ಮದ್ದೂರಿನಲ್ಲಿ ನಡೆದ ಬಲಿದಾನ್ ದಿವಸ್ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಅನಂತಕುಮಾರ ಹೆಗಡೆ, ಜಾತ್ಯತೀತರೆಂದರೆ ಅಪ್ಪ-ಅಮ್ಮ ಇಲ್ಲದವರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದೂಗಳು ಸಿಂಹದ ಮರಿಗಳಿದ್ದಂತೆ ಮತ್ತು ಮೈಸೂರಿನಲ್ಲಿ ಟಿಪ್ಪುವಿನ ಸಮಾಧಿ ಮಾಡಲಾಯಿತು ಎಂದು ಅವರು ಪ್ರತಿಪಾದಿಸಿದರು.

ಮಂಡ್ಯ/ಮದ್ದೂರು: ಹಿಂದೂ ಎನ್ನುವುದು ಒಂದು ಸಮುದಾಯ, ಜಾತಿಯ ಹೆಸರಲ್ಲ. ಯಾರು ಕೆಟ್ಟದ್ದನ್ನು, ದುಷ್ಟತೆಯನ್ನು ವಿರೋಧಿಸುವರೋ ಅವರೆಲ್ಲರೂ ಹಿಂದೂಗಳು ಎಂಬುದಾಗಿ ಸಂಸ್ಕೃತದಲ್ಲಿ ಹೇಳಲಾಗಿದೆ. ನನ್ನ ಪ್ರಕಾರ ಅಪ್ಪ- ಅಮ್ಮ ಇಲ್ಲದವರು ಮಾತ್ರ ಜಾತ್ಯತೀತರು ಎಂದು ಮಾಜಿ ಸಂಸದ ಅನಂತಕುಮಾರ ಹೆಗಡೆ ಕಿಡಿಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪ್ಪ- ಅಮ್ಮ ಇಲ್ಲದಿದ್ದರೆ ಜಾತ್ಯತೀತರೆಂದು ಹೇಳಿಕೊಳ್ಳಿ

ಪಟ್ಟಣದಲ್ಲಿ ಸೋಮವಾರ ಹಿಂದೂಪರ ಸಂಘಟನೆಗಳಿಂದ ಆಯೋಜಿಸಿದ್ದ ಬಲಿದಾನ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲವರಿಗೆ ಹಿಂದೂ ಎಂದರೆ ಕಿವಿಗೆ ಕಾದ ಸೀಸ ಹೊಯ್ದಂಗೆ ಆಗುತ್ತದೆ. ಅವರೆಲ್ಲರೂ ಜಾತ್ಯತೀತರು ಎನ್ನುತ್ತಾರೆ. ನನ್ನ ಪ್ರಕಾರ ಅಪ್ಪ-ಅಮ್ಮ ಇಲ್ಲದವರು ಮಾತ್ರ ಜಾತ್ಯತೀತರು. ಜಾತ್ಯತೀತರು ಎಂದೇಳಿಕೊಳ್ಳುವ ದುರ್ಬುದ್ಧಿ ಜೀವಿಗಳೇ ಮೊದಲು ನಿಮ್ಮ ಎದೆ ಮುಟ್ಟಿ ನೋಡಿಕೊಳ್ಳಿ. ನಿಮಗೂ ಅಪ್ಪ- ಅಮ್ಮ ಇದ್ದಾರಲ್ಲವೇ. ನಿಮಗೆ ಅಪ್ಪ- ಅಮ್ಮ ಇಲ್ಲದಿದ್ದರೆ ಜಾತ್ಯತೀತರೆಂದು ಹೇಳಿಕೊಳ್ಳಿ. ಆದರೆ, ನಾನಂತೂ ಜಾತ್ಯತೀತ ಅಲ್ಲ ಎಂದು ನೇರವಾಗಿ ನುಡಿದರು.

ಹಿಂದೂಗಳು ಸಿಂಹದ ಮರಿಗಳು

ರಕ್ತದ ಗುಂಪೇ ಗೊತ್ತಿಲ್ಲದ ಸಮುದಾಯ ನಮ್ಮನ್ನು ಆಳಲು ಆರಂಭಿಸಿದೆ. ಅವರು ರಕ್ತದ ಗುಂಪೇ ಗೊತ್ತಿಲ್ಲದ ನಪುಂಸಕರು. ಅದಕ್ಕೆ ಇತಿಹಾಸವನ್ನು ಓದಬೇಕು. ಹಿಂದೂಗಳೆಂದರೆ ಕುರಿಮಂದೆಯೊಂದಿಗೆ ಬದುಕುತ್ತಿರುವ ಕುರಿಗಳಲ್ಲ. ಹಿಂದೂಗಳು ಸಿಂಹದ ಮರಿಗಳು. ನಮ್ಮದು ಗುಲಾಮಿ ಬದುಕಾಗಿರಲಿಲ್ಲ. ಗೆಲುವಿನ ಬದುಕಾಗಿತ್ತು ಎಂದು ಗಟ್ಟಿ ದನಿಯಲ್ಲಿ ಹೇಳಿದರು.

ಎಲ್ಲೆಲ್ಲಿ ಮುಸಲ್ಮಾನ ಹೆಜ್ಜೆ ಇಟ್ಟಿದ್ದಾರೋ ಅಲ್ಲೆಲ್ಲ ನವಾಬಗಿರಿ ಮಾಡಿದ್ದಾರೆ. ಆದರೆ, ಮೈಸೂರಿನಲ್ಲಿ ಮಾಡಲು ಬಿಟ್ಟಿಲ್ಲ. ಅದಕ್ಕೆ ಕಾರಣ ಇಲ್ಲಿನ ವೀರಮಣ್ಣು. ಇಲ್ಲಿ ಟಿಪ್ಪುವಿನ ಜೊತೆ ಅವನ ಸಮಾಧಿಯನ್ನೂ ಮಾಡಿ ಮುಗಿಸಿದರು. ಅದರ ಹೆಮ್ಮೆ ಮೈಸೂರಿನ ವೀರ ಮಕ್ಕಳಿಗೆ ಸಲ್ಲಬೇಕು ಎಂದು ಹೇಳಿದರು.