ಇಂಡಿಯಾ ಒಕ್ಕೂಟದ ಮುಖ್ಯಸ್ಥರಾಗಿರುವ ಎಐಸಿಸಿಸಿ ಅಧ್ಯಕ್ಷ ಡಾ. ಖರ್ಗೆ ಈ ವಿಚಾರದಲ್ಲಿ ಕಾಂಗ್ರೆಸ್‌ ನಿಲುವು ಬಹಿರಂಗಪಡಿಸಲಿ. ಉದಯನಿಧಿ ಒಕ್ಕೂಟದ ಅಂಗ ಪಕ್ಷದವರೇ ಆಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಸಹ ಈ ಹೇಳಿಕೆಗೆ ಬೆಂಬಲ ನೀಡಿದಂತೆಯೇ ಆಗಿದೆ ಎಂದು ದೂರಿದ ಬಿಜೆಪಿಗರು

ಕಲಬುರಗಿ(ಸೆ.08): ತಮಿಳುನಾಡು ರಾಜ್ಯದ ಡಿಎಂಕೆ ಪಕ್ಷದ ಉದಯನಿಧಿ ಸ್ಟಾಲಿನ್ ಭಾಷಣ ಮಾಡುವಾಗ ಸನಾತನ ಧರ್ಮ ನಾಶ ಮಾಡಬೇಕಂದು ಹೇಳಿಕೆ ನೀಡಿದ್ದು, ಉದಯನಿಧಿ ಹಾಗೂ ಅವರ ಹೇಳಿಕೆ ಬೆಂಬಲಿಸಿರುವ ಸಚಿವ ಪ್ರಿಯಾಂಕ್‌ ಇವರಿಬ್ಬರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕಲಬುರಗಿ ಸಂಸದ ಡಾ. ಉಮೇಶ್‌ ಜಾಧವ್‌ ಹಾಗೂ ಬಿಜೆಪಿ ಮುಖಮಡರು ಆಗ್ರಹಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮಾಣ ವಚನ ಸ್ವೀಕಾರ ಮಾಡುವಾಗ ಯಾವುದೆ ಧರ್ಮದವರಿಗೆ ನೋವು ಮಾಡೋದಿಲ್ಲ ಅಂತಾ ಹೇಳಿ, ನಂತರದಲ್ಲಿ ಪರ ಧರ್ಮ ಟೀಕಿಸುವ ಹೇಳಿಕೆ ನೀಡುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮಕ್ಕೂ ಬಿಜೆಪಿ ಚಿಂತಿಸುತ್ತಿದೆ ಎಂದರು.

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ, ನನ್ನ ಹೇಳಿಕೆಗೆ ನಾನು ಬದ್ಧ: ಪ್ರಿಯಾಂಕ್ ಖರ್ಗೆ

ಸ್ಟಾಲಿನ್‌ ಹೇಳಿಕೆಯನ್ನ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕ್ ಖರ್ಗೆ, ಉದಯನಿಧಿ ಸ್ಟಾಲಿನ್ ಇಬ್ಬರನ್ನು ಮಂತ್ರಿ ಮಂಡಲದಿಂದ‌ ವಜಾ ಮಾಡಬೇಕು ಎಂದು ರಾಜ್ಯಪಾಲರಿಗೆ ಆಗ್ರಹ ಮಾಡುತ್ತೇವೆಂದು ಅವರು ಹೇಳಿದರು.

ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆ ವಾಪಸ್ ಪಡೆಯಬೇಕು. ಕಾಂಗ್ರೆಸ್‌ನವರು ಈ ವಿಷಯವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಮುಖಂಡರಾದ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌, ದತ್ತಾತ್ರೇಯ ಪಾಟೀಲ್‌ ರೇವೂರ್‌, ಜಿಲ್ಲಾಧ್ಯಕ್ಷ ಶಿವರಾಜ್‌ ಪಾಟೀಲ್‌ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್‌, ಎಂಎಲ್‌ಸಿ ಬಿಜಿ ಪಾಟೀಲ್‌ ಅವರು ಒತ್ತಾಯ ಮಾಡಿದರು.

ಸನಾತನ ವಿಷಯವಾಗಿ ದಿನಕ್ಕೊಬ್ಬರು ಹೇಳಿಕೆ ಕೊಡುತ್ತಿದ್ದಾರೆ. ಇದು ನಿಲ್ಲಬೇಕು. ನಾವು ಇವನ್ನೆಲ್ಲ ನೋಡುತ್ತ ಸುಮ್ಮನಿದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯವಲ್ಲ. ನಾವೂ ಸಿಡಿದೇಳುತ್ತೇವೆಂದು ಬಿಜೆಪಿ ಮುಖಂಡರು ಎಚ್ಚರಿಕೆ ಮಾತುಗಳನ್ನು ಹೇಳಿದರು.

ಇಂಡಿಯಾ ಒಕ್ಕೂಟದ ಮುಖ್ಯಸ್ಥರಾಗಿರುವ ಎಐಸಿಸಿಸಿ ಅಧ್ಯಕ್ಷ ಡಾ. ಖರ್ಗೆ ಈ ವಿಚಾರದಲ್ಲಿ ಕಾಂಗ್ರೆಸ್‌ ನಿಲುವು ಬಹಿರಂಗಪಡಿಸಲಿ. ಉದಯನಿಧಿ ಒಕ್ಕೂಟದ ಅಂಗ ಪಕ್ಷದವರೇ ಆಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಸಹ ಈ ಹೇಳಿಕೆಗೆ ಬೆಂಬಲ ನೀಡಿದಂತೆಯೇ ಆಗಿದೆ ಎಂದು ದೂರಿದರು. ಕಾಂಗ್ರೆಸ್‌ ಇನ್ನೂ ಮೌನವಾಗಿದೆ, ಯಾಕೆ ಅನ್ನೋದೇ ಗೊತ್ತಾಗುತ್ತಿಲ್ಲ. ನಾವು ಮೋದಿಯವರ ದಾರಿ ಅನುಸರಿಸುತ್ತಿದ್ದೇವೆಂದರು.