ರಾಜ್ಯದಲ್ಲಿ ಪ್ರೇತಾತ್ಮವೊಂದಕ್ಕೆ ಸಚಿವ ಸ್ಥಾನ ನೀಡಲು ಅರ್ಹರನ್ನು ಕಡೆಗಣಿಸಲಾಗಿದೆ ಎಂದು ಮಾಜಿ ಸಚಿವರೋರ್ವರು ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು [ಆ.22]: ಮೈಸೂರು ಭಾಗದ ಅತೃಪ್ತ ಪ್ರೇತಾತ್ಮಕ್ಕೆ ಸಚಿವ ಸ್ಥಾನ ದೊರಕಿಸಿಕೊಡುವ ಉದ್ದೇಶದಿಂದ ಮೈಸೂರು, ಕೊಡಗು, ಚಾಮರಾಜನಗರ ಭಾಗದ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ನೀಡಿಲ್ಲ ಎಂದು ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ವಿರುದ್ಧ ಮಾಜಿ ಸಚಿವ ಸಾ.ರಾ.ಮಹೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ನಾಲ್ಕೈದು ಬಾರಿ ಗೆದ್ದ ಶಾಸಕರಿದ್ದಾರೆ. ಅಪ್ಪಚ್ಚು ರಂಜನ್‌, ಕೆ.ಜಿ.ಬೋಪಯ್ಯ ಅವರಂತಹ ನಾಯಕರು ಪಕ್ಷದಲ್ಲಿದ್ದಾರೆ. ಆದರೂ ಕೂಡ ಈ ಭಾಗದ ಒಬ್ಬರಿಗೂ ಸಚಿವ ಸ್ಥಾನ ನೀಡದೇ ಅತೃಪ್ತ ಪ್ರೇತಾತ್ಮಕ್ಕೆ ಅವಕಾಶ ನೀಡಲು ಸ್ಥಾನವನ್ನು ಮೀಸಲಿಟ್ಟಿದ್ದೀರಾ ಎಂದು ಸಿಎಂ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ 25 ದಿನಗಳ ನಂತರ ಅರ್ಧಂಬರ್ಧ ಸಚಿವ ಸಂಪುಟ ರಚನೆಯಾಗಿದೆ. ನೆರೆ ಬಂದು ಜನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಈ ಭಾಗದ ಯಾರೊಬ್ಬರೂ ಸಚಿವರಿಲ್ಲದ ಮೇಲೆ ಅವರು ಯಾರನ್ನು ಭೇಟಿಯಾಗಬೇಕು. ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿದೆ. ಈ ಭಾಗದ ಸಚಿವರಿಲ್ಲದೇ ದಸರಾ ಆಚರಿಸುವ ಪರಿಸ್ಥಿತಿ ಬಂದೊದಗಿದೆ ಎಂದರು.

ಎಚ್‌.ವಿಶ್ವನಾಥ್‌ ಅವರ ವಿರುದ್ಧದ ಹೇಳಿಕೆಗೆ ನಾನು ಈಗಲೂ ಬದ್ಧ. ವಿಶ್ವನಾಥ್‌ ಯಾವುದೇ ಆಸೆ- ಆಮಿಷಕ್ಕೆ ಒಳಗಾಗಿಲ್ಲ ಎಂದರೆ ಅವರ ನೆಚ್ಚಿನ ಕ್ಷೇತ್ರ ಕಪಡಿಗೆ ಬಂದು ಪ್ರಮಾಣ ಮಾಡಲಿ. ಒಂದು ವೇಳೆ ಆಮಿಷಕ್ಕೆ ಬಲಿಯಾಗಿಲ್ಲ ಎಂದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದರು.