ಲವ್ ಜಿಹಾದ್ ನಿಷೇಧಿಸಿದ್ರೆ ಸಿದ್ದುಗೇಕೆ ಚಿಂತೆ?
ಮತಾಂತರ ಸಂವಿಧಾನ ಬಾಹಿರ| ಸಂವಿಧಾನಕ್ಕೆ ವಿರುದ್ಧವಾದದನ್ನು ತಡೆದರೆ ತಪ್ಪೇನು?|ಸಿದ್ದರಾಮಯ್ಯ ಈ ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇದು ಇವರ ಜಂಗಲ್ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹರಿಹಾಯ್ದ ರವಿಕುಮಾರ್|
ಬೆಂಗಳೂರು(ಡಿ.06): ವಿವೇಕ ಇಲ್ಲದೆ ಬಿಜೆಪಿ ಸರ್ಕಾರ ಲವ್ ಜಿಹಾದ್ ನಿಷೇಧ ಕಾಯ್ದೆ ತರಲು ಮುಂದಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯು ಖಂಡನೀಯವಾಗಿದ್ದು, ತಕ್ಷಣ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಒತ್ತಾಯಿಸಿದ್ದಾರೆ.
ಕಾಯ್ದೆ ಜಾರಿಯು ಅಸಂವಿಧಾನಿಕವಾಗಿದ್ದು, ಎಂದು ಸಿದ್ದರಾಮಯ್ಯ ಹೇಳಿಕೆಯನ್ನು ರವಿಕುಮಾರ್ ಟೀಕಿಸಿದ್ದಾರೆ. ಲವ್ ಜಿಹಾದ್ ಹೆಸರಲ್ಲಿ ನಡೆಯುತ್ತಿರುವ ಹಿಂದೂ ಯುವತಿಯರ, ಮಹಿಳೆಯರ ಮೇಲಿನ ಅನಾಚಾರ, ಮತಾಂತರ, ಅನ್ಯಾಯದ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸುವ ಕುರಿತು ಮಸೂದೆ ಬಗ್ಗೆ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ಖಂಡನೀಯ. ಅವರು ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇದು ಇವರ ಜಂಗಲ್ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹರಿಹಾಯ್ದಿದ್ದಾರೆ.
ಪೋಷಕರ ಒಪ್ಪಿಗೆ ಮೇರೆಗೆ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಮದುವೆ ನಿಲ್ಲಿಸಿದ ಪೊಲೀಸ್!
ಸಂಘಟನಾತ್ಮಕವಾಗಿ ಒಂದು ಗುಂಪು ಕಟ್ಟಿಕೊಂಡು, ವಿದೇಶಗಳಿಂದ ಎನ್ಜಿಒಗಳ ಮೂಲಕರ ಹಣ ಪಡೆದು ಹಿಂದು ಯುವತಿಯನ್ನಷ್ಟೇ ಗುರಿ ಮಾಡಿ ಅವರ ದಾರಿ ತಪ್ಪಿಸಲಾಗುತ್ತದೆ. ಮತಾಂತರ ಮಾಡುವುದು ಸಂವಿಧಾನ ಬಾಹಿರ. ಸಂವಿಧಾನಕ್ಕೆ ವಿರುದ್ಧವಾದುದ್ದನ್ನು ತಡೆಯಲು ಹೊರಟರೇ ಸಿದ್ದರಾಮಯ್ಯ ಅವರಿಗೇಕೆ ಚಿಂತೆ?. ಈ ದೇಶಕ್ಕೆ ಮೊಘಲರ ಆಳ್ವಿಕೆ, ಟಿಪ್ಪು ಸುಲ್ತಾನ್ರ ಕೊಡುಗೆ ಏನೆಂದು ಇಡೀ ಸಮಾಜಕ್ಕೆ ಗೊತ್ತಿದೆ. ಈ ದೇಶದ ಪರಂಪರೆ, ಸಂಸ್ಕೃತಿಯನ್ನು ಹಾಳು ಮಾಡಲಾಗಿದೆ. ಪವಿತ್ರ ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡಿದ್ದರು. ಇಂತಹವರ ಚರಿತ್ರೆ ನಮ್ಮ ಸಮಾಜಕ್ಕೆ ಬೇಕಾಗಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ವೋಟ್ ಬ್ಯಾಂಕ್ ಮಾತ್ರ ಕಾಣಿಸುತ್ತೆ
ತ್ರಿವಳಿ ತಲಾಖ್ ವಿರೋಧಿಸುವಲ್ಲಿ ಕಾಂಗ್ರೆಸ್ಗೆ ಮುಸ್ಲಿಂ ವೋಟ್ ಬ್ಯಾಂಕ್ ಕಾಣಿಸಿತು. ಕಾಶ್ಮೀರ 370ನೇ ವಿಧಿ ತೆರವುಗೊಳಿಸಿದಾಗ, ಸಿಎಎ ಜಾರಿಗೆ ಮುಂದಾದಾಗ, ರಾಮಮಂದಿರ ನಿರ್ಮಾಣಕ್ಕೆ ಮುಂದಾದಾಗ, ಗೋಹತ್ಯೆ ನಿಷೇಧಿಸಿ, ಅಕ್ರಮ ಗೋ ಸಾಗಣೆ ತಡಯಬೇಕು ಎಂದು ಹೇಳಿದಾಗ ಕಾಂಗ್ರೆಸ್ಗೆ ಮುಸ್ಲಿಂ ವೋಟ್ ಬ್ಯಾಂಕ್ ಕಾಣಿಸುತ್ತದೆ. ಲವ್ ಜಿಹಾದ್ ನಿಷೇಧಿಸಿ ಎಂದಾಗಲೂ ಅದೇ ಕಾಣಿಸುತ್ತಿದೆ. ಕಾಂಗ್ರೆಸ್ಗೆ ಹಿಂದುಗಳ ಮತ ಬೇಡ. ಮುಸ್ಲಿಂ ಮತಗಳಷ್ಟೇ ಅವರ ಗುರಿ. ಈ ವಿಷಯವನ್ನು ಹಿಂದುಗಳು ಅರ್ಥ ಮಾಡಿಕೊಳ್ಳಬೇಕು. ತಮ್ಮ ಹಿತ ಕಾಯುತ್ತೇವೆ ಎನ್ನುತ್ತ ಇಷ್ಟುವರ್ಷ ಮುಸ್ಲಿಂರನ್ನು ಹಿಂದುಳಿದವರಾಗಿಯೇ ಉಳಿಸಿದೆ. ಕಾಂಗ್ರೆಸ್ ಸರ್ಕಾರಗಳು ತಮ್ಮನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತವೆ ಎಂಬುದನ್ನು ಮುಸ್ಲಿಂರೂ ಅರ್ಥ ಮಾಡಿಕೊಳ್ಳಬೇಕು ಮತ್ತು ಸಿದ್ದರಾಮಯ್ಯ ಅವರ ಬೇಜವಾಬ್ದಾರಿ ಹೇಳಿಕೆ ಕುರಿತು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಬೇಕು ಎಂದು ರವಿಕುಮಾರ್ ಆಗ್ರಹಿಸಿದ್ದಾರೆ.