ಪ್ಲೇಗ್, ದಡಾರ, ಸಿಡುಮಹಾಮಾರಿಯಂತಹ ಮಾರಣಾಂತಿಕ ರೋಗಗಳು ಹರಡುತ್ತಿದ್ದು, ಇದರ ನಿವಾರಣೆಗಾಗಿ ಭೂತ ಭೈರವಿ ತಂತ್ರ ಯಾಗ ತುಮಕೂರಿನಲ್ಲಿ ನಡೆದಿದೆ. ಈ ಯಾಗ ದೇಶದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವುದು ವಿಶೇಷ.

ತುಮಕೂರು(ಫೆ.08): ತಿಪಟೂರು ತಾಲೂಕಿನ ರಂಗನಹಳ್ಳಿ ಸುಕ್ಷೇತ್ರದಲ್ಲಿ ಶ್ರೀ ಶನೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಭೂತ ಭೈರವಿಯಾಗ ಮಾಡುವ ಮೂಲಕ ದೇಶದಲ್ಲಿ ಕಾಡುತ್ತಿರುವ ಕರೋನಾ ಮಾರಣಾಂತಿಕ ರೋಗ ನಿವಾರಣೆಗೆ ದುರ್ಗಾದೇವಿಗೆ ಮೊರೆಯಿಡಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಲೋಕಕಲ್ಯಾಣ, ಸಕಲ ದಾರಿದ್ರ್ಯ, ದುಃಖ, ರೋಗ ನಿವಾರಣೆ, ಧನ ಧಾನ್ಯ ಸಮೃದ್ಧಿಗಾಗಿ ಮತ್ತು ಕರೋನಾ ವೈರಸ್‌ ನಿವಾರಣೆಗಾಗಿ ದೇವರ ಮೊರೆ ಹೋಗಲಾಯಿತು. ಕ್ಷೇತ್ರದಲ್ಲಿ ನಡೆಯುತ್ತಿರುವ ಯಾಗಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಯಾಗಕ್ಕೆ ಪೂರ್ಣಾಹುತಿ ಅರ್ಪಿಸಿ ದುರ್ಗಾದೀಪ ಹಾಗೂ ಶ್ರೀ ಶನೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು.

ಕರಾವಳಿಗೆ ಕೊರೋನಾ ಭೀತಿ, ಉಡುಪಿಯಲ್ಲಿ ಶಂಕಿತ ಪ್ರಕರಣಗಳು ಪತ್ತೆ

ಜನರ ನೆಮ್ಮದಿ ಹಾಳು:

ಯಶ್ವಂತ್‌ಶಾಸ್ತ್ರಿ ಗುರೂಜಿ ಮಾತನಾಡಿ, ಇಡಿ ವಿಶ್ವವನ್ನೇ ಮಹಾಮಾರಿಯಂತೆ ಕಾಡುತ್ತಿರುವ ಕರೋನ ವೈರಸ್‌ ಭಾರತಕ್ಕೆ ಕಂಟಕವಾಗಿದ್ದು, ಇತ್ತೀಚಿನ ಎಚ್‌1ಎನ್‌1, ಡೆಂಘೀ, ಕೊರೋನಾ ವೈರಸ್‌ಗಳು ಜನರಲ್ಲಿ ಬಾರಿ ಆತಂಕವನ್ನುಂಟು ಮಾಡುತ್ತಿದ್ದು, ಮಾರಣಾಂತಿಕ ಹೆಮ್ಮಾರಿಯಾಗಿ ಕಾಡುತ್ತಿವೆ. ನಾಡಿನಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಜನರ ನೆಮ್ಮದಿ ಹಾಳಾಗುತ್ತಿದೆ. ಜನರು ಶಾಂತಿ, ನೆಮ್ಮದಿ, ಸುಭೀಕ್ಷೆಗೋಸ್ಕರ ಭೂತ ಭೈರವಿ ಯಾಗದ ಮೂಲಕ ದುರ್ಗಾದೀಪ ನಮಸ್ಕಾರ ಹಾಗೂ ಶಿವ ರುದ್ರಯಾಗ ಏಕೋತ್ತರ ಕುಂಭಾಭಿಷೇಕ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಕೊರೋನಾ ವೈರಸ್‌ ಭೀತಿ: ನಿಶ್ಚಯಗೊಂಡಿದ್ದ ಮದುವೆ ರದ್ದು

ಭೂತಭೈರವಿ ಯಾಗ ದೇಶದಲ್ಲೇ ಪ್ರಥಮ:

ಭೂತ ಭೈರವಿ ಯಾಗ ನಡೆಯುತ್ತಿರುವುದು ದೇಶದಲ್ಲಿ ಪ್ರಪ್ರಥಮವಾಗಿದ್ದು, ಸಾಂಕ್ರಾಮಿಕ ರೋಗದ ಹೆಮ್ಮಾರಿ ದೂರವಾಗಿ ಶಾಂತಿ, ನೆಮ್ಮದಿ ಲಭಿಸಲಿ ಎನ್ನುವು ಉದ್ದೇಶದಿಂದ ಯಾಗ ನಡೆಯುತ್ತಿದೆ. ಮಾಟ, ಮಂತ್ರ, ಪೀಡೆ, ಪಿಶಾಚಿಗಳು, ಸಕಲ ಅನಿಷ್ಠ ನಿವಾರಣೆ, ಸಕಲ ರೋಗಗಳ ಮುಕ್ತಿಗಾಗಿ ನಡೆಯುತ್ತಿದ್ದು, ಈ ಭೂತ ಭೈರವಿ ಯಾಗದ ಫಲಗಳು ಶೀಘ್ರವಾಗಿ ಪ್ರಾಪ್ತಿಯಾಗುತ್ತದೆ. ನಮ್ಮ ಹಿಂದಿನ ಕಾಲದಲ್ಲಿ ಪ್ಲೇಗ್‌, ಕಾಲರ, ದಡಾರ ನಂತರ ಸಾಂಕ್ರಾಮಿಕ ರೋಗಗಳು ಆವರಿಸಿದಾಗ ನಮ್ಮ ಪೂರ್ವಜರು ದೇವರ ಮೊರೆ ಹೋಗುವ ಮೂಲಕ ರೋಗಗಳಿಂದ ಮುಕ್ತಿ ಪಡೆಯುತ್ತಿದ್ದರು. ಅದೇರೀತಿ ಇತ್ತೀಚಿನ ದಿನಗಳಲ್ಲಿ ಅನೇಕ ಮಾರಣಾಂತಿಕ ರೋಗಗಳು ದೇಶದಲ್ಲಿ ಕಾಡುತ್ತಿದ್ದು, ಇಂತಹ ಸಾಂಕ್ರಮಿಕ ರೋಗಗಳ ಬಿಡುಗಡೆ ದೈವದ ಪ್ರೇರಣೆಯಿದ ಮಾತ್ರ ಸಾಧ್ಯ ಎಂದರು.

ಎಂಎಲ್ಸಿ ಬೆಮೆಲ್‌ ಕಾಂತರಾಜು, ಜಿಪಂ ಸದಸ್ಯ ಜಿ.ನಾರಾಯಣ್‌, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಚಿದಾನಂದ್‌, ದೇವಾಲಯದ ಮುಖ್ಯಸ್ಥರಾದ ನಾಗರಾಜು, ಮಂಜುನಾಥ್‌, ನಂಜಪ್ಪ, ಯದುಕುಮಾರ್‌, ದೊಡ್ಡೆಗೌಡ ಸೇರಿದಂತೆ ಸಾವಿರಾರು ಭಕ್ತರು ಪೂಜೆ ಸಲ್ಲಿಸಿದರು.