ಬೈಕ್‌ಗೆ ಟ್ರ್ಯಾಕ್ಟರ್‌ ಡಿಕ್ಕಿ; ಇಬ್ಬರ ಸಾವು|ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿ ನಡೆದ ಘಟನೆ| ರೊಚ್ಚಿಗೆದ್ದ ಸ್ಥಳೀಯರಿಂದ ಟ್ರ್ಯಾಕ್ಟರ್‌ಗೆ ಬೆಂಕಿ| ಜನರ ನಿಯಂತ್ರಿಸಲು ಪೊಲೀಸರ ಲಘು ಲಾಠಿ ಪ್ರಹಾರ| ಪೊಲೀಸರತ್ತ ಕಲ್ಲು ಬೀಸಿದ ಸ್ಥಳೀಯರು|

ಹೂವಿನಹಡಗಲಿ[ಡಿ.16]: ಪಟ್ಟಣ ಹೊರ ವಲಯದಲ್ಲಿ ಭಾನುವಾರ ಸಂಜೆ ಜರುಗಿದ ಕಬ್ಬಿನ ಟ್ರ್ಯಾಕ್ಟರ್‌ ಹಾಗೂ ಬೈಕ್‌ ಅಪಘಾತದಲ್ಲಿ ತಾಯಿ ಹಾಗೂ ಮಗು ಮೃತಪಟ್ಟಿದ್ದು, ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ನಾಲ್ಕು ವರ್ಷದ ನಿರಂಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ತಾಯಿ ಶ್ವೇತಾ (30) ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಗಳ ಗ್ರಾಮದ ಶಿಕ್ಷಕ ಅರವಿಂದ ಅವರು ಪತ್ನಿ-ಮಗು ಜೊತೆ ಮದಲಗಟ್ಟೆ ಆಂಜಿನೇಯಸ್ವಾಮಿ ರಥೋತ್ಸವಕ್ಕೆ ತೆರಳುತ್ತಿದ್ದರು. ಬೈಪಾಸ್‌ ರಸ್ತೆಯಲ್ಲಿ ಹಿಂದಿನಿಂದ ಬಂದ ಟ್ರ್ಯಾಕ್ಟರ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಮಗುವಿನ ಮೇಲೆ ಟ್ರ್ಯಾಕ್ಟರ್‌ ಚಕ್ರ ಹಾದು ಹೋಗಿದ್ದು ಸ್ಥಳದಲ್ಲಿಯೇ ಮಗು ಮೃತಪಟ್ಟಿದೆ. ಶಿಕ್ಷಕ ಅರವಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರ್ಯಾಕ್ಟರ್‌ ಚಾಲಕ ಪರಾರಿಯಾಗಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ರೊಚ್ಚಿಗೆದ್ದು, ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ್ದಾರೆ. ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತು. ರೊಚ್ಚಿಗೆದ್ದ ನಾಗರಿಕರನ್ನು ನಿಯಂತ್ರಕ್ಕೆ ತರಲು ಪೊಲೀಸರು ಹರಸಾಹಸ ಮಾಡಿದರು. ಈ ವೇಳೆ ಲಘು ಲಾಠಿ ಪ್ರಹಾರ ಕೂಡ ನಡೆಯಿತು. ಇದೇ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು ಪಿಎಸ್‌ಐ ಹಾಗೂ ಒಬ್ಬ ಪೊಲೀಸ್‌ ಸಿಬ್ಬಂದಿಗೆ ಗಾಯವಾಗಿದೆ.