Asianet Suvarna News Asianet Suvarna News

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಲಿದೆ: ಶಾಸಕ

ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಲಿದೆ. ಆ ನಿಟ್ಟಿನಲ್ಲಿ ಸಂಘಟನೆಯನ್ನು ಇನ್ನೂ ಹೆಚ್ಚು ಬಲಿಷ್ಠಗೊಳಿಸುತ್ತಿದ್ದೇವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಹೇಳಿದರು.

BJP will come to power again in the state: MLA snr
Author
First Published Jan 16, 2023, 6:07 AM IST

 ಶಿರಾ (ಜ.16):  ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಲಿದೆ. ಆ ನಿಟ್ಟಿನಲ್ಲಿ ಸಂಘಟನೆಯನ್ನು ಇನ್ನೂ ಹೆಚ್ಚು ಬಲಿಷ್ಠಗೊಳಿಸುತ್ತಿದ್ದೇವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಹೇಳಿದರು.

ನಗರದ ಜ್ಯೋತಿನಗರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಬೂತ್‌ ವಿಜಯ್‌ ಅಭಿಯಾನದಲ್ಲಿ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಬಾವುಟ ಹಾರಿಸಿ ಮಾತನಾಡಿದರು. ಬಿಜೆಪಿ ಪಕ್ಷವನ್ನು ಸಂಘಟನೆ ಮಾಡುವ ಉದ್ದೇಶದಿಂದ ಬೂತ್‌ ವಿಜಯ್‌ ಅಭಿಯಾನವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಕಾರ್ಯಕರ್ತರವನ್ನು ಅವರ ಮನೆಯಲ್ಲಿಯೇ ಭೇಟಿ ಮಾಡಲಾಗುತ್ತದೆ. ಇದರಿಂದ ಅವರೊಂದಿಗೆ ನಿಕಟವಾದ ಸಂಬಂಧ ವೃದ್ಧಿಯಾಗುತ್ತದೆ. ಆಗ ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಬೂತ್‌ ವಿಜಯ್‌ ಅಭಿಯಾನ ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಶಿರಾ ಕ್ಷೇತ್ರದ 150 ಬೂತ್‌ಗಳಲ್ಲಿ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಬಾವುಟ ಹಾರಿಸಲಾಗಿದೆ. ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕ್ರಮಗಳನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕಾರ್ಯ ಮಾಡುತ್ತೇವೆ. ಇದರಿಂದ ಗ್ರಾಮೀಣ ಮಟ್ಟದಲ್ಲಿ ತಳಮಟ್ಟದ ಸಂಘಟನೆಯನ್ನು ಬಲಿಷ್ಠವಾಗಿಸಲು ಸಾಧ್ಯವಾಗಿದೆ. ಬಹಳ ಹುಮ್ಮಸ್ಸಿನಿಂದ ಕಾರ್ಯಕರ್ತರು ಸ್ವಾಗತ ಮಾಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ಮಾಡಿರುವ ಸಂಘಟನೆಯನ್ನು ತಾಲ್ಲೂಕಿನಲ್ಲಿ ಬೇರೆ ಯಾವ ಪಕ್ಷವೂ ಸಹ ಮಾಡಿಲ್ಲ ಎಂದರು.

ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಮಾತನಾಡಿ, ಬೂತ್‌ ವಿಜಯ್‌ ಅಭಿಯಾನ ಮುಖ್ಯ ಉದ್ದೇಶ ಶೇ.100ರಷ್ಟುಮತದಾನ ಆಗುವ ರೀತಿಯಲ್ಲಿ ಮತದಾರರನ್ನು ಮನವೊಲಿಸುವುದು ಮತ್ತು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವುದಾಗಿದೆ. ಪ್ರಧಾನಮಂತ್ರಿಯವರ ಮನ್‌ ಕೀ ಬಾತ್‌ ಕಾರ್ಯಕ್ರಮವನ್ನು ಎಲ್ಲಾ ಬೂತ್‌ ಹಾಗೂ ಹಳ್ಳಿಗಳಲ್ಲಿ ವೀಕ್ಷಿಸುವಂತೆ ಜನರನ್ನು ಪ್ರೇರೇಪಿಸುವುದಾಗಿದೆ. ಇದಕ್ಕಾಗಿ ಪ್ರತೀ ಬೂತ್‌ನಲ್ಲಿ ವಾಟ್ಸ್‌ಪ್‌ ಗ್ರೂಪ್‌ಗಳನ್ನು ಮಾಡಿ ಪಕ್ಷದ ಎಲ್ಲಾ ವಿಚಾರಗಳನ್ನು ಜನರಿಗೆ ಮುಟ್ಟಿಸಲಾಗುತ್ತಿದೆ. ಬೂತ್‌ ವಿಜಯ ಅಭಿಯಾನದ ಯಶಸ್ವಿಗಾಗಿ ಶ್ರಮಿಸಿದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೂ ಧನ್ಯವಾದ ತಿಳಿಸುತ್ತೇನೆ ಎಂದ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಪ್ರಚಾರ ಆರಂಭಿಸಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಂಗರಾಜು, ನಗರ ಬಿಜೆಪಿ ಅಧ್ಯಕ್ಷರಾದ ವಿಜಯರಾಜ್‌, ಶಿರಾ ಯೋಜನಾ ಪ್ರಾಧಿಕಾರದ ನರಸಿಂಹರಾಜು, ನಗರ ಬಿಜೆಪಿ ಉಪಾಧ್ಯಕ್ಷ ಗಿರಿಧರ್‌, ಮಹಿಳಾ ಘಟಕದ ಲತಾ ಕೃಷ್ಣ, ನಾಗರತ್ನಮ್ಮ, ಸ್ವಪ್ನ, ಸ್ವರ್ಣಗೌರಿ ಸೇರಿದಂತೆ ಹಲವರು ಹಾಜರಿದ್ದರು.

15ಶಿರಾ2: ಶಿರಾದ ಜ್ಯೋತಿನಗರದಲ್ಲಿ ಬಿಜೆಪಿ ಬೂತ್‌ ವಿಜಯ್‌ ಅಭಿಯಾನ ಏರ್ಪಡಿಸಲಾಗಿತ್ತು. ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ, ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಸೇರಿದಂತೆ ಹಲವರು ಹಾಜರಿದ್ದರು.

Follow Us:
Download App:
  • android
  • ios