಲೇ ಮೊದಲ ಪಟ್ಟಿಯಲ್ಲಿ ಕೋಲಾರ, ಬಾದಾಮಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿರದಿರುವುದು ಕುತೂಹಲ ಮೂಡಿಸಿದೆ.

ಇದನ್ನು ಓದಿ: ಕೋಲಾರ, ವರುಣಾ ಎರಡೂ ಕಡೆ ಸ್ಪರ್ಧೆಗೆ ಸಿದ್ದರಾಮಯ್ಯ ಸಿದ್ಧತೆ: ಹೈಕಮಾಂಡ್‌ನಿಂದಲೂ ಒಪ್ಪಿಗೆ ಸಾಧ್ಯತೆ

Follow Us:
Download App:
  • android
  • ios