ಶೋಭಾ ಯಾತ್ರೆ ತೆರಳಿ ಕೊನೆಯಲ್ಲಿ ಗಾವಾನ್‌ ಮದರಸಾದಲ್ಲಿ ಪೂಜೆ ಸಲ್ಲಿಸಿ ರಾತ್ರಿ ಒಳ ಕೋಟೆ ದೇವಸ್ಥಾನ ಪ್ರವೇಶಿಸುವದು ವಾಡಿಕೆ. ಆದರೆ, ಈ ವಿಷಯವನ್ನು ಅನಗತ್ಯವಾಗಿ ವಿವಾದಕ್ಕೆ ಎಳೆದು ಕೋಮು ಸೌಹಾರ್ದ ಕದಡುವ ಯತ್ನ ನಡೆಸಲಾಗುತ್ತಿದೆ: ರಾಮಕೃಷ್ಣ ಸಾಳೆ 

ಬೀದರ್(ಅ.08): ಬೀದರ್‌ನ ಒಳಕೋಟೆಯ ಭವಾನಿ ಮಂದಿರದ ದೇವಿ ಜಾತ್ರೆಯನ್ನು ದಸರಾ ಸಂದರ್ಭದಲ್ಲಿ ವಿವಿಧ ಮಾರ್ಗಗಳಲ್ಲಿ ಮೆರವಣಿಗೆ ಮೂಲಕ ಶೋಭಾ ಯಾತ್ರೆ ತೆರಳಿ ಕೊನೆಯಲ್ಲಿ ಗಾವಾನ್‌ ಮದರಸಾದಲ್ಲಿ ಪೂಜೆ ಸಲ್ಲಿಸಿ ರಾತ್ರಿ ಒಳ ಕೋಟೆ ದೇವಸ್ಥಾನ ಪ್ರವೇಶಿಸುವದು ವಾಡಿಕೆ. ಆದರೆ, ಈ ವಿಷಯವನ್ನು ಅನಗತ್ಯವಾಗಿ ವಿವಾದಕ್ಕೆ ಎಳೆದು ಕೋಮು ಸೌಹಾರ್ದ ಕದಡುವ ಯತ್ನ ನಡೆಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಉತ್ತರ ಪ್ರಾಂತದ ಕಾರ್ಯಕಾರಣಿ ಸದಸ್ಯ ರಾಮಕೃಷ್ಣ ಸಾಳೆ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದು ನಮ್ಮ ತಾತ, ಮುತ್ತಾತನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಹೀಗಾಗಿ ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಾವಾನ ಮದರಸಾದಲ್ಲಿ ಪೂಜೆಗಾಗಿ ಕಾಯುತಿದ್ದಾಗ, ಅದರ ಹೊರಗಡೆಯ ಗೇಟ್‌ ಬೀಗ ಹಾಕಲಾಗಿತ್ತು. ಆಗ ಪೊಲೀಸರು ಪುರಾತತ್ವ ಇಲಾಖೆಯ ನೌಕರರನ್ನು ಕರೆಸಿ ಸದರಿ ಬೀಗವನ್ನು ತೆಗೆಸಿ ಭಕ್ತರಿಗೆ ಮದರಸಾದಲ್ಲಿ ಪ್ರವೇಶಿಸಿ ಪೂಜೆ ನೆರವೇರಿಸಲು ಅನುವು ಮಾಡಿಕೊಟ್ಟರು. 10 ರಿಂದ 12 ಜನ ಭಕ್ತರು ಅಲ್ಲಿನ ಪೂಜೆ ನೆರವೇರಿಸಿ ತಿರುಗಿ ಬಂದರು. ಆ ಸಮಯದಲ್ಲಿ ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುತ್ತಾರೆ. ಅದರಲ್ಲಿ ಹಿಂದುಗಳು ಒತ್ತಾಯ ಪೂರ್ವಕವಾಗಿ ಒಳಸೇರಿ, ಪೂಜೆ ಮಾಡಿ ಗದ್ದಲ ಮಾಡಿದ್ದಾರೆ, ಘೋಷಣೆ ಕೂಗಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸಿರುತ್ತಾರೆ. ಇದರಿಂದ ಜನರಲ್ಲಿ ಹಿಂದೂ ಮುಸ್ಲಿಂ ಬಾಂಧವರ ಶಾಂತಿಗೆ ಭಂಗ ತರುವಂತೆ ದುರುದ್ದೇಶದಿಂದ ಮಾಡಿರುತ್ತಾರೆ ಎಂದು ಆರೋಪಿಸಿದ್ದಾರೆ.

ಆರ್‌ಎಸ್‌ಎಸ್‌ ಬಗ್ಗೆ ಮಾತಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ: ವಿಜಯೇಂದ್ರ

ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯ ಅನುಮತಿ ಪಡೆದೇ ಈ ಪೂಜೆ ಹಾಗೂ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಪೂರ್ಣ ಕಾರ್ಯಕ್ರಮವು ಪೊಲೀಸ್‌ ಬೆಂಗಾವಲಲ್ಲಿಯೇ ನೆರವೇರಿರುತ್ತದೆ. ಹೀಗಿರುವಲ್ಲಿ ಭಕ್ತಾದಿಗಳಿಂದ ಯಾವುದೇ ತರಹದ ಅಸಂವಿಧಾನಿಕ, ಇತರೆ ಧರ್ಮದವರ ಭಾವನೆಗೆ ಧಕ್ಕೆ ತರುವಂತಹ ಯಾವುದೇ ಕೃತ್ಯ ನಡೆದಿಲ್ಲ. ಇದಕ್ಕೆ ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾಡಳಿತವೇ ಸಾಕ್ಷಿಯಾಗಿರುತ್ತದೆ.
ಹೀಗಾಗಿ ಬೀದರ್‌ನ ಎಲ್ಲಾ ಸಮುದಾಯದ ಸಮಸ್ತ ಬಾಂಧವರು ಸುಳ್ಳು ಸುದ್ದಿಯತ್ತ ಗಮನಕೊಡದೇ ಬಾಂಧವ್ಯವನ್ನು ಮುಂದುವರಿಸಿ ಶಾಂತಿ ಕಾಪಾಡಬೇಕೆಂದು ವಿಶ್ವ ಹಿಂದು ಪರಿಷತ್‌ ಮನವಿಸುತ್ತದೆ ಎಂದು ರಾಮಕೃಷ್ಣ ಸಾಳೆ ಕೋರಿದ್ದಾರೆ.