*  ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ್‌ ಟೀಕೆ*  ಮೊದಲು ದಿವ್ಯಾ ಹಾಗರಗಿ ಬಂಧಿಸಿ ವಿಚಾರಣೆ ನಡೆಸಲಿ*  ಕಾಂಗ್ರೆಸ್‌ ಕಾಲದಲ್ಲಿ ನೇಮಕಾತಿ ಹಗರಣಗಳು ಆಗಿಲ್ಲ 

ಕಲಬುರಗಿ(ಏ.24): ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ(PSI Recruitment Scam) ಆಗಿರುವ ಹಗರಣದಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ(CID) ಪೊಲೀಸರು ಹಗರಣದ ರೂವಾರಿ, ಬಿಜೆಪಿ ನಾಯಕಿ, ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿಯನ್ನ ಪತ್ತೆಹಚ್ಚಿ, ಶೋಧಿಸಿ ಬಂಧಿಸುತ್ತಿಲ್ಲ ಯಾಕೆ ಎಂದು ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ್‌(Allamprabhu Patil) ಪ್ರಶ್ನಿ​ಸಿ​ದ್ದಾ​ರೆ.

Add Asianetnews Kannada as a Preferred SourcegooglePreferred

ಪಿಎ​ಸ್‌ಐ ಅಕ್ರ​ಮಕ್ಕೆ ಸಂಬಂಧಿ​ಸಿ​ದಂತೆ ಸಿಐಡಿಯು ಕಾಂಗ್ರೆಸ್‌(Congress) ಬ್ಲಾಕ್‌ ಅಧ್ಯಕ್ಷರ ಬಂಧನ ಮಾಡಿದೆ. ಇವರೆಲ್ಲರೂ ಸಿಗುತ್ತಿದ್ದಾರೆ, ದಿವ್ಯಾ(Divya Hagaragi) ಮಾತ್ರ ಇವರಿಗೆ ಸಿಗುತ್ತಿಲ್ಲ ಅನ್ನೋದನ್ನ ಗಮನಿಸಿದರೆ ಸದರಿ ಹಗರಣದ ತನಿಖೆಯ ದಿಕ್ಕು ತಪ್ಪಿಸುವ ವ್ಯವಸ್ಥಿತ ಹುನ್ನಾರ ಬಿಜೆಪಿ(BJP) ಮಾಡುತ್ತಿದೆ ಎಂದು ದೂರಿದ್ದಾರೆ.

ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪಿಎಸ್‌ಐ ನೇಮಕದಲ್ಲೂ ಅಕ್ರಮ?

ಹಗರಣ ಮಾಡಿದವರ ಪ್ರತಿ ಸಾಕ್ಷಿ ಪುರಾವೆ ಇದ್ದಲ್ಲಿ ಅವರು ಯಾವುದೇ ಪಕ್ಷದವರಾಗಲಿ ಸಿಐಡಿ ಬಂಧಿಸಿ ವಿಚಾರಣೆ ನಡೆಸಬೇಕು. ಇಲ್ಲಿ ನೋಡಿದರೆ ಸಿಐಡಿ ಏ.4ರಂದು ಕಲಬುರಗಿಗೆ(Kalaburagi) ಬಂದು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದೆ. ಇದುವರೆಗೂ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರಿಗೆ ಸಿಕ್ಕಿಲ್ಲ ಎಂದರೆ ಅಚ್ಚರಿಯಾಗುತ್ತದೆ. ಇತ್ತ ನೋಡಿದರೆ ಕಾಂಗ್ರೆಸ್‌ ಪಕ್ಷಕ್ಕೆ ಸಂಬಂಧಪಟ್ಟವರಿಗೆ ಬಂಧಿಸುತ್ತಿದ್ದಾರೆ. ಬಿಜೆಪಿ ಇಲ್ಲಿ ತನ್ನ ಮೇಲಿನ ಆರೋಪದಿಂದ ತಪ್ಪಿಸಿಕೊಳ್ಳಲು ಹಗರಣದ ತನಿಖೆಯ ದಿಕ್ಕನ್ನೆ ತಪ್ಪಿಸುವ ಶಂಕೆ ಕಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್‌ ಕಾಲದಲ್ಲಿ ನೇಮಕಾತಿ ಹಗರಣಗಳು(Recruitment Scams) ಆಗಿಲ್ಲ, ಅದೇನಿದ್ದೂರ ಬಿಜೆಪಿ ಅವಧಿಯಲ್ಲಿಯೇ ನೇಮಕಾತಿ ಹಗರಣಗಳ ಸಾಲು ಶುರುವಾಗಿದೆ. ಇನ್ನಾದರೂ ಬಿಜೆಪಿ ಪಕ್ಷದ ಸರಕಾರ ಹಗರಣದ ಸರಿಯಾದ ತನಿಖೆಗೆ ಮುಂದಾಗಲಿ. ಪಕ್ಷವಾರು ಆರೋಪಿಸುತ್ತ ಹಗರಣದ ತನಿಖೆ ದಿಕ್ಕು ತಪ್ಪಿಸೋದು ಬೇಡ. ಮೊದಲು ದಿವ್ಯಾ ಹಾಗರಗಿ ಬಂಧನವಾಗಲಿ. ಆ ನಂತರ ಆಕೆಯ ವಿಚಾರಮೆ ನಡೆಸಿದರೆ ಅದೇ ಪಕ್ಷದವರೇ ಹೊರಬರುತ್ತಾರೆಂದಿದ್ದಾರೆ.
ಈಗಾಗಲೇ ಕಲಬುರಗಿ ಸಂಸದರೇ ಶಿಫಾರಸು ಪತ್ರ ಕೊಟ್ಟಿದ್ದರಿಂದ ದಿವ್ಯಾ ಶಾಲೆಗೆ ಪರೀಕ್ಷಾ ಕೇಂದ್ರ ದೊರಕಿತು ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂಬ ವರದಿಗಳಿವೆ. ಇಂತಹ ಅಕ್ರಮ ನಡೆಸಲಿಕ್ಕೆ ಅವರು ಶಿಫಾರಸು ಪತ್ರ ಕೊಟ್ಟರೆ? ಇವೆಲ್ಲವೂ ತನಿಖೆಯಾಗಲಿ, ಅದನ್ನ ಬಿಟ್ಟು ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಬಿಜೆಪಿ ಮಾಡಬಾರದು ಎಂದು ಅಲ್ಲಂಪ್ರಭು ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.