ಹಾಸನದಲ್ಲಿ ವರುಣನ ಆರ್ಭಟ : ಬಿಸಿಲೆ ಘಾಟ್ ಸಂಚಾರ ಬಂದ್
ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರಿನಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದ್ದು, ಇತ್ತ ಹಾಸನದಲ್ಲಿಯೂ ಮಳೆ ಹೆಚ್ಚಾಗಿದೆ. ಬಿಸಿಲೆ ಘಾಟ್ ನಲ್ಲಿ ಮರಗಳು ರಸ್ತೆಗೆ ಉರುಳಿದ್ದು, ಸಂಚಾರ ಸ್ಥಗಿತವಾಗಿದೆ.
ಹಾಸನ [ಸೆ.03]: ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಹಾಸನದಲ್ಲಿಯೂ ಕೂಡ ವರುಣ ಅಬ್ಬರಿಸುತ್ತಿದ್ದು, ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ಜಿಲ್ಲೆಯ ಸಕಲೇಶಪುರ ಭಾಗದಲ್ಲೂ ಹೆಚ್ಚಿನ ಮಳೆಯಾಗುತ್ತಿದ್ದು, ಬಿಸಿಲೆ ಘಾಟ್ ನಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗೆ ಉರುಳಿವೆ. ಇದರಿಂದ ಸೋಮವಾರ ರಾತ್ರಿಯಿಂದಲೇ ಬಿಸಿಲೆ ಘಾಟ್ ಸಂಚಾರ ಸ್ಥಗಿತವಾಗಿದೆ.
ಮರ ಬಿದ್ದ ಕಾರಣದಿಂದ ರಸ್ತೆ ಬಂದ್ ಆಗಿದ್ದು ವಾಹನಗಳು ಸಾಲು ಸಾಲಾಗಿ ನಿಂತಿವೆ. ಬಿಸಿಲೆ ಘಾಟ್ ಮೂಲಕ ಮಂಗಳೂರು, ಸುಬ್ರಮಣ್ಯಕ್ಕೆ ತೆರಳುವ ಎಲ್ಲಾ ವಾಹನಗಳು ಕೂಡ ರಸ್ತೆಯಲ್ಲೇ ನಿಂತಿವೆ. ಇದರಿಂದ ರಾತ್ರಿ ಪೂರ್ತಿ ರಸ್ತೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ಎದುರಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ ಆಗಸ್ಟ್ ತಿಂಗಳಲ್ಲಿಯೂ ಕೂಡ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ನಿರ್ಮಾಣವಾದ ಪ್ರವಾಹ ಪರಿಸ್ಥಿತಿಯಿಂದ ಜನರು ತತ್ತರಿಸಿದ್ದರು. ಇದೀಗ ಮತ್ತೆ ಮಳೆಯು ಅಬ್ಬರಿಸಲಾರಂಭಿಸಿದೆ.