ಕೊರೋನಾ ಸೋಂಕು ವ್ಯಾಪಕ ಹಿನ್ನೆಲೆ ಲಾಕ್ಡೌನ್ ಉತ್ತಮ: ಭವಾನಿ ರೇವಣ್ಣ
ಲಾಕ್ಡೌನ್ ಸಡಿಲಗೊಳಿಸಿದ ನಂತರ ಒಂದು ತಿಂಗಳು ಜನರನ್ನು ನಿಯಂತ್ರಿಸಿದರೆ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಗೊಳ್ಳುತ್ತಿತ್ತು. ಆದರೆ ಈಗ ಕೊರೋನಾ ದಿನೇ ದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಲಾಕ್ ಡೌನ್ ಮಾಡುವುದು ಉತ್ತಮ| ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ|
ಹಾಸನ(ಜೂ.28): ದಿನೇ ದಿನೇ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಮಾಡುವುದು ಉತ್ತಮ ಎಂದು ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದ್ದಾರೆ.
ಶನಿವಾರ ನಗರದ ಶ್ರೀಗಂಧದಕೋಠಿಯಲ್ಲಿ ಇರುವ ಸರ್ಕಾರಿ ಮಹಿಳಾ ಪ್ರೌಢಶಾಲೆಯ ಪರೀಕ್ಷಾ ಕೊಠಡಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಲಾಕ್ಡೌನ್ ಸಡಿಲಗೊಳಿಸಿದ ನಂತರ ಒಂದು ತಿಂಗಳು ಜನರನ್ನು ನಿಯಂತ್ರಿಸಿದರೆ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಗೊಳ್ಳುತ್ತಿತ್ತು. ಆದರೆ ಈಗ ಕೊರೋನಾ ದಿನೇ ದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಲಾಕ್ ಡೌನ್ ಮಾಡುವುದು ಉತ್ತಮ ಎಂದರು. ಜಿಲ್ಲೆಯಲ್ಲಿ ಮೊದಲು ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ ಆಗಿರಲಿಲ್ಲ. ಆದರೆ ಇಂದು ಹೊರ ರಾಜ್ಯದಿಂದ ಬಂದ ಮೇಲೆ ಪ್ರಕರಣಗಳು ದಾಖಲಾಗಿವೆ. ಇನ್ನು ಸ್ಥಳೀಯವಾಗಿ ಯಾರಿಗೂ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಲೂಟಿಕೋರರ ಬಿಜೆಪಿ ಸರ್ಕಾರ ಇದೆ: ಮಾಜಿ ಸಚಿವ ಎಚ್.ಡಿ.ರೇವಣ್ಣ
ಮಕ್ಕಳ ಮೇಲೆ ಒತ್ತಡ ಹೇರಲು ಆಗಲ್ಲ
ರಾಜ್ಯಾದ್ಯಂತ ಎಸ್ಸೆಎಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಹಿಂದೆ ನಡೆದ ಇಂಗ್ಲಿಷ್ ಪರೀಕ್ಷೆಯಲ್ಲಿ ಹೆದರದೇ ಶೇ. 98.3 ರಷ್ಟುವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಕ್ಕಳು ಹೇಗೆ ತಯಾರಿ ನಡೆಸಿದ್ದಾರೆ ಎಂಬುದರ ಬಗ್ಗೆ ಶಾಲೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದಿದ್ದು, ಇಂದು ಹಾಸನ ಪರೀಕ್ಷಾ ಸ್ಥಳಗಳಿಗೆ ಭೇಟಿ ನೀಡಿರುವುದಾಗಿ ಹೇಳಿದರು.
2018-19 ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿತ್ತು. ಈ ಬಾರಿ ಶಿಕ್ಷಣ ಸಿಬ್ಬಂದಿ ಹಾಗೂ ಪೋಷಕರ ಸಭೆ ನಡೆಸಲಾಗಿತ್ತು. ಆದರೆ ಈ ಬಾರಿ ಕೊರೋನಾ ಮಹಾಮಾರಿ ಬಂದಿರುವುದರಿಂದ ಜಿಲ್ಲೆಗೆ ಪ್ರಥಮ ಸ್ಥಾನ ತನ್ನಿ ಎಂದು ಮಕ್ಕಳ ಮೇಲೆ ಒತ್ತಡ ಏರಲು ಆಗುವುದಿಲ್ಲ ಎಂದರು. ಜಿಲ್ಲೆಯ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿವವರೆಗೂ ವಿದ್ಯಾರ್ಥಿಗಳಿಗೆ ಕೊರೋನಾದಿಂದ ಯಾವುದೇ ತೊಂದರೆಯಾಗದಂತೆ ದೇವರಲ್ಲಿ ಪ್ರಾರ್ಥಿಸಲಾಗುವುದು. ಈ ಬಾರಿಯೂ ಹಾಸನಕ್ಕೆ ರಾಜ್ಯಕ್ಕೆ ಪ್ರಥಮ ಸ್ಥಾನ ಪರೀಕ್ಷೆಯಲ್ಲಿ ಬರಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದರು.
ಅಸಮಾಧಾನ
ಮೊಸಳೆ ಹೊಸಳ್ಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಳಾಂತರ ಮಾಡುವ ಸರ್ಕಾರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮಾಜಿ ಸಚಿವ ಎಚ್.ಡಿ. ರೇವಣ್ಣನವರು ದೊಡ್ಡ ಮಟ್ಟದ ಹೋರಾಟ ನಡೆಸಿ ಕಾಲೇಜು ಉಳಿಸಿಕೊಳ್ಳಲಾಗುವುದು. ನಾಡಿದ್ದು ಸಿಎಂ ಮನೆ ಮುಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಧರಣಿ ಕೂರುವ ಬಗ್ಗೆ ನನಗೆ ಪೂರ್ಣ ಮಾಹಿತಿ ಇರುವುದಿಲ್ಲ ಎಂದು ಹೇಳಿದರು.