Asianet Suvarna News Asianet Suvarna News

ನಂದಿಬೆಟ್ಟದ ರೋಪ್‌ ವೇಗೆ ಈ ತಿಂಗಳಲ್ಲಿ ಭೂಮಿಪೂಜೆ; ಸಚಿವ ಸುಧಾಕರ್

ಇದೇ ತಿಂಗಳಿನಲ್ಲಿ ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸ್ಯೋದ್ಯಮ ಇಲಾಖೆ ವತಿಯಿಂದ ಮಂಜೂರು ಆಗಿರುವ ರೋಪ್‌ ವೇ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಡಾ.ಕೆ.ಸುಧಾಕರ್‌ ತಿಳಿಸಿದರು.

Bhumi Puja for Nandibetta Ropeway in this month says Minister  Sudhakar at chikkaballaur rav
Author
First Published Feb 4, 2023, 6:33 AM IST

ಚಿಕ್ಕಬಳ್ಳಾಪುರ (ಫೆ.4) : ಇದೇ ತಿಂಗಳಿನಲ್ಲಿ ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸ್ಯೋದ್ಯಮ ಇಲಾಖೆ ವತಿಯಿಂದ ಮಂಜೂರು ಆಗಿರುವ ರೋಪ್‌ ವೇ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಡಾ.ಕೆ.ಸುಧಾಕರ್‌ ತಿಳಿಸಿದರು.

ತಾಲೂಕಿನ ನÜಂದಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, 85 ಕೋಟಿ ವೆಚ್ಚದಲ್ಲಿ ನಂದಿಬೆಟ್ಟಕ್ಕೆ ರೋಪ್‌ ವೇ ನಿರ್ಮಾಣಕ್ಕೆ ಟೆಂಡರ್‌ ಆಗಿದ್ದು, ರೋಪ್‌ ವೇ ನಿರ್ಮಾಣದ ನಂತರ ಈ ಭಾಗದ ಭೂಮಿ ಬೆಲೆ ಗಗನಕ್ಕೆ ಏರಲಿದೆ. ಹಾಗಾಗಿ ರೈತರು ಭೂಮಿ ಮಾರಾಟ ಮಾಡಬಾರದೆಂದು ಸಚಿವಸ ಸುಧಾಕರ್‌ ಮನವಿ ಮಾಡಿದರು.

Chikkaballapur: ಅಮೃತ ಕಾಲದಲ್ಲಿ ಸರ್ವಸ್ಪರ್ಶಿ ಬಜೆಟ್‌: ಸಚಿವ ಸುಧಾಕರ್‌

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರು ಬಿಜೆಪಿ ಸಿದ್ಧಾತ, ಸರ್ಕಾರದ ಆಡಳಿತ ವೈಖರಿ ಮತ್ತು ತಮ್ಮ ಹತ್ತು ವರ್ಷಗಳ ಅಭಿವೃದ್ಧಿ ಕಂಡು ಬಿಜೆಪಿ ಸೇರುತ್ತಿದ್ದಾರೆ, ಪೋಶೆಟ್ಟಿಹಳ್ಳಿ ಗ್ರಾಪಂನ ಗುಂಗಿರ್ಲಹಳ್ಳಿ ಮತ್ತು ನಂದಿ ಹೋಬಳಿಗಳಿಂದ ಹೆಚ್ಚಿನ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ಸೇರುತ್ತಿದ್ದು, ಪರಿವರ್ತನೆ ನಮ್ಮ ಕಡೆ ಆಗುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ವೈಟ್‌ ವಾಶ್‌ ಆಗುವ ದಿನಗಳು ಸಮೀಪಿಸಿದೆ ಎಂದರು.

369 ನಿವೇಶನ ಸಿದ್ಧ :

ನಂದಿ ಗ್ರಾಪಂ ವ್ಯಾಪ್ತಿಯಲ್ಲಿ ಭೂಮಿ ತುಂಬಾ ದುಬಾರಿಯಾಗಿದ್ದು, ಒಂದು ನಿವೇಶನದ ಬೆಲೆ 15 ಲಕ್ಷಕ್ಕೂ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಜಮೀನು ಗುರ್ತಿಸಿ 369 ನಿವೇಶನ ಸಿದ್ಧಪಡಿಸಿದ ಎಲ್ಲ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಸಚಿವರು, ಕಳೆದ ಮೂರು ವರ್ಷದಿಂದ ಅಧಿಕಾರಿಗಳು ಶ್ರಮಿಸಿ ಈ ನಿವೇಶನಗಳನ್ನು ಗುರುತಿಸಿದ್ದಾರೆ ಎಂದರು.

ಫೆ.18ಕ್ಕೆ ನಂದಿಯಲ್ಲಿ ಶಿವೋತ್ಸವ:

ಫೆ.18ರಂದು ಶಿವರಾತ್ರಿ ಹಬ್ಬವಿದ್ದು, ಅದೇ ದಿನ ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯದಲ್ಲಿ ಶಿವೋತ್ಸವ ಆಯೋಜಿಸಲಾಗುವುದು . ಮುಂದಿನ ಐದು ವರ್ಷಗಳು ನಂದಿ ಭಾಗದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ. ಹೊಸ ಬೆಂಗಳೂರು ನಮ್ಮ ಭಾಗದಲ್ಲಿ ಸೃಷ್ಟಿಯಾಗಲಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ತಯಾರಿಗೆ ಸಿದ್ಧರಾಗುವಂತೆ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಈ ಸಂದರ್ಭದಲ್ಲಿ ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ್‌, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಹಾಪ್‌ಕಾಮ್ಸ್‌ ಮಾಜಿ ಅಧ್ಯಕ್ಷ ಜಿ.ಆರ್‌.ಶ್ರೀನಿವಾಸ್‌ ಸೇರಿದಂತೆ ಮತ್ತಿತರರು ಇದ್ದರು.

ಕ್ಷೇತ್ರಕ್ಕೆ ಪ್ರಧಾನಿ ಮೋದಿ:

ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟನೆಗೆ ಸಿದ್ಧವಾಗಿದ್ದು, ಉದ್ಘಾಟನೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಪ್ರಧಾನಿ ನರೇಂದ್ರಮೋದಿ ಅವರೇ ವೈದ್ಯಕೀಯ ಕಾಲೇಜು ಉದ್ಘಾಟಿಸಲಿದ್ದು, ಫೆಬ್ರವರಿ ಕೊನೆಯಲ್ಲಿ ಅಥವಾ ಮಾಚ್‌ರ್‍ ಮೊದಲ ವಾರದಲ್ಲಿ ಕಾರ್ಯಕ್ರಮ ನಿಗದಿಯಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 37 ಸಾವಿರ ರೈತರಿಗಿಲ್ಲ ಪಿಎಂ ಕಿಸಾನ್‌ ನಿಧಿ!

ಕಾಂಗ್ರೆಸ್‌ ವಿರುದ್ಧ ಸುಧಾಕರ್‌ ಟೀಕೆ

160 ಸ್ಥಾನ ಗೆಲ್ಲುವ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಾಪ ಉಳಿದ 64 ಸ್ಥಾನ ಯಾಕೆ, ಅದನ್ನೂ ಅವರನ್ನೇ ಪಡೆಯಲು ಹೇಳಿ, ವಿರೋಧಪಕ್ಷವೇ ಬೇಡ ಎಂದು ವ್ಯಂಗ್ಯ ಮಾಡಿದರು. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಪಕ್ಷ ಎಂದು ಕಾಂಗ್ರೆಸ್‌ ನವರು ಬಿಂಬಿಸುತ್ತಿದ್ದಾರೆ. ಆದರೆ 53 ಅಲ್ಪಸಂಖ್ಯಾತ ಕುಟುಂಬಗಳಿಗೆ ಉಚಿತ ನಿವೇಶನ ನೀಡಲಾಗುತ್ತಿದೆ. ಅದೇ ರೀತಿಯಲ್ಲಿ 162 ಪರಿಶಿಷ್ಟಜಾತಿಯ ಕುಟುಂಬಗಳಿಗೆ ನಿವೇಶನ ನೀಡುತ್ತಿದ್ದು, ಸಾಮಾನ್ಯರಿಗೆ ಕೇವಲ 82 ನಿವೇಶನ ಮಾತ್ರ ನೀಡಲಾಗಿದೆ ಎಂದರು. ಸಾಮಾಜಿಕ ನ್ಯಾಯ, ಸಮಾನತೆ ಎಂಬುದನ್ನು ಕಾಂಗ್ರೆಸ್‌ ನವರು ಕೇವಲ ಭಾಷಣದಲ್ಲಿ ಮಾತ್ರ ಮಾತನಾಡುತ್ತಾರೆ. ಆದರೆ ನಾವು ಬಸವಣ್ಣನವರ ತತ್ವ ಪಾಲಿಸಿ ಎಲ್ಲರಿಗೂ ಸಮಪಾಲು ನೀಡುತ್ತೇವೆ. ಅಲ್ಪಸಂಖ್ಯಾತರು ನಿಜವಾಗಲೂ ಅವರ ಬಗ್ಗೆ ಕಾಳಜಿ ವಹಿಸುವವರು ಯಾರು ಎಂಬುದನ್ನು ಆಲೋಚನೆ ಮಾಡಬೇಕು ಎಂದು ಸಚಿವ ಸುಧಾಕರ್‌ ಹೇಳಿದರು.

Follow Us:
Download App:
  • android
  • ios