ನಡೆದಿತ್ತಾ ಬಿಜೆಪಿ, ಜೆಡಿಎಸ್ ನಡುವೆ ಒಳ ಒಪ್ಪಂದ : ಸೋಲಿಗೆ ಇದೇ ಕಾರಣವಾಯ್ತಾ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತಿದ್ದು, ಇದಕ್ಕೆ ಕಾರಣ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಒಳ ಒಪ್ಪಂದ ಎಂದು ಆರೋಪಿಸಲಾಗಿದೆ.
ಕೆ.ಆರ್. ನಗರ [ಆ.22]: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಲಲು ಜೆಡಿಎಸ್ ಮತ್ತು ಬಿಜೆಪಿಯ ಒಳ ಒಪ್ಪಂದ ಕಾರಣ, ಆ ಕ್ಷೇತ್ರದ ಜನತೆ ಸಿದ್ದರಾಮಯ್ಯ ಅವರನ್ನು ತಿರಸ್ಕರಿಸಿಲ್ಲ ಎಂದು ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್ ಹೇಳಿದ್ದಾರೆ.
ಕೆ.ಆರ್. ನಗರದ ಪುರಸಭೆ ಬಯಲು ರಂಗಮಂದಿರದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಮಾತನಾಡಿ, ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದರಿಂದ ಸಿದ್ದರಾಮಯ್ಯನವರು ಸೋತಿದ್ದಾರೆ ಎಂದು ಹೇಳಿರುವುದು ಸತ್ಯಕ್ಕೆ ದೂರ ಎಂದರು.
‘ಅತೃಪ್ತ ಪ್ರೇತಾತ್ಮಕ್ಕೆ ಸಚಿವ ಸ್ಥಾನ ನೀಡಲು ಅರ್ಹರ ಕಡೆಗಣನೆ’
ಸಮುದಾಯದ ಮುಖಂಡರು ಮತ್ತು ಧರ್ಮಾಧಿಕಾರಿಗಳ ಬೇಡಿಕೆಯಂತೆ ವೀರಶೈವ ಮತ್ತು ಲಿಂಗಾಯತ ಧರ್ಮವನ್ನು ಪ್ರತ್ಯೇಕ ಮಾಡಲು ಅಂದು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಸಮಿತಿ ರಚಿಸಿ ಸಮಿತಿಯ ಸದಸ್ಯರು ನೀಡಿದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರೆ ಹೊರತು ಧರ್ಮವನ್ನು ಒಡೆಯುವ ಕೆಲಸ ಮಾಡಿಲ್ಲ ಎಂಬುದನ್ನು ಅನರ್ಹ ಶಾಸಕರಾದ ಎಚ್.ವಿಶ್ವನಾಥ್ ಅರಿತುಕೊಳ್ಳಬೇಕೆಂದು ಅವರು ಮನವರಿಕೆ ಮಾಡಿದ್ದಾರೆ.