ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ  ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ 10 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿರುವ ಬಗ್ಗೆ ನಮಗೆ ತೃಪ್ತಿ  ನಿರೀಕ್ಷೆಗೆ ತಕ್ಕಂತೆ ಅಭ್ಯರ್ಥಿಗಳ ಗೆಲುವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ

 ಬೆಳಗಾವಿ (ಸೆ.09): ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ನಾವು ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಎದುರಿಸಿದ್ದು, 10 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿರುವ ಬಗ್ಗೆ ನಮಗೆ ತೃಪ್ತಿಯಿದೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಅಭ್ಯರ್ಥಿಗಳ ಗೆಲುವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Add Asianetnews Kannada as a Preferred SourcegooglePreferred

ನಗರದ ಕಾಂಗ್ರೆಸ್‌ ಭವನದಲ್ಲಿ ಬುಧವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಚುನಾವಣೆಯಲ್ಲಿ ಎಂಇಎಸ್‌ ಹಾಗೂ ಮರಾಠಿಗರ ಒಳ ಜಗಳ ಬಿಜೆಪಿಗೆ ಲಾಭವಾಗಿದೆ. ಮೋದಿ ಮೋಡಿಯಿಂದ ಬಿಜೆಪಿ ಪಾಲಿಕೆ ಚುನಾವಣೆ ಗೆಲುವೇನೂ ಪಡೆದಿಲ್ಲ. ಬಿಜೆಪಿ ಗೆಲುವಿನ ಬಗ್ಗೆ ಆಶ್ಚರ್ಯ ಪಡಬೇಕಿಲ್ಲ. ಕಾಂಗ್ರೆಸ್‌ ಹೊಂದಾಣಿಕೆ ಕೊರತೆಯಿಂದ ಬಿಜೆಪಿ ಸ್ಥಾನ ಪಡೆದುಕೊಂಡಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಂಸತ್ತು ಚುನಾವಣೆಯನ್ನು ಗೆದ್ದಷ್ಟುಬೊಗಳೆ ಹೊಡೆಯುತ್ತಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ಬೆಳಗಾವಿ ಫಲಿತಾಂಶ : ಎಂಇಎಸ್ ನಾಯಕರಿಂದ ಮತ್ತೊಂದು ಕ್ಯಾತೆ

ಲೆಕ್ಕಾಚಾರದ ಕ್ಷೇತ್ರಗಳು ನಮ್ಮ ಕೈ ವಶವಾಗಿವೆ. ಇನ್ನೂ 8 ಸೀಟು ಬರಬೇಕಿತ್ತು. ಆದರೆ ಸ್ವಲ್ಪ ಹಿನ್ನಡೆಯಾಗಿದೆ. ಕಾಂಗ್ರೆಸ್‌ ವೈಫಲ್ಯಗಳಲ್ಲ. ನಮ್ಮ ಶಕ್ತಿ ಪ್ರದರ್ಶನ ಮಾಡಿದ್ದೇವೆ. ಗೆಲ್ಲುವ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ ಎಂದರು.

ಬಿಜೆಪಿ ಆಡಳಿತದಿಂದ ಜನರಿಗೆ ಸಮಸ್ಯೆ ಆಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೌದು, ಆದರೆ ಬಿಜೆಪಿಯವರು ಮರಾಠಿಗರನ್ನು ಬಳಸಿಕೊಂಡಿದ್ದಾರೆ. ಅವರಿಂದ ಬಿಜೆಪಿ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.

ನಮ್ಮ ಗೆಲುವು ನಮಗೆ ತೃಪ್ತಿ ತಂದಿದೆ. ಕೆಪಿಸಿಸಿ ಅಧ್ಯಕ್ಷರಿಗೆ 15 ಸ್ಥಾನ ಗೆಲವು ಪಡೆಯುತ್ತೇವೆ ಎಂದು ಹೇಳಲಾಗಿತ್ತು. ಹೆಚ್ಚು ಕಡಿಮೆ ಸಂಖ್ಯೆ ಹತ್ತಿರ ಬಂದಿದ್ದೇವೆ. ಪಕ್ಷೇತರ ಐದು ಜನರು ನಮ್ಮೊಂದಿಗೆ ಇದ್ದಾರೆ. ಕಾಂಗ್ರೆಸ್‌ ಕಳೆದುಕೊಂಡ 8 ಕ್ಷೇತ್ರದಲ್ಲಿ ದಕ್ಷಿಣದಲ್ಲಿ ಮೂರು, ಉತ್ತರದಲ್ಲಿ 5 ನೇರವಾಗಿ ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ಪಾಲಿಕೆ ಚುನಾವಣೆಯಲ್ಲಿ ನಿರೀಕ್ಷೆ ಕ್ಷೇತ್ರ ಸೋಲಿಕೆಗೆ ಕಾರಣ, ಮೈನಸ್‌ ಯಾವ ಕ್ಷೇತ್ರದಲ್ಲಿ ಆಗಿದೆ. ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ . ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಾಗುತ್ತಿದೆ ಎಂದರು.

ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ಸಿಕ್ಕಿದೆ. ಫಲಿತಾಂಶದ ವಿರುದ್ಧ ಕೆಲ ಪರಾಜಿತ ಅಭ್ಯರ್ಥಿಗಳು ಕೋರ್ಟ್‌ ಮೆಟ್ಟಿಲೇರುವುದರಿಂದ ಯಾವುದೇ ಲಾಭವಿಲ್ಲ. ಮತ ಹಂಚಿಕೆ ಪರಿಶೀಲಿಸಬೇಕು. ಕಳೆದ ಸಲ ಎಂಇಎಸ್‌ 32 ಸ್ಥಾನ ಗೆದ್ದಿತ್ತು. ಈಗ 2 ಸ್ಥಾನದಲ್ಲಿ ಗೆದ್ದಿದೆ. ಎಂಇಎಸ್‌ಗೆ ಆಗಿರುವ ನಷ್ಟವೇ ಬಿಜೆಪಿಗೆ ಲಾಭವಾಗಿದೆ. ನಾವು ಎಂಟು ಸ್ಥಾನ ಕಳೆದುಕೊಳ್ಳಲು ನಮ್ಮಲ್ಲಿನ ಹೊಂದಾಣಿಕೆ ಕೊರತೆಯೇ ಕಾರಣವಾಗಿದೆ ಎಂದರು.